ಮುಂಬೈ: ದೇಶದ ಶ್ರೀಮಂತ ನಗರಪಾಲಿಕೆ ಖ್ಯಾತಿಯ ಬೃಹನ್ಮುಂಬೈ ಪಾಲಿಕೆ ಮೇಯರ್ ಆಗಿ ಬಿಜೆಪಿಯ ರಿತು ತಾವ್ಡೆ ಮತ್ತು ಉಪಮಯೇರ್ ಆಗಿ ಶಿವಸೇನೆ (ಶಿಂಧೆ ಬಣ)ಯ ಸಂಜಯ್ ಶಂಕರ್ ಘಡಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮೊದಲ ಬಾರಿಗೆ ಬಿಜೆಪಿಗೆ ಮೇಯರ್ ಸ್ಥಾನ ಸಿಕ್ಕಿದ ದಾಖಲೆ ನಿರ್ಮಾಣವಾಗಿದ್ದರೆ ಮತ್ತೊಂದೆಡೆ ಎರಡೂವರೆ ದಶಕಗಳಲ್ಲೇ ಮೊದಲ ಬಾರಿಗೆ ಪಾಲಿಕೆ ಅಧ್ಯಕ್ಷ ಹುದ್ದೆ ಉದ್ಧವ್ ಬಣದ ಶಿವಸೇನೆಯ ಕೈತಪ್ಪಿದಂತಾಗಿದೆ.
ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಮೇಯರ್ ಮತ್ತು ಉಪಮೇಯರ್ ಹುದ್ದೆಗೆ ಬಿಜೆಪಿ ಮತ್ತು ಶಿಂಧೆ ಬಣದ ಶಿವಸೇನೆಯಿಂದ ನಾಮಪತ್ರ ಸಲ್ಲಿಕೆಯಾದ ಕಾರಣ ಎರಡೂ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಜ.28ರಂದು ನಡೆದ ಬಿಎಂಸಿ ಚುನಾವಣೆಯಲ್ಲಿ 228 ಸೀಟುಗಳಲ್ಲಿ ಬಿಜೆಪಿ-ಶಿವಸೇನೆಯ ಒಕ್ಕೂಟ ಮಹಾಯುತಿಯು 144 ಕ್ಷೇತ್ರಗಳನ್ನು ಬಾಚಿಕೊಂಡು ಬಹುಮತ ಸಾಧಿಸಿತ್ತು. ಇದಾದ ಕೂಡಲೇ ಮೇಯರ್ ಹುದ್ದೆಯನ್ನು 50-50 ಆಧಾರದಲ್ಲಿ ಹಂಚಿಕೊಳ್ಳುವ ಬಗ್ಗೆ ಶಿಂಧೆ ಬಣ ಕೂಡಾ ಪಟ್ಟು ಹಿಡಿದಿದೆ ಎಂದು ವರದಿಗಳು ತಿಳಿಸಿದ್ದವು. ಈ ವರದಿಗಳ ಬೆನ್ನಲ್ಲೇ ಶಿಂಧೆ ಬಣದ ಕಾರ್ಪೊರೇಟರ್ಗಳು ಹೋಟೆಲ್ಗೆ ವರ್ಗಾಯಿಸಲಾಗಿತ್ತು. ಆದರೆ ಬಳಿಕ ಈ ಕುರಿತು ಯಾವುದೇ ಬಹಿರಂಗ ಗೊಂದಲ ಇಲ್ಲದೇ ಉಭಯ ಪಕ್ಷಗಳು ಮೇಯರ್, ಉಪಮೇಯರ್ ಹುದ್ದೆಗೆ ಅಭ್ಯರ್ಥಿಗಳನ್ನು ಹೆಸರಿಸಿ ಆಯ್ಕೆ ಮಾಡಿಕೊಂಡಿವೆ.