ಮತ್ತೆ 79 ವಿಮಾನಕ್ಕೆ ಹುಸಿಬಾಂಬ್‌ ಬೆದರಿಕೆ

KannadaprabhaNewsNetwork |  
Published : Oct 23, 2024, 12:50 AM IST
ವಿಮಾನ ನಿಲ್ದಾಣ | Kannada Prabha

ಸಾರಾಂಶ

ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕುವ ಕುಕೃತ್ಯಗಳು ಮಂಗಳವಾರವೂ ಮುಂದುವರಿದಿವೆ. ಭಾರತದ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 79 ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಸೋಮವಾರ ರಾತ್ರಿಯಿಂದ ಮಂಗಳವಾರ ರಾತ್ರಿವರೆಗೆ ಬಾಂಬ್‌ ಬೆದರಿಕೆ ಸಂದೇಶಗಳನ್ನು ರವಾನಿಸಲಾಗಿದೆ.

ನವದೆಹಲಿ: ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕುವ ಕುಕೃತ್ಯಗಳು ಮಂಗಳವಾರವೂ ಮುಂದುವರಿದಿವೆ. ಭಾರತದ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 79 ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಸೋಮವಾರ ರಾತ್ರಿಯಿಂದ ಮಂಗಳವಾರ ರಾತ್ರಿವರೆಗೆ ಬಾಂಬ್‌ ಬೆದರಿಕೆ ಸಂದೇಶಗಳನ್ನು ರವಾನಿಸಲಾಗಿದೆ. ಇದರೊಂದಿಗೆ ಕಳೆದ 9 ದಿನದಲ್ಲಿ 170 ಬೆದರಿಕೆಗಳು ಬಂದಂತಾಗಿದೆ.

ಇಂಡಿಗೋ (23), ವಿಸ್ತಾರ(21), ಆಕಾಸಾ (12) ಏರ್‌ ಇಂಡಿಯಾ (23) ವಿಮಾನಗಳಿಗೆ ಈ ಸಂದೇಶ ಬಂದಿವೆ. ಇವುಗಳಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಕೂಡ ಸೇರಿವೆ.

ಅಂತಾರಾಷ್ಟ್ರೀಯ ವಿಮಾನಗಳ ಪೈಕಿ ಸೌದಿ ಅರೇಬಿಯಾದ ಜೆಡ್ಡಾಗೆ ಹೋಗುತ್ತಿದ್ದ 3 ಇಂಡಿಗೋ ವಿಮಾನಗಳನ್ನು ಸೌದಿ ಅರೇಬಿಯಾ ಹಾಗೂ ಕತಾರ್‌ನ ವಿಮಾನ ನಿಲ್ದಾಣಗಳತ್ತ ತಿರುಗಿಸಲಾಗಿದೆ. ಎಚ್ಚರಿಕೆ ಲಭಿಸುತ್ತಿದ್ದಂತೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಹಾಗೂ ತಪಾಸಣೆ ನಡೆಸಲಾಗಿದೆ. ಆದರೆ ತಪಾಸಣೆ ವೇಳೆ ಎಲ್ಲ ಬೆದರಿಕೆಗಳು ಹುಸಿ ಎಂದು ದೃಢಪಟ್ಟಿವೆ.

ಬೆದರಿಕೆ ಸಂದೇಶಗಳ ವರ್ಗೀಕರಣ:

ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಸುಳ್ಳು ಬೆದರಿಕೆ ಒಡ್ಡುವವರನ್ನು ಹಾರಾಟ ನಿಷೇಧ ಪಟ್ಟಿಗೆ ಸೇರಿಸಲು ಚಿಂತನೆ ನಡೆಸಿದೆ. ಆದರೆ, ತುಂಬಾ ಬೆದರಿಕೆ ಕರೆಗಳು/ಸಂದೇಶಗಳು ಬರುತ್ತಿರುವ ಕಾರಣ ಬೆದರಿಕೆಗಳ ಗಂಭೀರತೆ ಅರಿಯಲು ಸರ್ಕಾರವು ‘ನಿರ್ದಿಷ್ಟ’ ಹಾಗೂ ‘ನಿರ್ದಿಷ್ಟವಲ್ಲದ’ ಎಂಬ 2 ವರ್ಗೀಕರಣ ಮಾಡಿದೆ.

ಬೆದರಿಕೆ ಸಂದೇಶವು ನಿರ್ದಿಷ್ಟ ಸಂಖ್ಯೆಯ ವಿಮಾನವನ್ನು ಹೊಂದಿದ್ದರೆ, ಅಂತಹ ಹಕ್ಕನ್ನು ‘ನಿರ್ದಿಷ್ಟ’ ಎಂದು ವರ್ಗೀಕರಿಸಲಾಗಿದೆ. ಇನ್ನು ತರ್ಕಬದ್ಧವಾಗಿ ಇರದ ಸಂದೇಶಗಳನ್ನು ‘ನಿರ್ದಿಷ್ಟವಲ್ಲದ ಬೆದರಿಕೆ’ ಎಂದು ಪರಿಗಣಿಸಲಾಗುತ್ತದೆ.

‘ನಿರ್ದಿಷ್ಟ’ ಎಂದು ವರ್ಗೀಕರಿಸಲಾದ ಬೆದರಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ತಪಾಸಣೆ ಮಾಡಲಾಗುತ್ತದೆ. ಆದರೆ ನಿರ್ದಿಷ್ಟವಲ್ಲದ ಬೆದರಿಕೆಗೆ ಅಷ್ಟು ಪ್ರಾಮುಖ್ಯ ನೀಡುವುದನ್ನು ನಿಲ್ಲಿಸಲಾಗುತ್ತದೆ. ಇದರಿಂದ ವಿಮಾನ ಪ್ರಯಾಣಿಕರಿಗೆ ತೊಂದರೆ ತಪ್ಪಲಿದೆ.

==

9 ದಿನದಲ್ಲಿ ವಿಮಾನ ಸಂಸ್ಥೆಗಳಿಗೆ 600 ಕೋಟಿ ರು. ನಷ್ಟ

ಕಳೆದ 9 ದಿನಗಳ ಅವಧಿಯಲ್ಲಿ ವಿಮಾನಗಳಿಗೆ ಕಿಡಿಗೇಡಿಗಳು ಹುಸಿಬಾಂಬ್‌ ಕರೆ ಮಾಡಿರುವುದರಿಂದ 170 ವಿಮಾನಗಳ ಹಾರಾಟಕ್ಕೆ ತೊಂದರೆಯಾಗಿದೆ. ಇದರಿಂದ ವಿಮಾನಯಾನ ಕಂಪನಿಗಳಿಗೆ 600 ಕೋಟಿ ರು. ನಷ್ಟವಾಗಿದೆ ಎಂದು ವಿಮಾನ ಕಂಪನಿಯೊಂದರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ