ಲಖನೌ: ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದ ಮುಖ್ಯಸ್ಥೆ ಮಾಯಾವತಿ, ತಮ್ಮ ಉತ್ತರಾಧಿಕಾರಿಯಾಗಿ ತಮ್ಮ ಸೋದರ ಸಂಬಂಧಿ ಆಕಾಶ್ ಆನಂದ್ ಅವರನ್ನು ಮರು ನೇಮಕ ಮಾಡಿದ್ದಾರೆ. ಆಕಾಶ್ಗೆ ಪಕ್ಷದ ರಾಷ್ಟ್ರೀಯ ಸಮನ್ವಯಕಾರ ಹುದ್ದೆ ನೀಡಿ ಆದೇಶ ಹೊರಡಿಸಲಾಗಿದೆ.
ಭಾನುವಾರ ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ಮರಳಿ ರಾಷ್ಟ್ರೀಯ ಸಮನ್ವಯಕಾರರಾಗಿ ನೇಮಿಸಿದ್ದಾರೆ. ಅವರಿಗೆ ಸಂಪೂರ್ಣ ಪ್ರಬುದ್ಧತೆಯಿಂದ ಕೆಲಸ ಮಾಡುವ ಅವಕಾಶ ನೀಡಲಾಗಿದೆ. ಅವರು ಈ ಹಿಂದೆ ಹೊಂದಿದ್ದ ಎಲ್ಲಾ ಹುದ್ದೆಗಳಲ್ಲೂ ಮುಂದುವರೆಯಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಶೇಷವೆಂದರೆ ಲೋಕಸಭಾ ಚುನಾವಣೆ ನಡೆಯುವ ಹೊತ್ತಿನಲ್ಲೇ ಮೇ 7ರಂದು ಏಕಾಏಕಿ ಆಕಾಶ್ ಅವರನ್ನು ಎಲ್ಲಾ ಹುದ್ದೆಗಳಿಂದ ತೆರವು ಮಾಡಲಾಗಿತ್ತು. ಇದಕ್ಕೆ ಅವರಿನ್ನೂ ಅಪ್ರಬುದ್ಧ ಎಂಬ ಕಾರಣ ನೀಡಲಾಗಿತ್ತು.