- ಪ್ರಸಾದ ವಿತರಣೆ ವೇಳೆ ಏಕಾಏಕಿ ಕುಸಿತ

- 18 ಮಂದಿಗೆ ಗಾಯ । 25 ಮಂದಿ ರಕ್ಷಣೆ

ಪಿಟಿಐ ಛತ್ರಪತಿ ಸಂಭಾಜಿನಗರ

ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಯಶ್ವಾಡಿ ಎಂಬಲ್ಲಿರುವ ಹನುಮಂತ ದೇವಸ್ಥಾನದ ನಿರ್ಮಾಣ ಹಂತದ ಛಾವಣಿ ಕುಸಿದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಘಟಿಸಿದೆ. 25 ಜನರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಸಭಾಮಂಟಪದ ಸ್ಲ್ಯಾಬ್‌ ಕೆಳಗೆ ಮಧ್ಯಾಹ್ನ 3.30ರ ಹೊತ್ತಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಹತ್ತಾರು ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದರು. ಆಗ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದು ಅವರು ಅವಶೇಷದ ಅಡಿ ಸಿಲುಕಿದ್ದಾರೆ. ಈ ದೃಶ್ಯ ಸಿಸಿಟೀವಿಯಲ್ಲಿ ದಾಖಲಾಗಿದೆ.

ಶನಿವಾರವಾದ್ದರಿಂದ ಹನುಮ ದೇವಸ್ಥಾನದಲ್ಲಿ ಜನಸಂದಣಿ ಅಧಿಕವಿತ್ತು. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್‌ ತಂಡಗಳನ್ನು ಕಳಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದು, ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.