ನವದೆಹಲಿ: ದೇಶದಲ್ಲಿ ತಲೆದೋರಿರುವ ಅನಿಲ ಬಿಕ್ಕಟ್ಟು ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೇ, ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರವು ಪಿಎನ್ಜಿ (ಪೈಪ್ ಮೂಲಕ ಅನಿಲ ಪೂರೈಕೆ) ಬಳಕೆಗೆ ಒತ್ತು ನೀಡುತ್ತಿದೆ. ಇದರ ಭಾಗವಾಗಿ, ಅನಿಲ ಪೂರೈಕೆಯ ಪೈಪ್ ಜಾಲವನ್ನು ತ್ವರಿತಗತಿಯಲ್ಲಿ ವಿಸ್ತರಿಸುವ ರಾಜ್ಯಗಳಿಗೆ ಶೇ.10ರಷ್ಟು ಹೆಚ್ಚುವರಿ ವಾಣಿಜ್ಯ ಎಲ್ಪಿಜಿ ನೀಡುವುದಾಗಿ ಘೋಷಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ‘ಎಲ್ಪಿಜಿ ಪೂರೈಕೆಯಲ್ಲಿ ಅಡಚಣೆಯಾಗಿದ್ದರೂ ಪಿಎನ್ಜಿ ಸಪ್ಲೈಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಆದ್ದರಿಂದ ನಗರ ಅನಿಲ ವಿತರಣೆ (ಸಿಜಿಡಿ)ಸೌಲಭ್ಯ ಲಭ್ಯವಿದ್ದಲ್ಲಿ ಎಲ್ಪಿಜಿ ಬಳಕೆದಾರರು ಅದರ ಬಳಕೆಯನ್ನು ಆರಂಭಿಸಿ’ ಎಂದು ಕರೆ ನೀಡಿದ್ದಾರೆ. ಜತೆಗೆ, ‘ಪೈಪ್ ಅಳವಡಿಕೆಗೆ ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ತಕ್ಷಣವೇ ಅನುಮೋದಿಸಲಾಗುವುದು ಹಾಗೂ ಹೊಸದಾಗಿ ಸಲ್ಲಿಸುವ ಅರ್ಜಿಗಳಿಗೆ 24 ತಾಸುಗಳೊಳಗೆ ಅನುಮೋದನೆ ನೀಡಲಾಗುವುದು. ಜತೆಗೆ ಆ ರಾಜ್ಯಗಳಿಗೆ ಬಹುಮಾನವಾಗಿ ಸದ್ಯಕ್ಕಿಂತ ಶೇ.10ರಷ್ಟು ಹೆಚ್ಚು ಎಲ್ಪಿಜಿ ಪೂರೈಸಲಾಗುವುದು’ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಸದ್ಯದ ಅನಿಲ ಲಭ್ಯತೆಯ ಬಗ್ಗೆ ಮಾತನಾಡುತ್ತಾ, ‘ಎಲ್ಲೂ ಅನಿಲದ ಪೂರೈಕೆ ನಿಂತಿಲ್ಲ. ಆದರೆ ಸಂಘರ್ಷದ ಕಾರಣ ಕಳವಳ ಮುಂದುವರೆದಿದೆ. ಆದ್ದರಿಂದ ಸಿಲಿಂಡರ್ ಬುಕ್ ಮಾಡಿದವರು ಅದು ತಲುಪುವ ತನಕ ತಾಳ್ಮೆಯಿಂದ ಕಾಯಬೇಕು’ ಎಂದು ಸುಜಾತಾ ಹೇಳಿದರು.