ನವದೆಹಲಿ : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ‘ಮತ ಚೋರಿ’ ಆರೋಪ ಮಾಡಿದ ಬೆನ್ನಲ್ಲೇ ಈ ಬಗ್ಗೆ ದೇಶವ್ಯಾಪಿ ಆಂದೋಲನ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಬಗ್ಗೆ ಪಕ್ಷದ ಕಾರ್ಯತಂತ್ರದ ಕುರಿತು ಸೋಮವಾರ ಸಂಜೆ 4ಕ್ಕೆ ಸಭೆ ನಡೆಯಲಿದೆ.
‘ಮುಂದಿನ ಕಾರ್ಯತಂತ್ರವನ್ನು ರೂಪಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ವಿವಿಧ ರಾಜ್ಯಗಳ ಉಸ್ತುವಾರಿಗಳು ಮತ್ತು ಮುಂಭಾಗದ ಸಂಘಟನೆಗಳ ಮುಖ್ಯಸ್ಥರು ಅಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸಭೆ ಸೇರಲಿದ್ದಾರೆ. ಇದು ಗಾಂಧೀಜಿ ರೀತಿಯಲ್ಲಿ ಮಾಡು ಇಲ್ಲವೇ ಮಡಿ ಹೋರಾಟವಾಗಲಿದೆ’ ಎಂದು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಆ.16ರೊಳಗೆ ‘ನಕಲಿ’ ವೋಟರ್ ಐಡಿ ಸಲ್ಲಿಸಿ : ತೇಜಸ್ವಿಗೆ ಆಯೋಗ
ಪಟನಾ: ಇತ್ತೀಚೆಗೆ ತಮ್ಮ ಹೆಸರು ಮತದಾರ ಪಟ್ಟಿಯಿಂದ ಕಾಣೆಯಾಗಿದೆ ಎಂದು ಆರೋಪಿಸಿ ಇತ್ತೀಚೆಗೆ ತಾವು ಪ್ರದರ್ಶಿಸಿದ ವೋಟರ್ ಐಡಿಯನ್ನು ಆ.16ರೊಳಗೆ ಆಯೋಗಕ್ಕೆ ಪರಿಶೀಲನೆಗಾಗಿ ಸಲ್ಲಿಸಬೇಕು ಎಂದು ಚುನಾವಣಾ ಆಯೋಗವು
ಬಿಹಾರ ಆರ್ಜೆಡಿ ನಾಯಕ ತೇಜಸ್ವಿ ಯಾದವ್ಗೆ ಸೂಚಿಸದೆ. ‘ತೇಜಸ್ವಿ ಅವರ ಅಸಲಿ ವೋಟರ್ ಐಡಿ ಬೇರೆ ಇದೆ. ಇದು ನಕಲಿ ವೋಟರ್ ಐಡಿ ಇರಬಹುದು’ ಎಂದು ಆಯೋಗ ಶಂಕಿಸಿತ್ತು.
ಮತಪಟ್ಟಿ ಗದ್ದಲಕ್ಕೆ ಉಭಯ ಸದನಗಳ ಕಲಾಪ ಬಲಿ
ನವದೆಹಲಿ : ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಸುಗಮ ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವ ಮತಪಟ್ಟಿ ಗದ್ದಲ ಶುಕ್ರವಾರವೂ ಉಭಯ ಸದನವನ್ನು ಬಲಿ ಪಡೆಯಿತು. ರಾಹುಲ್ ಗಾಂಧಿ ಮತ ಕಳವು ಆರೋಪದ ಕೋಲಾಹಲಕ್ಕೆ ರಾಜ್ಯಸಭೆ ಹಾಗೂ ಬಿಹಾರ ಮತಪಟ್ಟಿ ಪರಿಷ್ಕರಣೆ ಗದ್ದಲಕ್ಕೆ ಲೋಕಸಭೆ ಕಲಾಪ ಬಲಿ ಆದವು.
ರಾಹುಲ್ ಗುರುವಾರವಷ್ಟೇ ಕರ್ನಾಟಕದ ಮಹದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂದು ಅಂಕಿಅಂಶಗಳ ಸಮೇತ ಬಹಿರಂಗಪಡಿಸಿದ್ದು, ಶುಕ್ರವಾರ ರಾಜ್ಯಸಭೆಯಲ್ಲಿಯೂ ಪ್ರತಿಧ್ವನಿಸಿತು. ಕಾಂಗ್ರೆಸ್ ಚರ್ಚೆಗೆ ಅನುಮತಿ ಕೇಳಿದರೂ ಸ್ಪೀಕರ್ ಅವಕಾಶ ನೀಡಲಿಲ್ಲ. ಹೀಗಾಗಿ ವಿಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು. ಈ ಹಿನ್ನೆಲೆ ಉಪ ಸಭಾಪತಿ ಹರಿವಂಶ್ ಕಲಾಪ ದಿನದ ಮಟ್ಟಿಗೆ ಮುಂದೂಡಿದರು.ಮತ್ತೊಂದೆಡೆ ಲೋಕಸಭೆಯಲ್ಲಿ ಬಿಹಾರ ಮತಪಟ್ಟಿ ಪರಿಷ್ಕರಣೆ ಚರ್ಚೆಗೆ ವಿಪಕ್ಷಗಳು ಆಗ್ರಹಿಸಿದವು. ಆದರೆ ಸ್ಪೀಕರ್ ಅದಕ್ಕೆ ಅನುಮತಿಸಲಿಲ್ಲ. ಗದ್ದಲ ಹೆಚ್ಚಾಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಕಲಾಪ ಮುಂದೂಡಿದರು.
ನುಸುಳುಕೋರರಿಗೆ ಮತ ಹಾಕಲು ಅಧಿಕಾರವಿಲ್ಲ: ಅಮಿತ್ ಶಾ
ಸೀತಾಮಢಿ (ಬಿಹಾರ) : ಬಿಹಾರದಲ್ಲಿ ಮತ ಹಾಕಲು ನುಸುಳುಕೋರರಿಗೆ ಅಧಿಕಾರವಿಲ್ಲ ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮತಪಟ್ಟಿ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಶುಕ್ರವಾರ ಸೀತಾಮಢಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಚಿವರು, ಮತಪಟ್ಟಿಯಿಂದ ನುಸುಳುಕೋರರ ಹೆಸರುಗಳನ್ನು ತೆಗೆದು ಹಾಕಲಾಗುತ್ತಿದೆ. ಆದರೆ ರಾಹುಲ್ ಗಾಂಧಿ ಮತ್ತು ವಿಪಕ್ಷ ನಾಯಕರು ಪರಿಷ್ಕರಣೆ ವಿರುದ್ಧ ರಾಜಕೀಯ ಮಾಡುತ್ತಿದ್ದಾರೆ. ಆರ್ಜೆಡಿ ಮತ್ತು ಕಾಂಗ್ರೆಸ್ ಪಕ್ಷವು ನುಸುಳುಕೋರರ ಹೆಸರನ್ನು ತೆಗೆಯುವುದನ್ನು ವಿರೋಧಿಸುತ್ತಿವೆ ಎಂದು ಕಿಡಿಕಾರಿದರು.ಇದೇ ವೇಳೆ ಆಪರೇಷನ್ ಸಿಂದೂರದ ಕುರಿತು ಮಾತನಾಡಿದ ಸಚಿವರು, ‘ಯುಪಿಎ ಅವಧಿಯಲ್ಲಿ ಉಗ್ರರ ದಾಳಿಗಳು ಆಗಾಗ್ಗೆ ಆಗುತ್ತಿದ್ದವು. ಆದರೆ ಮೋದಿ ಆಡಳಿತದಲ್ಲಿ ಉಗ್ರರನ್ನು ಹೊಸಕಿ ಹಾಕಲಾಗುತ್ತಿದೆ. ಆದರೆ ಇದನ್ನೂ ಆರ್ಜೆಡಿ ಮತ್ತು ಕಾಂಗ್ರೆಸ್ ವಿರೋಧಿಸುತ್ತಿವೆ’ ಎಂದು ಕಿಡಿಕಾರಿದರು.