ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ಹಲವು ಭರವಸೆಗಳನ್ನು ಘೋಷಿಸಿದೆ. ಇದರ ಜೊತೆಗೆ ಬಿಜೆಪಿ ಕಾಲದ ರಫೇಲ್ ಡೀಲ್, ನೋಟು ಅಪನಗದೀಕರಣ, ಚುನಾವಣಾ ಬಾಂಡ್ಗಳ ಬಗ್ಗೆ ಪ್ರಸ್ತಾಪಿಸಿದೆ.
ಭ್ರಷ್ಟಾಚಾರ ನಿರ್ಮೂಲನೆಯ ಭರವಸೆಯನ್ನು ನೀಡಿರುವ ಕಾಂಗ್ರೆಸ್, ‘ಮೋಸ ಮಾಡಿದವರಿಗೆ ದೇಶ ತೊರೆಯಲು ಬಿಜೆಪಿ ಅನುಮತಿ ನೀಡಿದೆ. ಅವರನ್ನು ಇಂದಿಗೂ ವಾಪಾಸ್ ಕರೆಸುವುದಕ್ಕೆ ಆಗಿಲ್ಲ, ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಎನ್ಡಿಎ ಕಳೆದ 10 ವರ್ಷಗಳ ಅವಧಿಯಲ್ಲಿ ನಡೆಸಿರುವ ಭ್ರಷ್ಟಚಾರವನ್ನು ಬಯಲಿಗೆಳೆಯುತ್ತೇವೆ’ ಎಂದಿದೆ.
ಜೊತೆಗೆ, ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ, 500 ,ರು.1000 ಮುಖ ಬೆಲೆಯ ನೋಟು ನಿಷೇಧದ ಕುರಿತು ಮರು ತನಿಖೆ ನಡೆಸುವುದಾಗಿ ಉಲ್ಲೇಖಿಸಿದೆ. ಇದರ ಜೊತೆಗೆ ಸದ್ಯ ಭಾರಿ ವಿವಾದವನ್ನು ಸೃಷ್ಟಿಸಿರುವ ಎಲೆಕ್ಟೋರಲ್ ಬಾಂಡ್ ಬಗ್ಗೆಯೂ ತನಿಖೆ ನಡೆಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ.