ಕಂಗನಾ ಕಪಾಳಕ್ಕೆ ಹೊಡೆದ ಮಹಿಳಾ ಪೇದೆಗೆ ರೈತರ ಬೆಂಬಲ

KannadaprabhaNewsNetwork | Updated : Jun 08 2024, 07:42 AM IST

ಸಾರಾಂಶ

ಮಂಡಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಾನ್‌ಸ್ಟೆಬಲ್ ಕುಲ್ವಿಂದರ್‌ ಕೌರ್ ಅವರನ್ನು ರೈತ ಸಂಘಟನೆಗಳು ಬೆಂಬಲಿಸಿವೆ.

ಚಂಡೀಗಢ: ಮಂಡಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಾನ್‌ಸ್ಟೆಬಲ್ ಕುಲ್ವಿಂದರ್‌ ಕೌರ್ ಅವರನ್ನು ರೈತ ಸಂಘಟನೆಗಳು ಬೆಂಬಲಿಸಿವೆ. ಜೂ.9ರಂದು ಹಲವು ಸಂಘಟನೆಗಳು ಮೊಹಾಲಿಯಲ್ಲಿ ಪ್ರತಿಭಟನಾ ರ್‍ಯಾಲಿ ಆಯೋಜಿಸಿವೆ.

ಈ ವೇಳೆ ಕೌರ್ ವಿರುದ್ಧ ಯಾವುದೇ ಅನಗತ್ಯ ಕ್ರಮ ಕೈಗೊಳ್ಳದಂತೆ ಅವು ನ್ಯಾಯ ಮೆರವಣಿಗೆ ನಡೆಸಲಿವೆ. ಹಾಗೂ ವಿಮಾನ ನಿಲ್ದಾಣದಲ್ಲಿ ನಿಜವಾಗಿಯೂ ನಡೆದಿದ್ದಾರರೂ ಏನು ಎಂಬ ಸಮಗ್ರ ತನಿಖೆಗೆ ಒತ್ತಾಯಿಸಲಿವೆ.

ದಡ್ಲಾನಿ ಜಾಬ್ ಆಫರ್‌:

ಈ ನಡುವೆ ಬಾಲಿವುಡ್ ಗಾಯಕ ವಿಶಾಲ್‌ ದಡ್ಲಾನಿ ಅವರು ಕೌರ್‌ಗೆ ಉದ್ಯೋಗದ ಆಫರ್‌ ನೀಡಿದ್ದಾರೆ ‘ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ, ಆದರೆ ಕೌರ್‌ಗೆ ಕೋಪ ಏಕೆ ಬಂದಿತ್ತೆಂಬುದನ್ನು ನಾನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಹೀಗಾಗಿ ಸಿಐಎಸ್‌ಎಫ್‌ ಆಕೆಯ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡರೆ, ನಾನು ಆಕೆಗೆ ಪರ್ಯಾಯ ಉದ್ಯೋಗ ಕೊಡಿಸುವೆ’ ಎಂದಿದ್ದಾರೆ.

1000 ಕೆಲಸ ಕಳೆದುಕೊಳ್ಳುವೆ:

ಆರೋಪಿ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ವಿರುದ್ಧ ಪೊಲೀಸ್ ಕೇಸು ದಾಖಲಾಗಿದ್ದು, ಅದರ ಬೆನ್ನಲ್ಲೇ ಬಂಧಿಸಲಾಗಿದೆ. ಗುರುವಾರ ಘಟನೆ ನಡೆದ ಬಳಿಕ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಏತನ್ಮಧ್ಯೆ ನನ್ನ ಅಮ್ಮನ ಆತ್ಮಗೌರವಕ್ಕಾಗಿ ಇಂಥ 1000 ಕೆಲಸ ಕಳೆದುಕೊಳ್ಳಬಲ್ಲೆ ಎಂದು ಕೌರ್‌ ಕಿಡಿಕಾರಿದ್ದಾಳೆ

‘ಕೃಷಿ ಕಾಯ್ದೆ ವಿರುದ್ಧ ಹೋರಾಡಿದ ರೈತರು ನಿಜವಾದ ರೈತರಲ್ಲ. ದಿನಕ್ಕೆ 100 ರು. ಹಣ ನೀಡಿ ಅವರನ್ನು ಕರೆತರಲಾಗಿತ್ತು’ ಎಂದು ಈ ಹಿಂದೆ ಕಂಗನಾ ಹೇಳಿದ್ದರು. ಇದರಿಂದ ಕುಪಿತಳಾಗಿದ್ದ ಕೌರ್, ‘ನನ್ನ ಅಮ್ಮನೂ ಪ್ರತಿಭಟನೆಗೆ ಹೋಗಿದ್ದಳು. ಆಕೆ ನಯಾಪೈಸೆ ಪಡೆದಿರಲಿಲ್ಲ’ ಎಂದು ಕಿಡಿಕಾರಿ ಕಂಗನಾ ಕಪಾಳಕ್ಕೆ ಚೆನ್ನಾಗಿ ಬಾರಿಸಿದ್ದಳು.

Share this article