ಸಂವಿಧಾನದ ಮೂಲ ತತ್ವ ಬದಲಿಸಲು ಕಾಂಗ್ರೆಸ್‌ ಯತ್ನ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

KannadaprabhaNewsNetwork |  
Published : Dec 14, 2024, 12:47 AM ISTUpdated : Dec 14, 2024, 04:50 AM IST
ರಾಜನಾಥ ಸಿಂಗ್‌ | Kannada Prabha

ಸಾರಾಂಶ

ಸಂಸ್ಥೆಗಳ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯವನ್ನು ಸಹಿಸದ ಕಾಂಗ್ರೆಸ್‌ ಯಾವಾಗಲೂ ಸಂವಿಧಾನದ ಮೂಲತತ್ವಗಳನ್ನೇ ಬದಲಿಸಲು ಪ್ರಯತ್ನಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌, ಆರೋಪಿಸಿದ್ದಾರೆ.

ನವದೆಹಲಿ : ಸಂಸ್ಥೆಗಳ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯವನ್ನು ಸಹಿಸದ ಕಾಂಗ್ರೆಸ್‌ ಯಾವಾಗಲೂ ಸಂವಿಧಾನದ ಮೂಲತತ್ವಗಳನ್ನೇ ಬದಲಿಸಲು ಪ್ರಯತ್ನಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌, ಆರೋಪಿಸಿದ್ದಾರೆ.

ಭಾರತದ ಸಂವಿಧಾನವನ್ನು ಸ್ವೀಕರಿಸಿ 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಆ ಕುರಿತು ಲೋಕಸಭೆಯಲ್ಲಿ ಆರಂಭವಾದ ಚರ್ಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಯಾವಾಗಲೂ ಸಂವಿಧಾನವನ್ನು ಹೈಜಾಕ್‌ ಮಾಡಿ ತನಗೆ ಸರಿ ಅನ್ನಿಸುವಂತೆ ರೂಪಿಸಲು ಯತ್ನಿಸುತ್ತದೆ. ಹಲವು ಸಂದರ್ಭಗಳಲ್ಲಿ ಸಂವಿಧಾನ ಹಾಗೂ ಅದರ ತತ್ವಗಳಿಗೆ ಅಗೌರವ ತೋರಿರುವ ಕಾಂಗ್ರೆಸ್‌, ಅದರ ಮೂಲ ತತ್ವಗಳನ್ನೇ ನಾಶಪಡಿಸಲು ಪ್ರಯತ್ನಿಸುತ್ತದೆ. ಇಂತಹ ಪಕ್ಷದಿಂದ ಸಂವಿಧಾನ ರಕ್ಷಣೆಯ ಮಾತುಗಳು ಬರುವುದು ಸರಿಕಾಣುವುದಿಲ್ಲ’ ಎಂದು ಸಿಂಗ್‌ ಟೀಕಿಸಿದರು.

ಇತ್ತೀಚಿನ ಚುನಾವಣಾ ಪ್ರಚಾರಗಳಲ್ಲಿ ಕಾಂಗ್ರೆಸ್‌ ಸಂವಿಧಾನದ ಪ್ರತಿಯನ್ನು ಬಳಸುತ್ತಿರುವುದನ್ನು ಉಲ್ಲೇಖಿಸಿದ ಅವರು, ‘ವಿಪಕ್ಷದ ಅನೇಕ ನಾಯಕರು ಸಂವಿಧಾನವನ್ನು ತನ್ನ ಜೇಬುಗಳಲ್ಲಿ ಇಟ್ಟುಕೊಂಡು ತಿರುಗುತ್ತಾರೆ. ತಲೆತಲಾಂತರದಿಂ ಅವರು ಇದನ್ನೇ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಸಂವಿಧಾನಕ್ಕೆ ಸದಾ ತಲೆಬಾಗುತ್ತದೆ. ಜೊತೆಗೆ, ಅದರ ಸ್ವಾತಂತ್ರ್ಯ ಹಾಗೂ ಸ್ವಾಯತ್ತೆಯೊಂದಿಗೆ ಎಂದೂ ಆಟವಾಡುವುದಿಲ್ಲ’ ಎಂದರು.

ಸಂವಿಧಾನದಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ಸಚಿವರು, ‘ಜಾತ್ಯತೀತ ತತ್ವವನ್ನು ಪ್ರತಿಪಾದಿಸುವ ಸಂವಿಧಾನವು ದೇಶಕ್ಕೆ ಯಾವುದೇ ಧರ್ಮವಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ವಿಷಯಗಳನ್ನು ಒಳಗೊಂಡಿರುವ ಸಂವಿಧಾನ ರಾಷ್ಟ್ರ ನಿರ್ಮಾಣಕ್ಕೆ ದಾರಿದೀಪವಾಗಿದೆ. ಹಲವು ಐತಿಹಾಸಿಕ ಘಟನೆಗಳಿಂದ ರೂಪಿತವಾಗಿರುವ ಸಂವಿಧಾನವು, ವಿಶ್ವದಲ್ಲಿ ಭಾರತ ಗುರುತಿಸಲಿಕೊಳ್ಳಲು ಮಾರ್ಗದರ್ಶನ ಮಾಡುತ್ತದೆ’ ಎಂದರು.

ಈ ವೇಳೆ, ‘ಹಲವರು ಸಂವಿಧಾನ ಸಭೆಯ ಭಾಗವಾಗಿರದಿದ್ದರೂ ಅವರ ವಿಚಾರಗಳು ಮಹತ್ವದ ಪಾತ್ರ ವಹಿಸಿವೆ. ಸಂವಿಧಾನದ ಬಲವರ್ಧನೆಗೆ ಶ್ರಮಿಸಿದ ಪಂಡಿತ ಮದನ ಮೋಹನ್‌ ಮಾಳವೀಯ, ಲಾಲಾ ಲಜಪತ್‌ ರಾಯ್‌, ಭಗತ್‌ ಸಿಂಗ್‌, ವೀರ ಸಾವರ್ಕರ್‌ ಮುಂತಾದವರನ್ನು ಸ್ಮರಿಸಬೇಕು’ ಎಂದರು.

ಸಂವಿಧಾನ ಚರ್ಚೆ: ಇಂದು ರಾಹುಲ್‌ ಭಾಷಣ, ಮೋದಿ ಉತ್ತರ

ನವದೆಹಲಿ: ಸಂವಿಧಾನ ಅಂಗೀಕಾರವಾಗಿ 75 ವರ್ಷ ಸಂದಿರುವ ನಿಮಿತ್ತ ಲೋಕಸಭೆಯಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಉತ್ತರಿಸಲಿದ್ದಾರೆ. ಇದಕ್ಕೂ ಮುನ್ನ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಬೆಳಗ್ಗೆ ಮಾತನಾಡಲಿದ್ದಾರೆ.ಇನ್ನು ಡಿ.16, 17ರಂದು ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ. ಚರ್ಚೆಗೆ 16ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಲಿದ್ದಾರೆ. 17ರಂದು ರಾಜ್ಯಸಭೆಯಲ್ಲಿ ಮೋದಿ ಉತ್ತರಿಸಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ವಿಕಸಿತ ಭಾರತ ಕಟ್ಟಲು ಸೋಮನಾಥ ಮಾದರಿ
ಹರಿದ್ವಾರಕ್ಕೆ ಹಿಂದೂಯೇತರರ ಪ್ರವೇಶ ನಿಷೇಧಕ್ಕೆ ಚಿಂತನೆ