ವೇದಿಕೆ ಮೇಲೆ ರಾಮಲೀಲಾ ಪ್ರದರ್ಶನದ ವೇಳೆ ರಾಮನ ಪಾತ್ರವನ್ನು ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ- ಸಾವು

KannadaprabhaNewsNetwork |  
Published : Oct 07, 2024, 01:43 AM ISTUpdated : Oct 07, 2024, 05:21 AM IST
ಹೃದಯಾಘಾತ | Kannada Prabha

ಸಾರಾಂಶ

ವೇದಿಕೆ ಮೇಲೆ ರಾಮಲೀಲಾ ಪ್ರದರ್ಶನದ ವೇಳೆ ರಾಮನ ಪಾತ್ರವನ್ನು ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತವಾಗಿದ್ದು, ಸಾವನ್ನಪ್ಪಿರುವ ಘಟನೆ ನಡೆದಿದೆ.

ನವದೆಹಲಿ: ವೇದಿಕೆ ಮೇಲೆ ರಾಮಲೀಲಾ ಪ್ರದರ್ಶನದ ವೇಳೆ ರಾಮನ ಪಾತ್ರವನ್ನು ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತವಾಗಿದ್ದು, ಸಾವನ್ನಪ್ಪಿರುವ ಘಟನೆ ನಡೆದಿದೆ.

ಸುಶೀಲ್ ಕೌಶಿಕ್ (45) ಮೃತಪಟ್ಟ ರಾಮ ಪಾತ್ರಧಾರಿ. ದಿಲ್ಲಿಯ ಶಹದಾರದ ವಿಶ್ವಕರ್ಮ ನಗರದಲ್ಲಿ ರಾಮಲೀಲಾ ಪ್ರದರ್ಶನದ ವೇಳೆ ಈ ಘಟನೆ ನಡೆದಿದ್ದು, ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಆಪ್‌ ನಾಯಕ ಸೌರಭ್ ಭಾರದ್ವಾಜ್, ‘ಕೊರೊನಾ ಲಸಿಕೆ ಪಡೆದ ನಂತರ, ಭಾರತದಲ್ಲಿ ಯುವಕರು ಸಾಮಾನ್ಯವಾಗಿ ನಡೆಯುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಚರ್ಚೆಯಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

==

ರಫೇಲ್‌ ಬಳಸಿ ಭಾರತದಿಂದ ಚೀನಾ ಗುಪ್ತಚರ ಬಲೂನ್‌ ನಾಶ

ನವದೆಹಲಿ: ಅಂಡಮಾನ್‌-ನಿಕೋಬಾರ್ ದ್ವೀಪ ಸಮೂಹದ ಸನಿಹ 55,000 ಅಡಿಗಳಷ್ಟು ಎತ್ತರದಲ್ಲಿ ಹಾರುತ್ತಿದ್ದ ಚೀನೀ ಸ್ಪೈ ಬಲೂನ್ ಮಾದರಿಯ ಗುರಿಯನ್ನು ಹೊಡೆದುರುಳಿಸಿದೆ.ಕೆಲವು ತಿಂಗಳ ಹಿಂದೆ, ಬಲೂನ್‌ ಒಂದು ಹಾರುತ್ತಿತ್ತು. 3-4 ದಿನಗಳ ಕಾಲ ಗಮನಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಭಾರತ ಕ್ರಮ ಕೈಗೊಂಡಿದೆ. ತಾಲೀಮು ನಡೆದ ವೇಳೆ ರಫೇಲ್ ಯುದ್ಧವಿಮಾನವು ದಾಸ್ತಾನು ಕ್ಷಿಪಣಿಯನ್ನು ಬಳಸಿಕೊಂಡು ಬಲೂನನ್ನು ಸ್ಫೋಟಿಸಿದೆ ಪೂರೈಸಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.2023ರಲ್ಲಿ ಅಮೆರಿಕ ಇದೇ ರೀತಿ ಅಟ್ಲಾಂಟಿಕ್‌ ಸಾಗರದ ಮೇಲೆ ಚೀನೀ ಪತ್ತೇದಾರಿ ಬಲೂನನ್ನು ಹೊಡೆದುರುಳಿಸಿತ್ತು.

==

ಭಾರತಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಜು ಆಗಮನ: ಶೀಘ್ರ ಬೆಂಗಳೂರಿಗೆ

ನವದೆಹಲಿ: ಭಾರತದೊಂದಿಗೆ ಸಂಬಂಧ ಹದೆಗಟ್ಟ ಬಳಿಕ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಮೊದಲ ಸಲ ಭಾರತಕ್ಕೆ ಭೇಟಿ ನೀಡಿದ್ದಾರೆ. 5 ದಿನ ಭಾರತ ಪ್ರವಾಸ ಕೈಗೊಂಡಿರುವ ಮುಯಿಜು ತಮ್ಮ ಪತ್ನಿ ಸಾಜಿದಾ ಮೊಹಮ್ಮದ್‌ ಜೊತೆಗೆ ನವದೆಹಲಿಗೆ ಬಂದಿಳಿದ್ದಾರೆ.ರಾ಼ಷ್ಟ್ರಪತಿ ದ್ರೌಪದಿ ಮುರ್ಮು ಅಧಿಕೃತ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿರುವ ಮುಯಿಜು ಅ.10ರವರೆಗೆ ಭಾರತದಲ್ಲಿಯೇ ಉಳಿಯಲಿದ್ದಾರೆ. ಈ ಅವಧಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ಮುರ್ಮು ಜತೆ ಹಲವು ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. 5 ದಿನಗಳ ಅವಧಿಯಲ್ಲಿ ಬೆಂಗಳೂರಿನಲ್ಲಿಯೂ ಉದ್ಯಮ ಸಭೆಯೊಂದರಲ್ಲಿ ಭಾಗಿಯಾಗಲಿದ್ದಾರೆ.

==

ಜಾನಿ ಮಾಸ್ಟರ್‌ಗೆ ನೀಡಿದ್ದ ರಾಷ್ಟ್ರಪ್ರಶಸ್ತಿ ವಾಪಸ್‌

ನವದೆಹಲಿ: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಜಾನಿ ಮಾಸ್ಟರ್‌ಗೆ ಘೋಷಿಸಲಾಗಿದ್ದ ರಾಷ್ಟ್ರ ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ಹೊರಡಿಸಿದೆ.2022ರಲ್ಲಿ ತೆರೆಕಂಡಿದ್ದ ತಮಿಳಿನ ‘ತಿರುಚಿತ್ರಂಬಲಂ’ ಸಿನಿಮಾದ ‘ಮೇಘಂ ಕರುಕ್ಕುಥ’ ಹಾಡಿಗೆ ಜಾನಿ ಮಾಸ್ಟರ್‌ಗೆ ಅತ್ಯುತ್ತಮ ನೃತ ಸಂಯೋಜಕ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ಇದೀಗ ಅವರ ಮೇಲೆ ದೌರ್ಜನ್ಯದ ಆರೋಪವಿರುವ ಕಾರಣ ಕೇಂದ್ರ ಆ ರಾಷ್ಟ್ರಪ್ರಶಸ್ತಿಯನ್ನು ಅಮಾನತಿನಲ್ಲಿಟ್ಟಿದೆ.ಜಾನಿ ಮಾಸ್ಟರ್, ಅ.8 ರಂದು ದೆಹಲಿಯಲ್ಲಿ ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ ಅದಕ್ಕೂ ಮುನ್ನ ಕೇಂದ್ರ ಅ. 4ರಂದು ಈ ಆದೇಶ ಹೊರಡಿಸಿದೆ. ಇದರ ಜೊತೆಗೆ ಅವರಿಗೆ ನೀಡಲಾಗಿದ್ದ ಆಹ್ವಾನವನ್ನು ಕೂಡ ವಾಪಸ್‌ ಪಡೆದುಕೊಂಡಿದೆ.

==

ಮೋದಿ ಫ್ರೀ ವಿದ್ಯುತ್‌ ಕೊಟ್ರೆ ಬಿಜೆಪಿ ಪರ ಪ್ರಚಾರ: ಕೇಜ್ರಿ

ನವದೆಹಲಿ: ‘ಎನ್‌ಡಿಎ ಅಧಿಕಾರವಿರುವ ರಾಜ್ಯಗಳಲ್ಲಿ, ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಉಚಿತ ವಿದ್ಯುತ್‌ ನೀಡಿದರೆ, ಬಿಜೆಪಿ ಪರ ಪ್ರಚಾರ ಮಾಡುತ್ತೇನೆ’ ಎಂದು ಆಪ್‌ ಮುಖ್ಯಸ್ಥ, ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ಮೋದಿಗೆ ಸವಾಲೆಸೆದಿದ್ದಾರೆ.

‘ಜನತಾ ಕೀ ಅದಾಲತ್‌’ ಸಭೆಯಲ್ಲಿ ಭಾನುವಾರ ಮಾತನಾಡಿದ ಕೇಜ್ರಿವಾಲ್‌, ‘ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೆಸೆಯುತ್ತೇನೆ. ಬಿಜೆಪಿ ಅಧಿಕಾರವಿರುವ 22 ರಾಜ್ಯಗಳಲ್ಲಿ, ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಉಚಿತ ವಿದ್ಯುತ್‌ ನೀಡಬೇಕು. ಹಾಗೆ ಮಾಡಿದರೆ ನಾನು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ’ ಎಂದರು.‘ಬಿಜೆಪಿ ಡಬಲ್ ಎಂಜಿನ್ ಸರ್ಕಾರವು ಅನೇಕ ರಾಜ್ಯಗಳಲ್ಲಿ ವಿಫಲವಾಗಿದೆ. ಎಕ್ಸಿಟ್‌ ಪೋಲ್ ಸಮೀಕ್ಷೆಗಳು ಹರ್ಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಡಬಲ್‌ ಎಂಜಿನ್ ಆಡಳಿತ ಅಂತ್ಯಗೊಳ್ಳುವುದನ್ನು ತೋರಿಸುತ್ತಿವೆ’ ಎಂದರು.

==

ಪ್ರವಾದಿ ಮೊಹಮ್ಮದ್‌ ಬಗ್ಗೆ ವಿವಾದಿತ ಹೇಳಿಕೆ: ನರ​ಸಿಂಗಾ​ನಂದ ನಾಪತ್ತೆ

ಗಾಜಿ​ಯಾ​ಬಾ​ದ್‌: ಪ್ರವಾದಿ ಮೊಹ​ಮ್ಮ​ದರ ಬಗ್ಗೆ ವಿವಾ​ದಿತ ಹೇಳಿಕೆ ನೀಡಿದ ಕಾರಣ ದೇಶದ ವಿವಿಧ ಭಾಗ​ಗ​ಳಲ್ಲಿ ಎಫ್‌​ಐ​ಆರ್‌ ದಾಖ​ಲಾದ ಬೆನ್ನಲ್ಲೇ ಬಂಧನ ಭೀತಿ​ಯಿಂದ ವಿವಾದಿತ ಧರ್ಮ​ಗುರು ಸ್ವಾಮಿ ನರ​ಸಿಂಗಾ​ನಂದ ನಾಪತ್ತೆ ಆಗಿ​ದ್ದಾರೆ. ‘ಶ್ರೀಗಳನ್ನು ಬಂಧಿಸಿಲ್ಲ ಹಾಗೂ ವಶಕ್ಕೂ ಪಡೆದಿಲ್ಲ. ಅವರ ಮೇಲೆ ಯಾವ ಕೇಸು ಹಾಕಬೇಕೆಂಬ ಚರ್ಚೆ ನಡೆದಿದೆ. ಅವರು ಎಲ್ಲಿದ್ದಾರೋ ಗೊತ್ತಿಲ್ಲ’ ಎಂದು ಗಾಜಿಯಾಬಾದ್‌ ಡಿವೈಎಸ್ಪಿ ಎನ್‌.ಕೆ. ತಿವಾರಿ ಹೇಳಿದ್ದಾರೆ. ಈ ನಡುವೆ, ಅವರ ಬಂಧ​ನಕ್ಕೆ ಆಗ್ರ​ಹಿಸಿ ಉತ್ತರ ಪ್ರದೇ​ಶದ ಗಾಜಿ​ಯಾ​ಬಾ​ದ್‌​ನಲ್ಲಿ ಪ್ರತಿ​ಭ​ಟನೆ ನಡೆ​ಸುವ ವೇಳೆ ದೇವಿ ದೇಗು​ಲಕ್ಕೆ ಕಲ್ಲೆ​ಸೆದ 6 ಮಂದಿ​ಯ ಬಂಧಿ​ಸ​ಲಾ​ಗಿ​ದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ