ನವದೆಹಲಿ: ಸರ್ಕಾರ ತೆಗೆದುಕೊಂಡಿರುವ ಕಠಿಣ ನಿರ್ಧಾರಗಳು ಮತ್ತು ಕಳೆದ 2 ದಿನಗಳಿಂದ ಸುರಿದ ಧಾರಾಕಾರ ಮಳೆಯ ಪರಿಣಾಮವಾಗಿ ಹೊಗೆಮಂಜಿನಿಂದ ತತ್ತರಿಸಿದ್ದ ದೆಹಲಿ ನಗರದ ವಾಯುಗುಣಮಟ್ಟದಲ್ಲಿ ಭಾರೀ ಚೇತರಿಕೆ ಕಂಡು ಬಂದಿದೆ. ಶನಿವಾರ 220ರಷ್ಟಿದ್ದ ವಾಯುಗುಣಮಟ್ಟ ಸೂಚ್ಯಂಕ ಭಾನುವಾರ ಬೆಳಗ್ಗೆ 202 ಅಂಕಕ್ಕೆ ಚೇತರಿಕೆ ಕಂಡಿದೆ.
ಆದರೆ ಆರೋಗ್ಯ ಮಾರ್ಗಸೂಚಿಯಲ್ಲಿರುವಂತೆ ದೆಹಲಿಯ ಜನತೆ ಪಟಾಕಿ ಸಿಡಿಸದೆ ದೀಪಾವಳಿಯನ್ನು ಆಚರಿಸಿದ್ದೇ ಆದಲ್ಲಿ ವಾಯುಗುಣಮಟ್ಟವು ಮತ್ತಷ್ಟು ಸುಧಾರಣೆಯಾಗಿ ಸಹಜ ಸ್ಥಿತಿಗೆ ತಲುಪುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕಳೆದ ವಾರ ವಾಯ ಸೂಚ್ಯಂಕ 500ರ ಆಸುಪಾಸಿನಲ್ಲಿತತ್ತು. ಬಳಿಕ ವಾಯುಗುಣಮಟ್ಟವನ್ನು ಸುಧಾರಿಸಲು ದೆಹಲಿ ಸರ್ಕಾರ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪ್ರಮುಖವಾಗಿ ಎಲ್ಲ ಹೊಗೆ ಮತ್ತು ಧೂಳು ಸೂಸುವ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಇದು ಫಲ ಕೊಟ್ಟಂತೆ ಕಾಣಿಸುತ್ತಿದ್ದು, ಇದರ ಜೊತೆಗೆ ಕಳೆದ ಎರಡು ದಿನಗಳಲ್ಲಿ ಮಳೆ ಸುರಿದು ವಾಯುಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವಂತೆ ಮಾಡಿದೆ.