ಪೋರ್ಷೆ ಆ್ಯಕ್ಸಿಡೆಂಟ್‌: ಅಪ್ರಾಪ್ತ, ಚಾಲಕನ ರಕ್ತ ಮಾದರಿ ಬದಲು

KannadaprabhaNewsNetwork | Updated : May 28 2024, 05:17 AM IST

ಸಾರಾಂಶ

ಕನ್ನಡದ ಆ್ಯಕ್ಸಿಡೆಂಡ್ ಚಿತ್ರದ ಕಥೆ ನೆನಪಿಸಿದ ಘಟನೆಯಲ್ಲಿ ಇಬ್ಬರು ವೈದ್ಯರ ಬಂಧನ ಆಗಿದ್ದು, ಬಂಧಿತ ವೈದ್ಯರಿಂದ ರಕ್ತದ ಮಾದರಿ ಕಸದಬುಟ್ಟಿಗೆ ಹಾಕಲಾಗಿತ್ತು. ಅಪ್ರಾಪ್ತ ಮದ್ಯ ಕುಡಿದಿಲ್ಲ ಎಂದು ಬಿಂಬಿಸಲು ಈ ದುಷ್ಕೃತ್ಯ ಎಸಗಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪುಣೆ: ಅಪ್ರಾಪ್ತ ಬಾಲಕನ ಪೋರ್ಷೆ ಅಪಘಾತ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಯತ್ನದ ಕುರಿತು ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಘಟನೆ ನಡೆದ ದಿನ ಕಾರಿನಲ್ಲಿದ್ದ ಚಾಲಕ ಮತ್ತು ಅಪ್ರಾಪ್ತ ಬಾಲಕನ ರಕ್ತದ ಮಾದರಿ ಬದಲಾಯಿಸಲಾಗಿತ್ತು. ಈ ಮೂಲಕ ಬಾಲಕ ಮದ್ಯ ಸೇವನೆ ಮಾಡಿಲ್ಲ ಎಂದು ಬಿಂಬಿಸಲು ಯತ್ನಿಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ದಶಕಗಳ ಹಿಂದೆ ಕನ್ನಡದ ಆ್ಯಕ್ಸಿಂಡೆಟ್‌ ಚಿತ್ರದ ಕಥೆಯನ್ನೇ ಹೋಲುವಂತಿದೆ.

ಮೇ 19ರ ಅಪಘಾತ ಮಾಡಿದ 17 ವರ್ಷದ ಅಪ್ರಾಪ್ತನ ರಕ್ತ ಮಾದರಿ ಸಂಗ್ರಹಿಸಲು ಸಸೂನ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಅಜಯ್‌ ತಾವಡೆ ಸೂಚನೆ ಮೇರೆಗೆ ಮುಖ್ಯ ವೈದ್ಯಾಧಿಕಾರಿ ಡಾ. ಹರಿ ಹಾರ್ನೋರ್‌ ಈ ದುಷ್ಕೃತ್ಯ ಎಸಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಡಾ. ಅಜಯ್‌ ತಾವಡೆ ಅಪ್ರಾಪ್ತ ಬಾಲಕನ ತಂದೆಯ ಜೊತೆ ತಮ್ಮ ಮೊಬೈಲ್‌ನಲ್ಲಿ ಹಲವು ಬಾರಿ ಸಂಭಾಷಣೆ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕನ ತಂದೆ ವೈದ್ಯರಿಗೆ ಆಮಿಷವೊಡ್ಡಿ ಬೇರೊಂದು ರಕ್ತ ಮಾದರಿಯ ವರದಿಯನ್ನು ನೀಡಲು ಆಗ್ರಹಿಸಿದ್ದರು ಎಂಬುದಾಗಿ ನಗರ ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ತಿಳಿಸಿದ್ದಾರೆ.

ರಕ್ತ ಮಾದರಿ ತಾಳೆಯಾಗದ ಹಿನ್ನೆಲೆಯಲ್ಲಿ ಸಾಕ್ಷಿಯ ಕೊರತೆಯ ನೆಪವೊಡ್ಡಿ ಬಾಲಾಪರಾಧ ನ್ಯಾಯಮಂಡಳಿ ಅಪ್ರಾಪ್ತನಿಗೆ ಕೇವಲ 15 ಗಂಟೆಯಲ್ಲಿ ಜಾಮೀನು ನೀಡಿತ್ತು. ಇದಕ್ಕೂ ಮೊದಲು ಪೊಲೀಸರು ಯುವಕನ ಮತ್ತೊಂದು ರಕ್ತದ ಮಾದರಿಯನ್ನು ಸಂಗ್ರಹಿಸಿ ಬೇರೊಂದು ಆಸ್ಪತ್ರೆಗೆ ಯುವಕನ ಡಿಎನ್‌ಎ ಕಣಗಳೊಂದಿಗೆ ತಾಳೆ ಮಾಡಲು ಕಳುಹಿಸಿದ್ದರು. ಅಲ್ಲಿ ಯುವಕನ ರಕ್ತ ಮಾದರಿ ಆತನ ಡಿಎನ್‌ಎ ಜೊತೆಗೆ ತಾಳೆ ಆಗದ ಹಿನ್ನೆಲೆಯಲ್ಲಿ ಬದಲು ಮಾಡಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಸಸೂನ್‌ ಆಸ್ಪತ್ರೆಯ ಇಬ್ಬರು ಹಿರಿಯ ವೈದ್ಯರನ್ನು ಬಂಧಿಸಲಾಗಿದೆ.

Share this article