ಊಟಿ, ಕೊಡೈಕೆನಾಲ್‌ ಪ್ರವೇಶಕ್ಕೆ ಇ-ಪಾಸ್‌ ಕಡ್ಡಾಯ

KannadaprabhaNewsNetwork |  
Published : Apr 30, 2024, 02:02 AM ISTUpdated : Apr 30, 2024, 05:28 AM IST
ಊಟಿ | Kannada Prabha

ಸಾರಾಂಶ

ಪರಿಸರ ಸಂರಕ್ಷಣೆ ದೃಷ್ಟಿಯಿಂದ ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೊಡಕೈನಾಲ್‌ ಮತ್ತು ಊಟಿ ಗಿರಿಧಾಮಕ್ಕೆ ತೆರಳಲು ಇ-ಪಾಸ್‌ ಕಡ್ಡಾಯಗೊಳಿಸಬೇಕೆಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ಮಹತ್ವದ ಆದೇಶ ನೀಡಿದೆ. ಈ ಆದೇಶ ಮೇ 7ರಿಂದ ಜೂನ್‌ 30ರ ಅವಧಿಗೆ ಸೀಮಿತವಾಗಿರಲಿದೆ.

ಚೆನ್ನೈ: ಪರಿಸರ ಸಂರಕ್ಷಣೆ ದೃಷ್ಟಿಯಿಂದ ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೊಡಕೈನಾಲ್‌ ಮತ್ತು ಊಟಿ ಗಿರಿಧಾಮಕ್ಕೆ ತೆರಳಲು ಇ-ಪಾಸ್‌ ಕಡ್ಡಾಯಗೊಳಿಸಬೇಕೆಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ಮಹತ್ವದ ಆದೇಶ ನೀಡಿದೆ. ಈ ಆದೇಶ ಮೇ 7ರಿಂದ ಜೂನ್‌ 30ರ ಅವಧಿಗೆ ಸೀಮಿತವಾಗಿರಲಿದೆ.ಇ-ಪಾಸ್‌ ಕುರಿತು ನಿಯಮಾವಳಿ ರೂಪಿಸಿ ತಮಿಳುನಾಡು ಸರ್ಕಾರವು ರಾಷ್ಟ್ರಮಟ್ಟದ ಸುದ್ದಿಮಾಧ್ಯಮಗಳಲ್ಲಿ ಬೃಹತ್‌ ಜಾಹೀರಾತು ನೀಡುವ ಮೂಲಕ ಪ್ರಚುರಪಡಿಸಬೇಕೆಂದೂ ಹೈಕೋರ್ಟ್‌ ನಿರ್ದೇಶಿಸಿದೆ.

ಇ ಪಾಸ್‌ ಇಲ್ಲದ ವಾಹನಗಳಿಗೆ ಗಿರಿಧಾಮಗಳಿಗೆ ಭೇಟಿಗೆ ಅವಕಾಶ ನೀಡಬಾರದು. ಆದರೆ ಪಾಸ್‌ಗಳ ವಿತರಣೆಗೆ ಯಾವುದೇ ನಿಯಂತ್ರಣ ಇರದು. ಇ ಪಾಸ್‌ ನಿಯಮ ಸ್ಥಳೀಯರಿಗೆ ಅನ್ವಯಿಸದು ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ಇ ಪಾಸ್‌ ನಿಯಮ ಏಕೆ? ಹಾಲಿ ಊಟಿಗೆ ನಿತ್ಯ 1000- 1300 ವಾಹನಗಳು ಆಗಮಿಸುತ್ತವೆ. ಆದರೆ ಬಿಸಿಲಿನ ತಾಪ ಹೆಚ್ಚಾಗುವ ಮತ್ತು ಹೆಚ್ಚಿನ ಪ್ರವಾಸಿಗರು ಆಗಮಿಸುವ ಮೇ ಮೊದಲ ವಾರದಿಂದ ಜೂನ್‌ ಅಂತ್ಯದ ವೇಳೆಗೆ ನಿತ್ಯ 20000ಕ್ಕೂ ಹೆಚ್ಚು ವಾಹನಗಳಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇಷ್ಟು ವಾಹನಗಳ ಹೊರೆ ತಡೆಯುವ ಸಾಮರ್ಥ್ಯ ಗಿರಿಧಾಮಗಳ ರಸ್ತೆಗಳಿಗೆ ಇಲ್ಲ. ಇದರಿಂದ ಸ್ಥಳೀಯರ ಸಂಚಾರಕ್ಕೆ, ಕಾಡುಪ್ರಾಣಿಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಬೆಂಗಳೂರಿನ ಐಐಎಂ ಮತ್ತು ಮದ್ರಾಸ್‌ನ ಐಐಟಿ ಜಂಟಿ ಅಧ್ಯಯನ ತಂಡ ಇತ್ತೀಚೆಗೆ ಮಾಹಿತಿ ನೀಡಿತ್ತು. ಹೀಗಾಗಿ ಅವುಗಳ ಅಧ್ಯಯನಕ್ಕೆ ಪೂರಕವಾಗಿ ಇನ್ನಷ್ಟು ಅಗತ್ಯ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ಇ ಪಾಸ್‌ ವ್ಯವಸ್ಥೆ ಜಾರಿಗೆ ಹೈಕೋರ್ಟ್‌ ಆದೇಶಿಸಿದೆ.

ಇ ಪಾಸ್‌ ಪಡೆಯುವುದು ಹೇಗೆ?

ಶೀಘ್ರದಲ್ಲಿ ತಮಿಳುನಾಡು ಸರ್ಕಾರವು ಈ ಕುರಿತು ಮಾರ್ಗಸೂಚಿ ರೂಪಿಸಬೇಕು. ಅದನ್ನು ಜಿಲ್ಲಾಡಳಿತದ ಮೂಲಕ ಜಾರಿಗೊಳಿಸಬೇಕು. ಬಳಿಕ ಪಾಸ್‌ ಪಡೆದುಕೊಳ್ಳುವುದು ಹೇಗೆ ಎಂಬುದರ ಕುರಿತು ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅನಿಲ ಹೊತ್ತ ನಂದಾದೇವಿ, ತೈಲ ತುಂಬಿದ ಜಗ್‌ ಲಾಡ್ಕಿ ಗುಜರಾತ್‌ಗೆ
ಯುದ್ಧದ ಕಾರಣ ಎಲ್‌ಪಿಜಿ ಪೂರೈಕೆ : ಕೇಂದ್ರ ಸರ್ಕಾರದಿಂದ ದೊಡ್ಡ ವಾರ್ನಿಂಗ್