ಪ್ರಚಾರಕ್ಕೆ ಧರ್ಮ, ಸೇನೆ, ಸಂವಿಧಾನ ಬಳಸಬೇಡಿ: ಆಯೋಗ ಖಡಕ್‌ ನುಡಿ

KannadaprabhaNewsNetwork |  
Published : May 23, 2024, 01:05 AM ISTUpdated : May 23, 2024, 06:29 AM IST
ಚುನಾವಣಾ ಆಯೋಗ | Kannada Prabha

ಸಾರಾಂಶ

ಜಾತಿ, ಧರ್ಮ, ಭಾಷೆ, ಸಮುದಾಯಗಳ ಆಧಾರದಲ್ಲಿ ಚುನಾವಣಾ ಪ್ರಚಾರ ಮಾಡಬಾರದು. ಸೇನೆ ಹಾಗೂ ಸಂವಿಧಾನ ರದ್ದು ವಿಚಾರವನ್ನು ರಾಜಕೀಯಕ್ಕೆ, ಪ್ರಚಾರಕ್ಕೆ ಬಳಸಬಾರದು ಎಂದು ಕೇಂದ್ರ ಚುನಾವಣಾ ಆಯೋಗವು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತೀಕ್ಷ್ಣ ಎಚ್ಚರಿಕೆ ನೀಡಿದೆ.

ನವದೆಹಲಿ: ಜಾತಿ, ಧರ್ಮ, ಭಾಷೆ, ಸಮುದಾಯಗಳ ಆಧಾರದಲ್ಲಿ ಚುನಾವಣಾ ಪ್ರಚಾರ ಮಾಡಬಾರದು. ಸೇನೆ ಹಾಗೂ ಸಂವಿಧಾನ ರದ್ದು ವಿಚಾರವನ್ನು ರಾಜಕೀಯಕ್ಕೆ, ಪ್ರಚಾರಕ್ಕೆ ಬಳಸಬಾರದು ಎಂದು ಕೇಂದ್ರ ಚುನಾವಣಾ ಆಯೋಗವು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತೀಕ್ಷ್ಣ ಎಚ್ಚರಿಕೆ ನೀಡಿದೆ. ಅಲ್ಲದೆ, ‘ಚುನಾವಣೆಗಾಗಿ ಭಾರತದ ಸಾಮಾಜಿಕ, ಸಾಂಸ್ಕೃತಿಕ ಪರಿಸರವನ್ನು ಬಲಿ ಕೊಡಲಾಗದು’ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ, ಸ್ಟಾರ್‌ ಪ್ರಚಾರಕರಾದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಳೆದ ತಿಂಗಳು ನೀಡಲಾಗಿದ್ದ ದೂರುಗಳಿಗೆ ಅವರ ಪರವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಧ್ಯಕ್ಷರು ನೀಡಿದ ಸ್ಪಷ್ಟನೆಯನ್ನೂ ಆಯೋಗ ತಿರಸ್ಕರಿಸಿದೆ.

ಬಿಜೆಪಿಗೆ ಆಯೋಗ ಸೂಚಿಸಿದ್ದೇನು?:ಕಳೆದ ತಿಂಗಳು ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡಿದ್ದ ಪ್ರಧಾನಿ ಮೋದಿ, ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರ ಸಂಪತ್ತು ಲೂಟಿ ಮಾಡಿ ಅದನ್ನು ಒಳನುಸುಳುಕೋರರಿಗೆ ಮತ್ತು ಹೆಚ್ಚಿನ ಮಕ್ಕಳನ್ನು ಹೊಂದಿವವರಿಗೆ ನೀಡುತ್ತಾರೆ’ ಎಂದು ಆರೋಪಿಸಿದ್ದರು. ಈ ಬಗ್ಗೆ ಕಾಂಗ್ರೆಸ್‌ ನೀಡಿದ ದೂರು ಆಧರಿಸಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾಗೆ ಆಯೋಗ ನೋಟಿಸ್‌ ಜಾರಿ ಮಾಡಿತ್ತು.ನೋಟಿಸ್‌ಗೆ ನಡ್ಡಾ ನೀಡಿದ್ದ ಸ್ಪಷ್ಟನೆ ತಿರಸ್ಕರಿಸಿರುವ ಆಯೋಗ, ‘ಜಾತಿ, ಧರ್ಮ ಮತ್ತು ಕೋಮುಭಾವನೆಯ ಪ್ರಚಾರದಿಂದ ಸ್ಟಾರ್‌ ಪ್ರಚಾರಕರು ದೂರ ಇರಬೇಕು’ ಎಂದು ಸೂಚಿಸಿದೆ. ಜೊತೆಗೆ ಸಮಾಜವನ್ನು ವಿಭಜನೆ ಮಾಡಬಹುದಾದ ಭಾಷಣ ಮಾಡದಂತೆಯೂ ತಾಕೀತು ಮಾಡಿದೆ.

ಕಾಂಗ್ರೆಸ್‌ಗೆ ಸೂಚನೆ ಏನು?:

ಇನ್ನೊಂದೆಡೆ ರಾಹುಲ್‌ ಗಾಂಧಿ ಮತ್ತು ಖರ್ಗೆ, ‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ರದ್ದು ಮಾಡಲಿದೆ. ಸೇನೆಯಲ್ಲಿ ಇದೀಗ ಶ್ರೀಮಂತ ಮತ್ತು ಬಡವ ಎಂಬ ಎರಡು ವರ್ಗ ಸೃಷ್ಟಿಸಲಾಗಿದೆ’ ಎಂದು ಆರೋಪಿಸಿದ್ದರು. ಅಲ್ಲದೆ, ಅಗ್ನಿವೀರ ಯೋಜನೆ ವಿರುದ್ಧ ಕಾಂಗ್ರೆಸ್‌ ನಾಯಕರು ಪದೇ ಹೇಳಿಕೆ ನೀಡುತ್ತಲೇ ಇದ್ದಾರೆ. ಈ ಬಗ್ಗೆ ಬಿಜೆಪಿ ನೀಡಿದ ದೂರು ಆಧರಿಸಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಖರ್ಗೆಗೆ ನೋಟಿಸ್‌ ನೀಡಲಾಗಿತ್ತು.ಈ ಕುರಿತು ಖರ್ಗೆ ನೀಡಿದ್ದ ಸ್ಪಷ್ಟನೆಯನ್ನೂ ತಿರಸ್ಕರಿಸಿರುವ ಆಯೋಗ, ‘ರಕ್ಷಣಾ ಪಡೆಗಳನ್ನು ರಾಜಕೀಯ ಬಳಸಬಾರದು’ ಎಂದು ಸೂಚಿಸಿದೆ. ಅಲ್ಲದೆ ‘ಸಂವಿಧಾನವನ್ನೇ ಪಕ್ಷವೊಂದು ರದ್ದು ಮಾಡಲಿದೆ ಅಥವಾ ಮಾರಾಟ ಮಾಡಲಿದೆ’ ಎಂಬರ್ಥದ ಭಾಷಣ ಮಾಡದಂತೆ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರಿಗೆ ತಾಕೀತು ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಿಜೆಪಿಯ ರಿತು ಮುಂಬೈಗೆ ಮೊದಲ ಬಿಜೆಪಿ ಮೇಯರ್‌
ಬಾಂಗ್ಲಾ ಜೈಲಲ್ಲಿ ಹಿಂದೂ ಸಂಸದ ಸೇನ್‌ ನಿಗೂಢ ಸಾವು : ಅನುಮಾನ