ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಗುಜರಾತ್‌ ಅಧಿಕಾರಿಗಳಿಂದ ಲಂಚ ಪಾವತಿಗೂ ಇಎಂಐ ವ್ಯವಸ್ಥೆ ಜಾರಿ!

KannadaprabhaNewsNetwork | Updated : Jun 07 2024, 07:57 AM IST

ದುಬಾರಿ ಬೆಲೆಯ ವಸ್ತುಗಳನ್ನು ಒಂದೇ ಸಲ ಹಣ ಕೊಟ್ಟು ಕೊಳ್ಳಲಾಗದೇ ಹೋದಾಗ ಜನತೆ ಇಎಂಐಗೆ (ಮಾಸಿಕ ಸಮಾನ ಕಂತು ಪಾವತಿ ವ್ಯವಸ್ಥೆ) ಮೊರೆ ಹೋಗುತ್ತಾರೆ.

ಅಹಮದಾಬಾದ್: ದುಬಾರಿ ಬೆಲೆಯ ವಸ್ತುಗಳನ್ನು ಒಂದೇ ಸಲ ಹಣ ಕೊಟ್ಟು ಕೊಳ್ಳಲಾಗದೇ ಹೋದಾಗ ಜನತೆ ಇಎಂಐಗೆ (ಮಾಸಿಕ ಸಮಾನ ಕಂತು ಪಾವತಿ ವ್ಯವಸ್ಥೆ) ಮೊರೆ ಹೋಗುತ್ತಾರೆ. ಆದರೆ ಗುಜರಾತ್‌ನಲ್ಲಿ ಭ್ರಷ್ಟ ಅಧಿಕಾರಿಗಳು ಲಂಚದ ಹಣ ಸ್ವೀಕರಿಸಲೂ ಇಎಂಐ ವ್ಯವಸ್ಥೆ ಜಾರಿ ಮಾಡಿರುವ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ.

ಈ ವರ್ಷದ ಮಾರ್ಚ್‌ನಲ್ಲಿ ಎಸ್‌ಜಿಎಸ್‌ಟಿ ಬೋಗಸ್‌ ಬಿಲ್ಲಿಂಗ್ ಹಗರಣದಲ್ಲಿ ವ್ಯಕ್ತಿಯೊಬ್ಬರಿಂದ ಅಹಮದಾಬಾದ್‌ ಪೊಲೀಸರು 21 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಈ ಮೊತ್ತವನ್ನು ಒಂಬತ್ತು ಕಂತುಗಳಲ್ಲಿ 2 ಲಕ್ಷ,1 ಲಕ್ಷ ರೂಪದಲ್ಲಿ ಸ್ವೀಕರಿಸಿದ್ದಾರೆ. ಇನ್ನು ಏಪ್ರಿಲ್‌ನಲ್ಲಿ ಸೂರತ್‌ನಲ್ಲಿ ಗ್ರಾಮಸ್ಥರಿಂದ 85,000 ರು ಲಂಚ ಪಡೆಯುವಾಗಲೂ ಆರಂಭದಲ್ಲಿ 35,000 ರು ಬಳಿಕ ಹಂತ ಹಂತವಾಗಿ ಇವಿಎಂ ರೂಪದಲ್ಲಿ ಉಳಿದ ಹಣ ಪಡೆದುಕೊಂಡಿದ್ದಾರೆ. ಇನ್ನೂ ಸಬರಕಾಂತ್ ನಿವಾಸಿಯೊಬ್ಬರಿಂದ 10 ಲಕ್ಷಕ್ಕೆ ಬೇಡಿಕೆಯಿಟ್ಟು ಬಳಿಕ ಆರಂಭಿಕ ಕಂತಿನ 4 ಲಕ್ಷ ಹಣ ಪಡೆದು ಪರಾರಿಯಾಗಿದ್ದಾರೆ. 

ಮಾರ್ಚ್‌ನಲ್ಲಿ ಜಿಎಸ್ಟಿ ಅಧಿಕಾರಿಯೆಂದು ಹೇಳಿಕೊಂಡು , ಮೊಬೈಲ್ ಶಾಪ್ ಮಾಲೀಕನ ಬಳಿ 21 ಲಕ್ಷ ಲಂಚಕ್ಕೆ ಬೇಡಿಕೆಯನ್ನಿಟ್ಟಿದ್ದರು. ಅಂತೆಯೇ ಆರಂಭದಲ್ಲಿ 2 ಲಕ್ಷ ಮುಂಗಡ ಹಣ ಕೊಟ್ಟಿದ್ದ ವ್ಯಕ್ತಿ, ಆ ಬಳಿಕ ನಿರಾಕರಿಸಿ, ಎಸಿಬಿಯಲ್ಲಿ ದೂರು ದಾಖಲಿಸಿದ್ದ. ಇದರಿಂದ ಓರ್ವ ಭ್ರಷ್ಟ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದರು. 

ಇಂತಹ ಹಲವು ಪ್ರಕರಣಗಳು ಗುಜರಾತ್‌ನ ವಿವಿಧ ಭಾಗದಲ್ಲಿ ನಡೆದಿದೆ. ಈ ರೀತಿ ಪ್ರಕರಣಗಳು ಹೆಚ್ಚುತ್ತಿದ್ದು, ಗುಜರಾತ್‌ನಲ್ಲಿ ಒಂದೇ ವರ್ಷ ಇಂತಹ 10 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಈ ಬಗ್ಗೆ ಎಸಿಬಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು,‘ ಈ ರೀತಿ ಪದ್ಧತಿ ಹೊಸತೇನಲ್ಲ. 

ಜನರೇ ಅಧಿಕಾರಿಗಳಿಗೆ ಕಂತಿನ ಮೂಲಕ ಲಂಚ ನೀಡಲು ಒಪ್ಪಿರುತ್ತಾರೆ. ಒಂದೆರೆಡು ಕಂತುಗಳನ್ನು ಸಹ ನೀಡಿರುತ್ತಾರೆ. ಆದರೆ ಕೆಲವೊಮ್ಮೆ ಮನಸ್ಸು ಬದಲಿಸಿ , ಕಂತು ನೀಡದೇ ಇದ್ದಾಗ , ಭ್ರಷ್ಟ ಅಧಿಕಾರಿ ವಿರುದ್ಧ ಎಸಿಬಿಗೆ ದೂರು ನೀಡುತ್ತಾರೆ’ ಎಂದಿದ್ದಾರೆ. ಎಸಿಬಿ ಈ ರೀತಿ ಅಕ್ರಮ ನಡೆಸುವ ಅಧಿಕಾರಿಗಳ ಪತ್ತೆಗೆ ಬಲೆ ಬೀಸಿದ್ದು, ಈ ರೀತಿಯಲ್ಲಿ ಭ್ರಷ್ಟರು ಲಂಚ ಸ್ವೀಕರಿಸಿದರೆ ತಿಳಿಸುವಂತೆ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.