ಆತ್ಮಹತ್ಯೆಗೆ ಯತ್ನಿಸಿದ್ದ ಎಂಡಿಎಂಕೆ ಸಂಸದ ಗಣೇಶಮೂರ್ತಿ ಸಾವು

KannadaprabhaNewsNetwork | Updated : Mar 29 2024, 08:27 AM IST

ಸಾರಾಂಶ

ಲೋಕಸಭಾ ಚುನಾವಣೆ ಟಿಕೆಟ್‌ ಸಿಗದ ಕಾರಣ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಈರೋಡ್‌ನ ಎಂಡಿಎಂಕೆ ಸಂಸದ ಗಣೇಶ್‌ಮೂರ್ತಿ ಚಿಕಿತ್ಸೆ ಫಲಕಾರಿಯಾಗದೆ ಕೊಯಮತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಈರೋಡ್‌ (ತ.ನಾಡು): ಲೋಕಸಭಾ ಚುನಾವಣೆ ಟಿಕೆಟ್‌ ಸಿಗದ ಕಾರಣ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಈರೋಡ್‌ನ ಎಂಡಿಎಂಕೆ ಸಂಸದ ಗಣೇಶ್‌ಮೂರ್ತಿ ಚಿಕಿತ್ಸೆ ಫಲಕಾರಿಯಾಗದೆ ಕೊಯಮತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 

ಗಣೇಶ್‌ಮೂರ್ತಿ 2019ರಲ್ಲಿ ಡಿಎಂಕೆಯಿಂದ ಗೆದ್ದಿದ್ದರು ಹಾಗೂ ನಂತರ ವೈಕೋ ಅವರ ಎಂಡಿಎಂಕೆ ಪಕ್ಷ ಸೇರಿದ್ದರು. ಆದರೆ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. 

ಇದರಿಂದ ಮನನೊಂದಿದ್ದ ಗಣೇಶ್‌ಮೂರ್ತಿ, ಮಾ.24ರಂದು ತಮ್ಮ ಮನೆಯಲ್ಲಿ ವಿಷಕಾರಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಗಣೇಶ್‌ಮೂರ್ತಿ ಮರಣದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌, ಪ್ರತಿಪಕ್ಷ ನಾಯಕ ಪಳನಿಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಎಂಡಿಎಂಕೆ ಪಕ್ಷದ ಸಂಸ್ಥಾಪಕ ವೈಕೋ ಸೇರಿ ಎಲ್ಲ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ. 

ಅವರ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಸ್ವಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಗಣೇಶ್‌ಮೂರ್ತಿ ಅವರು 1998ರಲ್ಲಿ ಪಳನಿ ಕ್ಷೇತ್ರದಿಂದಲೂ, 2009ರಲ್ಲಿ ಈರೋಡ್‌ ಕ್ಷೇತ್ರದಿಂದಲೂ ಸಂಸದರಾಗಿ ಆಯ್ಕೆಯಾಗಿದ್ದರು.

Share this article