ಜೈಪುರ : ರಾಜಸ್ಥಾನದ ಝಾಲಾವಾಡ್ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರಾರ್ಥನೆಗೆಂದು ಸೇರಿದ್ದ ವೇಳೆ, ಶಿಥಿಲವಾಗಿದ್ದ ಶಾಲಾ ಕಟ್ಟಡದ ಭಾಗವೊಂದು ಕುಸಿದು 7 ಮಕ್ಕಳು ದಾರುಣವಾಗಿ ಸಾವನ್ನಪ್ಪಿ, 28 ಜನ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಝಾಲಾವಾಡ್ನ ಮನೋಹರ್ತನ ವಿಭಾಗದ ಪಿಪ್ಲೋಡಿ ಎಂಬಲ್ಲಿ ಶಾಲೆಯ 6 ಮತ್ತು 7ನೇ ತರಗತಿಯಿದ್ದ ಭಾಗ ಧರಾಶಾಯಿಯಾಗಿದೆ. ಕುಸಿದ ಕಟ್ಟಡದ ಕಾಂಗ್ರೀಟ್ ತುಂಡುಗಳು, ಇಟ್ಟಿಗಳ ಅವಶೇಷಗಳಡಿ 35ಕ್ಕೂ ಹೆಚ್ಚು ಮಕ್ಕಳು ಸಿಲುಕಿಕೊಂಡಿದ್ದರು. ಕೂಡಲೇ ಸ್ಥಳದಲ್ಲಿದ್ದ ಶಿಕ್ಷಕರು, ಪೋಷಕರು ಮತ್ತು ಸ್ಥಳೀಯರು ಸಾಧ್ಯವಾದಷ್ಟು ಜನರನ್ನು ಹುಡುಕಿ ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 9 ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 7 ಮೃತರಲ್ಲಿ 5 ಮಕ್ಕಳ ಗುರುತು ಪತ್ತೆಯಾಗಿದೆ. ಈ ಬಗ್ಗೆ 7.45ರ ಹೊತ್ತಿಗೆ ಮನೋಹರ್ತನ ಪೊಲೀಸರಿಗೆ ಮಾಹಿತಿ ದೊರಕಿದ್ದು, ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಠಾಣೆಯ ಅಧಿಕಾರಿ ನೀಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ, ಸ್ಥಳೀಯರ ಆಕ್ರೋಶ: ಅತ್ತ, ‘ಈ ದುರ್ಘಟನೆ ಸಂಭವಿಸಲು ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಕಟ್ಟಡ ಶಿಥಿಲವಾಗಿದ್ದರೂ ಸರಿಪಡಿಸಿರಲಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಶಾಲೆಯ ಸ್ಥಿತಿ ಬಗ್ಗೆ ಈಗಾಗಲೇ ತಹಶಿಲ್ದಾರರು ಮತ್ತು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ಗೆ ತಿಳಿಸಿದ್ದೆವು. ಆದರೆ ಅವು ಯಾವುದೇ ಕ್ರಮ ಕೈಗೊಂಡಿರಲಿಲ್ಲ’ ಎಂದು ಆರೋಪಿಸಿದ್ದಾರೆ. ಮರದ ಕೊಂಬೆಯೊಂದು ಗೋಡೆಯನ್ನು ಸೀಳಿಕೊಂಡು ಬಂದಿದ್ದು, ನೀರು ಸೋರುತ್ತಿತ್ತು ಎಂದು ವಿದ್ಯಾರ್ಥಿಯೊಬ್ಬರು ದೂರಿದ್ದಾರೆ.