ಉಚಿತ ಕೊಡುಗೆ ಎಫೆಕ್ಟ್‌ : ರಾಜಧಾನಿ ದಿಲ್ಲಿ ಸರ್ಕಾರ ಬೊಕ್ಕಸ ಖಾಲಿ? ಆರ್ಥಿಕ ಬಿಕ್ಕಟ್ಟಿನತ್ತ ಹೆಜ್ಜೆ

KannadaprabhaNewsNetwork |  
Published : Jan 19, 2025, 02:15 AM ISTUpdated : Jan 19, 2025, 04:55 AM IST
Aravind Kejriwal

ಸಾರಾಂಶ

ದೇಶದಲ್ಲೇ ಮೊದಲ ಬಾರಿಗೆ ಉಚಿತ ಕುಡಿಯುವ ನೀರು, ಉಚಿತ ವಿದ್ಯುತ್‌ ಪೂರೈಕೆಯಂಥ ಯೋಜನೆಗಳು ಜಾರಿಯಾದ ಆಮ್‌ಆದ್ಮಿ ಪಕ್ಷದ ಆಡಳಿತವಿರುವ ರಾಜಧಾನಿ ದೆಹಲಿ, ಉಚಿತ ಕೊಡುಗೆ ಯೋಜನೆಗಳ ಪರಿಣಾಮ ಆರ್ಥಿಕ ಬಿಕ್ಕಟ್ಟಿನತ್ತ ಹೆಜ್ಜೆ ಹಾಕುತ್ತಿರುವ ಲಕ್ಷಣಗಳು ಕಂಡುಬಂದಿವೆ.

ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ಉಚಿತ ಕುಡಿಯುವ ನೀರು, ಉಚಿತ ವಿದ್ಯುತ್‌ ಪೂರೈಕೆಯಂಥ ಯೋಜನೆಗಳು ಜಾರಿಯಾದ ಆಮ್‌ಆದ್ಮಿ ಪಕ್ಷದ ಆಡಳಿತವಿರುವ ರಾಜಧಾನಿ ದೆಹಲಿ, ಉಚಿತ ಕೊಡುಗೆ ಯೋಜನೆಗಳ ಪರಿಣಾಮ ಆರ್ಥಿಕ ಬಿಕ್ಕಟ್ಟಿನತ್ತ ಹೆಜ್ಜೆ ಹಾಕುತ್ತಿರುವ ಲಕ್ಷಣಗಳು ಕಂಡುಬಂದಿವೆ.

ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಉಚಿತ ಕೊಡುಗೆ ಅಥವಾ ಸಬ್ಸಿಡಿಗಾಗಿ ನೀಡುವ ಹಣದ ಮೊತ್ತದಲ್ಲಿ ಶೇ.600ರಷ್ಟು ಭಾರೀ ಏರಿಕೆ ಕಂಡುಬಂದಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಜೊತೆಗೆ ಕಳೆದ 3 ದಶಕಗಳಲ್ಲೇ ಮೊದಲ ಬಾರಿಗೆ ಈ ವರ್ಷ ರಾಜ್ಯವು ಕೊರತೆ ಬಜೆಟ್‌ ಎದುರಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಸಬ್ಸಿಡಿ ಹೊರೆ:

2014-15ರಲ್ಲಿ ಕೇಜ್ರಿವಾಲ್‌ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ ಸೀಮಿತ ಅವಧಿಗೆ ರಾಷ್ಟ್ರಪತಿ ಆಳ್ವಿಕೆ ಇತ್ತು. ಈ ವೇಳೆ ಸಬ್ಸಿಡಿಗೆ ರಾಜ್ಯ ಸರ್ಕಾರ ಮಾಡಿದ್ದ ವಾರ್ಷಿಕ ವೆಚ್ಚ 1554 ಕೋಟಿ ರು. ನಷ್ಟಿತ್ತು. ಆದರೆ ನಂತರದ 10 ವರ್ಷಗಳ ಕಾಲ ಸತತ ಆಮ್‌ಆದ್ಮಿ ಪಕ್ಷದ ಆಳ್ವಿಕೆ ಕಂಡ ರಾಜ್ಯದಲ್ಲೀಗ ಸಬ್ಸಿಡಿ ಮೊತ್ತ 10995 ಕೋಟಿ ರು.ಗೆ ಏರಿದೆ. ಪರಿಣಾಮ 2025-26ನೇ ಹಣಕಾಸು ವರ್ಷದಲ್ಲಿ ದೆಹಲಿಯು ಆದಾಯ ಕೊರತೆಯ ರಾಜ್ಯವಾಗಿ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸುಮ್ಮನಾಗದ ಪಕ್ಷಗಳು:

ಇದು ಸಾಲದೆಂಬಂತೆ ಹಾಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಗೆದ್ದರೆ ಈಗಿರುವ ಉಚಿತ ಕೊಡುಗೆಗಳ ಜೊತೆಗೆ ಇನ್ನಷ್ಟು ಕೊಡುಗೆ ನೀಡುವುದಾಗಿ ಈಗಾಗಲೇ ಆಪ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಘೋಷಿಸಿವೆ. ಹೀಗಾಗಿ ರಾಜ್ಯದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಎಲ್ಲಾ ಲಕ್ಷಣಗಳೂ ಇವೆ.

ಹಾಲಿ ದೆಹಲಿ ಸರ್ಕಾರವು, ಒಂಬತ್ತು ಇಲಾಖೆಗಳ 27 ಯೋಜನೆಗಳಡಿ ವಿವಿಧ ರೀತಿಯ ಸಬ್ಸಿಡಿ ನೀಡುತ್ತಿದೆ.

- 10 ವರ್ಷದಲ್ಲಿ ಯೋಜನೆಗಳಿಗೆ ಸಬ್ಸಿಡಿ ಶೇ.600ರಷ್ಟು ಏರಿಕೆ

- 3 ದಶಕದಲ್ಲೇ ಮೊದಲ ಸಲ ಕೊರತೆ ಬಜೆಟ್‌ನತ್ತ ದಿಲ್ಲಿ ಸರ್ಕಾರ

ದಿಲ್ಲಿಯಲ್ಲಿ ಆಗಿದ್ದೇನು?

- ದೇಶದಲ್ಲೇ ಮೊದಲ ಬಾರಿ ದಿಲ್ಲಿಯಲ್ಲಿ ಉಚಿತ ಕುಡಿವ ನೀರು/ ವಿದ್ಯುತ್‌ ಯೋಜನೆ ಜಾರಿ

- ಆಮ್‌ ಆದ್ಮಿ ಪಕ್ಷ ಜಾರಿ ಮಾಡಿದ ಸ್ಕೀಂಗಳಿಂದ ಸಬ್ಸಿಡಿ ಮೊತ್ತ ಶೇ.600ರಷ್ಟು ಎರಿಕೆ

- ಸಬ್ಸಿಡಿ ಭಾರದಿಂದ ಈ ವರ್ಷ ರಾಜ್ಯವು ಕೊರತೆ ಬಜೆಟ್‌ ಎದುರಿಸುವ ಸಾಧ್ಯತೆ

- ತಲಾದಾಯದಲ್ಲಿ ಸಿರಿವಂತ ಆಗಿರುವ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟಿನ ಆತಂಕ

- ಇಷ್ಟಾದರೂ ಈ ಚುನಾವಣೆಯಲ್ಲಿ ಫ್ರೀ ಕೊಡುಗೆ ಘೋಷಣೆ ನಿಲ್ಲಿಸದ ಪಕ್ಷಗಳು

ದಿಲ್ಲಿಯಲ್ಲಿ ಬಾಲಕರಿಗೂ ಉಚಿತ ಬಸ್‌ ಯಾನ: ಆಪ್‌ ಮತ್ತೊಂದು ಭರವಸೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
6 ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ