ಪರೀಕ್ಷೆ ಹಿಂದಿನ ದಿನವೇ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ!

KannadaprabhaNewsNetwork |  
Published : Jun 21, 2024, 01:08 AM ISTUpdated : Jun 21, 2024, 05:02 AM IST
ನೆಟ್‌ ಪರೀಕ್ಷೆ | Kannada Prabha

ಸಾರಾಂಶ

ನೀಟ್‌ ಪರೀಕ್ಷೆಯ ಮತ್ತಷ್ಟು ಕರ್ಮಕಾಂಡ ಬಯಲಾಗಿದ್ದು, ಬಿಹಾರದಲ್ಲಿ ಪರೀಕ್ಷೆಯ ಹಿಂದಿನ ದಿನವೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿತ್ತು ಎಂದು ಬಿಹಾರದಲ್ಲಿ ಬಂಧಿತರಾಗಿರುವ ಹಗರಣದ ಮಾಸ್ಟರ್‌ಮೈಂಡ್‌ ಮತ್ತು ಆರೋಪಿ ವಿದ್ಯಾರ್ಥಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಪಟನಾ: ನೀಟ್‌ ಪರೀಕ್ಷೆಯ ಮತ್ತಷ್ಟು ಕರ್ಮಕಾಂಡ ಬಯಲಾಗಿದ್ದು, ಬಿಹಾರದಲ್ಲಿ ಪರೀಕ್ಷೆಯ ಹಿಂದಿನ ದಿನವೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿತ್ತು ಎಂದು ಬಿಹಾರದಲ್ಲಿ ಬಂಧಿತರಾಗಿರುವ ಹಗರಣದ ಮಾಸ್ಟರ್‌ಮೈಂಡ್‌ ಮತ್ತು ಆರೋಪಿ ವಿದ್ಯಾರ್ಥಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಪಶ್ನೆಪತ್ರಿಕೆಯ ಮಾಸ್ಟರ್‌ಮೈಂಡ್‌ ಎನ್ನಲಾದ ಅಮಿತ್‌ ಆನಂದ್‌, ‘ಪರೀಕ್ಷೆಯ ಹಿಂದಿನ ದಿನವೇ ನಾವು ಆಯ್ದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಮತ್ತು ಉತ್ತರಪತ್ರಿಕೆ ಎರಡನ್ನೂ ನೀಡಿದ್ದೆವು. ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ಮನನ ಮಾಡಿಕೊಂಡು ಮಾರನೇ ದಿನದ ಪರೀಕ್ಷೆಗೆ ಸಿದ್ದರಾಗುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದೆವು. ಇದಕ್ಕಾಗಿ ಪ್ರತಿ ವಿದ್ಯಾರ್ಥಿಯಿಂದ 30-32 ಲಕ್ಷ ರು. ಪಡೆಯಲಾಗಿತ್ತು’ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ

 ಎನ್ನಲಾಗಿದೆ.ಇನ್ನೊಂದೆಡೆ ಪ್ರಕರಣದ ಸಂಬಂಧ ಬಂಧಿತ ವಿದ್ಯಾರ್ಥಿ ಅನುರಾಗ್‌ ಯಾದವ್‌ ಎಂಬಾತ ಕೂಡಾ ಇದೇ ವಿಷಯವನ್ನು ಪೊಲೀಸರ ಬಳಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಅನುರಾಗ್‌ ಯಾದವ್‌ನ ಸಂಬಂಧ ಸಿಕಂದರ್‌ ಎಂಬಾತ ಕೂಡಾ ಆರೋಪಿಯಾಗಿದ್ದಾನೆ.ಅಲ್ಲದೆ, ‘ನೀಟ್‌ ಸೇರಿದಂತೆ ಯಾವುದೇ ಪ್ರಶ್ನೆಪತ್ರಿಕೆಯನ್ನು ಬೇಕಾದರೂ ಸೋರಿಕೆ ಮಾಡುವ ಸಾಮರ್ಥ್ಯ ನಮಗಿದೆ. ಪ್ರತಿ ಪತ್ರಿಕೆಗೆ 30-32 ಶುಲ್ಕ ಇರಲಿದೆ ಎಂದು ಮಾಸ್ಟರ್‌ಮೈಂಡ್‌ ಅಮಿತ್‌ ಆನಂದ್‌ ತಮಗೆ ತಿಳಿಸಿದ್ದ’ ಎಂದ ಆರೋಪಿ ಸಿಖಂದರ್‌ ವಿಚಾರಣೆ ವೇಳೆ ತಿಳಿಸಿದ್ದಾನೆ.

==

ನೀಟ್‌, ನೆಟ್‌ ಅಕ್ರಮ: ಮೋದಿಗೆ ರಾಹುಲ್‌ ಪ್ರಹಾರ

ನವದೆಹಲಿ: ನೀಟ್‌ ಮತ್ತು ನೆಟ್‌ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ರಷ್ಯಾ- ಉಕ್ರೇನ್‌ ಯುದ್ಧ ತಡೆದೆ ಎನ್ನುವ ಪ್ರಧಾನಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ಮೋದಿ ಮಾನಸಿಕವಾಗಿ ಕುಸಿದು ಹೋಗಿದ್ದಾರೆ ಮತ್ತು ಅವರು ಸರ್ಕಾರ ನಡೆಸಲು ಇದೇ ರೀತಿಯಲ್ಲಿ ಹೆಣಗಾಡಲಿದ್ದಾರೆ’ ಎಂದು ಟೀಕಿಸಿದರು.

ಸದ್ಯಕ್ಕೆ ಮೋದಿ ಅವರ ಆದ್ಯತೆ ಸಂಸತ್ತಿನಲ್ಲಿ ಸ್ಪೀಕರ್‌ ಹುದ್ದೆ ಪಡೆಯುವುದೇ ಹೊರತು ನೀಟ್‌ ವಿದ್ಯಾರ್ಥಿಗಳ ಸಮಸ್ಯೆ ಆಲಿಸುವುದಲ್ಲ ಎಂದ ರಾಹುಲ್‌, ‘ನಾವೀಗ ಮಾನಸಿಕವಾಗಿ ಜರ್ಝರಿತರಾಗಿರುವ, ಕುಸಿದು ಹೋಗಿರುವ, ಕೆಲಸ ಮಾಡಲೂ ಕಷ್ಟವಾಗಿರುವ ಪ್ರಧಾನಿ ಮತ್ತು ಅವರ ಸರ್ಕಾರವನ್ನು ಹೊಂದಿದ್ದೇವೆ. ರಷ್ಯಾ- ಉಕ್ರೇನ್‌ ಯುದ್ಧ ತಡೆದೆ ಎನ್ನುವ ಪ್ರಧಾನಿಗೆ ಇದೀಗ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲಾಗುತ್ತಿಲ್ಲ ಮತ್ತು ಅವರ ಅದನ್ನು ಬಯಸುತ್ತಲೂ ಇಲ್ಲ’ ಎಂದು ಕಿಡಿಕಾರಿದರು.

‘ನನ್ನ ಭಾರತ್‌ ಜೋಡೋ ಯಾತ್ರೆ ವೇಳೆ ಕೂಡಾ ಸಾವಿರಾರು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ದೂರು ನೀಡಿದ್ದರು. ಮಧ್ಯಪ್ರದೇಶದಲ್ಲಿ ನಡೆದ ವ್ಯಾಪಂ ಹಗರಣವನ್ನು ದೇಶವ್ಯಾಪಿ ವಿಸ್ತರಿಸುವ ಚಿಂತನೆ ನಡೆದಿದೆ. ಈ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ನಾವು ಸಂಸತ್ತಿನಲ್ಲೂ ಪ್ರಶ್ನೆ ಮಾಡಲಿದ್ದೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೂ ಒತ್ತಡ ಹೇರಲಿದ್ದೇವೆ’ ಎಂದು ರಾಹುಲ್‌ ಹೇಳಿದರು.

‘ದೇಶದಲ್ಲಿ ಪದೇಪದೇ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆಗೆ ಬಿಜೆಪಿ ಮತ್ತು ಅದರ ಮಾತೃ ಸಂಘಟನೆಗಳಾದ ಆರ್‌ಎಸ್‌ಎಸ್‌ ಶಿಕ್ಷಣ ಸಂಸ್ಥೆಗಳನ್ನು ತಮ್ಮ ವಶಕ್ಕೆ ಪಡೆದಿರುವುದೇ ಮುಖ್ಯ ಕಾರಣ. ಇದು ಬದಲಾಗದ ಹೊರತು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ನಿಲ್ಲದು’ ಎಂದು ಆರೋಪಿಸಿದರು.‘ಮೋದಿ ಅವರ ಮೂಲಭೂತ ಚಿಂತನೆಯನ್ನು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಪಕ್ಷಗಳು ಧೂಳೀಪಟ ಮಾಡಿವೆ. ಮಾನವೀಯತೆಯಲ್ಲಿ ನಂಬಿಕೆ ಇಟ್ಟಿದ್ದ ಅಟಲ್‌ ಬಿಹಾರಿ ವಾಜಪೇಯಿ ಅಥವಾ ಮನಮೋಹನ್‌ಸಿಂಗ್‌ ಅವರು ಪ್ರಧಾನಿಗಳಾಗಿದ್ದರೆ ಈ ಸರ್ಕಾರ ಉಳಿಯಬಹುದಿತ್ತು’ ಎಂದು ರಾಹುಲ್‌ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶೀಘ್ರ ಡೀಲ್‌ ಆಗದಿದ್ರೆ ಭೀಕರ ದಾಳಿ : ಟ್ರಂಪ್‌
59 ವರ್ಷ ಬಳಿಕ ಈಗ ಭಾರತ ನಕ್ಸಲ್‌ ಮುಕ್ತ