ಅಯೋಧ್ಯೆ ರಾಮಮಂದಿರ: ಕನ್ನಡಿಗನ ವಿಗ್ರಹವೇ ಆಯ್ಕೆ ಏಕೆ?

KannadaprabhaNewsNetwork |  
Published : Jan 22, 2024, 02:18 AM ISTUpdated : Jan 22, 2024, 12:17 PM IST
ArunYogiraj

ಸಾರಾಂಶ

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು   ದೇಶದ ಮೂವರು ಶಿಲ್ಪಿಗಳು ಕೆತ್ತಿದ ರಾಮಲಲ್ಲಾ ವಿಗ್ರಹದ ಪೈಕಿ ಮೈಸೂರಿನ ಅರುಣ್‌ ಅವರು ಕೆತ್ತನೆ ಮಾಡಿದ ವಿಗ್ರಹವೇ ಏಕೆ ಆಯಿತು ಎಂಬುದರ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಖಜಾಂಚಿ ಬೆಳಕು ಚೆಲ್ಲಿದ್ದಾರೆ.

ಅಯೋಧ್ಯೆ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ಮೈಸೂರಿನ ಅರುಣ್‌ ಯೋಗಿರಾಜ್‌ ಸೇರಿದಂತೆ ದೇಶದ ಮೂವರು ಶಿಲ್ಪಿಗಳು ಕೆತ್ತಿದ ರಾಮಲಲ್ಲಾ ವಿಗ್ರಹದ ಪೈಕಿ ಅರುಣ್‌ ಅವರು ಕೆತ್ತನೆ ಮಾಡಿದ ವಿಗ್ರಹವೇ ಏಕೆ ಆಯಿತು ಎಂಬುದರ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಖಜಾಂಚಿ ಬೆಳಕು ಚೆಲ್ಲಿದ್ದಾರೆ.

ರಾಮಲಲ್ಲಾ ವಿಗ್ರಹ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಖಜಾಂಚಿ ಗೋವಿಂದ್ ದೇವ್‌ ಗಿರಿ, ‘ಮೂರರಲ್ಲಿ ಒಂದು ವಿಗ್ರಹವನ್ನು ಆಯ್ಕೆ ಮಾಡುವುದು ನಮಗೆ ತುಂಬಾ ಕಷ್ಟಕರವಾಗಿತ್ತು. 

ಏಕೆಂದರೆ ಮೂವರೂ ಶಿಲ್ಪಿಗಳು ಸೊಗಸಾಗಿ ವಿಗ್ರಹಗಳನ್ನು ಕೆತ್ತನೆ ಮಾಡಿದ್ದರು ಮತ್ತು ವಿಗ್ರಹ ಕೆತ್ತನೆಗೆ ನೀಡಲಾಗಿದ್ದ ಎಲ್ಲಾ ಮಾನದಂಡಗಳನ್ನು ಅನುಸರಿಸಿದ್ದರು.

 ಶ್ರೀರಾಮನ ವಿಗ್ರಹದ ಮುಖವು 5 ವರ್ಷದ ಮುಗ್ಧ ಮಗುವಿನಂತೆಯೂ, ದೈವಿಕ ಕಳೆಯ ತೇಜಸ್ಸಿನಿಂದಲೂ ಹೊಳೆಯಬೇಕು ಎಂಬುದು ಮಾನದಂಡವಾಗಿತ್ತು. ಅಲ್ಲದೇ ಶ್ರೀರಾಮನು ‘ಅಜಾನುಬಾಹು’ (ಕೈಗಳು ಮೊಣಕಾಲನ್ನು ತಲುಪುವ ವ್ಯಕ್ತಿ) ಆಗಿದ್ದ. 

ಹೀಗಾಗಿ ವಿಗ್ರಹದ ಕೈ ಅಥವಾ ತೋಳುಗಳು ಉದ್ದವಾಗಿರಬೇಕು. ಇದೀಗ ಆಯ್ಕೆಯಾಗಿರುವ ವಿಗ್ರಹದಲ್ಲಿ ಈ ಎಲ್ಲ ಅಂಶಗಳು ಪೂರ್ಣಗೊಂಡಿವೆ. ಹೀಗಾಗಿ ಅದನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು. 

ಅಲ್ಲದೇ ‘ಆಯ್ಕೆಯಾಗಿರುವ ವಿಗ್ರಹದಲ್ಲಿ ಆಭರಣಗಳ ಸೂಕ್ಷ್ಮ ಕೆತ್ತನೆ ಸೊಗಸಾಗಿದೆ. ಅಲ್ಲದೇ ಆ ವಿಗ್ರಹದಲ್ಲಿ ಮಗುವಿನ ಮುಗ್ಧತೆಯ ಸ್ವಭಾವವು ಸೂಕ್ಷ್ಮವಾಗಿ ಗೋಚರಿತು. 

ಪ್ರತಿ ತಿಂಗಳು ವಿಗ್ರಹ ಕೆತ್ತನೆ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೆವು. ನಾಲ್ಕರಿಂದ ಐದು ತಿಂಗಳ ಅವಧಿಯಲ್ಲಿ ಶಿಲ್ಪಿಗಳು ವಿಗ್ರಹವನ್ನು ಪೂರ್ಣಗೊಳಿಸಿದರು. ಮೂರೂ ವಿಗ್ರಹಗಳ ಕೆತ್ತನೆ ಬಳಿಕ ಕೊನೆಗೆ ಈಗ ಪ್ರತಿಷ್ಠಾಪನೆಯಾಗಲಿರುವ ವಿಗ್ರಹವನ್ನು ಆಯ್ಕೆ ಮಾಡಿದೆವು’ ಎಂದು ತಿಳಿಸಿದ್ದಾರೆ.

ಇನ್ನಿಬ್ಬರು ಕೆತ್ತಿದ ವಿಗ್ರಹಗಳೇನಾಗಲಿವೆ?
ಮೂರರಲ್ಲಿ ಆಯ್ಕೆಯಾದ ಒಂದು ವಿಗ್ರಹವನ್ನು ಹೊರತುಪಡಿಸಿ, ಉಳಿದ 2 ವಿಗ್ರಹಗಳು ಏನಾಗುತ್ತವೆ ಎಂಬುದರ ಕುರಿತೂ ಮಾಹಿತಿ ನೀಡಿರುವ ಗೋವಿಂದ್‌ ‘ಉಳಿದ 2 ವಿಗ್ರಹಗಳನ್ನೂ ಎಲ್ಲ ಗೌರವಗಳೊಂದಿಗೆ ದೇವಸ್ಥಾನದಲ್ಲಿ ಇರಿಸುತ್ತೇವೆ. 

ಸದ್ಯ ಆಯ್ಕೆಯಾಗಿರುವ ರಾಮಲಲ್ಲಾ ಮೂರ್ತಿಗೆ ಆಭರಣ ಮತ್ತು ಬಟ್ಟೆಗಳ ಅಳತೆಗಾಗಿ ಒಂದು ವಿಗ್ರಹವನ್ನು ಟ್ರಸ್ಟ್‌ ಇರಿಸಿಕೊಳ್ಳುತ್ತದೆ’ ಎಂದಿದ್ದಾರೆ.

ಹಳೆಯ ರಾಮಲಲ್ಲಾ ವಿಗ್ರಹ: ಈ ಹಿಂದೆ ಅಯೋಧ್ಯೆಯಲ್ಲಿ ಪೂಜಿಸಲಾಗುತ್ತಿದ್ದ ಹಳೆಯ ರಾಮಲಲ್ಲಾ ಮೂರ್ತಿಯನ್ನೂ ಮಂದಿರದಲ್ಲಿ ರಾಮ ವಿಗ್ರಹದ ಮುಂದೆ ಇರಿಸಲಾಗುವುದು. 

ಈ ಮೂಲ ವಿಗ್ರಹವು ಬಹಳ ಮುಖ್ಯವಾದದ್ದು. ಇದು ಐದರಿಂದ ಆರು ಇಂಚು ಎತ್ತರವಾಗಿದ್ದು, 25 ರಿಂದ 30 ಅಡಿ ದೂರದಿಂದ ಭಕ್ತರಿಗೆ ಗೋಚರವಾಗುವುದಿಲ್ಲ. ಹೀಗಾಗಿಯೇ ದೊಡ್ಡ ವಿಗ್ರಹ ಬೇಕಿತ್ತು ಎಂದು ತಿಳಿಸಿದ್ದಾರೆ.

PREV

Latest Stories

ನಿಮಿಷಪ್ರಿಯಾಗೆ ಕ್ಷಮಾದಾನ ಬೇಡ, ಗಲ್ಲಾಗಲಿ
ಅಕ್ಬರ್‌ ಕ್ರೂರ, ಆದರೆ ಸಹಿಷ್ಣು, ಬಾಬರ್‌ ನಿರ್ದಯಿ: ಕೇಂದ್ರೀಯ ಪಠ್ಯ
ದೇಶದಲ್ಲಿ 9 ಲಕ್ಷ ಮಕ್ಕಳು ಒಂದೂ ಲಸಿಕೆ ಪಡೆದಿಲ್ಲ: ವರದಿ