ಮೋದಿ, ಶ್ರೀರಾಮ್‌ ಜೈಕಾರ ಕೇಳಿ ಸಿಟ್ಟಿಗೆದ್ದ ರಾಹುಲ್‌!

KannadaprabhaNewsNetwork | Updated : Jan 22 2024, 09:29 AM IST

ಅಸ್ಸಾಂನಲ್ಲಿ ಭಾರತ್‌ ಜೊಡೊ ನ್ಯಾಯ ಯಾತ್ರೆ ನಡೆಯುತ್ತಿದ್ದ ವೇಳೆ ಕೆಲವರು ಮೋದಿ ಹಾಗೂ ಜೈಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಬಸ್‌ನಿಂದ ಕೆಳಗಿಳಿದು ರಾಹುಲ್‌ ಗಾಂಧಿ ಘೋಷಣೆ ಕೂಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ನಾಗಾಂವ್‌ (ಅಸ್ಸಾಂ): ಭಾರತ್‌ ಜೊಡೋ ನ್ಯಾಯ ಯಾತ್ರೆಯ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ್‌ ಮತ್ತು ನರೇಂದ್ರ ಮೋದಿಗೆ ಜೈಕಾರ ಕೂಗಿದ ಘಟನೆ ಭಾನುವಾರ ನಡೆದಿದೆ.

ಇದರಿಂದ ಸಿಟ್ಟಿಗೆದ್ದ ರಾಹುಲ್‌ ಬಸ್‌ ನಿಲ್ಲಿಸಲು ಹೇಳಿ ತಾವೇ ಆವೇಶದಿಂದ ಕೆಳಗಿಳಿದು ಘೋಷಣೆ ಕೂಗಿದವರತ್ತ ನುಗ್ಗಿ ಹೋಗಿದ್ದಾರೆ.

ಈ ವೇಳೆ ಪೊಲೀಸರು ಘೋಷಣೆ ಕೂಗಿದವರು ಮತ್ತು ರಾಹುಲ್‌ ನಡುವೆ ತಡೆಗೋಡೆಯಂತೆ ನಿಂತು ಪರಿಸ್ಥಿತಿ ಕೈಮೀರದಂತೆ ನೋಡಿಕೊಂಡಿದ್ದಾರೆ.

ಬಳಿಕ ಸ್ವಲ್ಪ ಶಾಂತರಾದ ರಾಹುಲ್‌ ಬಿಜೆಪಿ ಕಾರ್ಯಕರ್ತರತ್ತ ಫ್ಲೈಯಿಂಗ್‌ ಕಿಸ್‌ ಕೊಟ್ಟು ಮುಂದೆ ಸಾಗಿದ್ದಾರೆ.

ನಂತರ ಸಾರ್ವಜನಿಕ ಭಾಷಣದಲ್ಲಿ ಮಾತನಾಡುತ್ತಾ, ‘ನಾನು ಬಸ್‌ನಿಂದ ಕೆಳಗಿಳಿದುದನ್ನು ನೋಡಿ ದೊಣ್ಣೆ ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರು ಹೆದರಿ ಪರಾರಿಯಾದರು.

ಈ ಘಟನೆಯಿಂದ ನಾವು ಯಾರಿಗೂ ಹೆದರುವುದಿಲ್ಲ’ ಎಂದು ತಿಳಿಸಿದರು. ಬಳಿಕ ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ ರಾಹುಲ್‌, ‘ನಾವು ಎಲ್ಲೆಡೆಯೂ ಪ್ರೀತಿ, ಸಹನೆಯ ಅಂಗಡಿ(ಪ್ರೇಮ್‌ ಕಿ ದುಕಾನ್‌) ತೆರೆದು ಶಾಂತಿ ಸೌಹಾರ್ದತೆಯನ್ನು ಪಸರಿಸುತ್ತೇವೆ’ ಎಂದು ಅಬ್ಬರಿಸಿದರು.