ಕೇಂದ್ರದಿಂದ ಭಾರತ ಮಾತೆ ಮಾರಾಟ: ರಾಗಾ ಕಿಡಿ

KannadaprabhaNewsNetwork |  
Published : Feb 12, 2026, 02:00 AM IST
ರಾಹುಲ್‌ | Kannada Prabha

ಸಾರಾಂಶ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಮುಂದಿಟ್ಟುಕೊಂಡು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಮತ್ತೊಮ್ಮೆ ಮೋದಿ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ‘ಮೋದಿ ಸರ್ಕಾರವು ಭಾರತ ಮಾತೆಯನ್ನೇ ಮಾರಾಟ ಮಾಡಿದೆ. ಇದು ಸಂಪೂರ್ಣ (ಹೋಲ್‌ಸೇಲ್) ಶರಣಾಗತಿಯಾಗಿದೆ’ ಎಂದಿದ್ದಾರೆ.

ಅಮೆರಿಕ ಡೀಲ್‌ ಮೂಲಕ ಹೋಲ್‌ಸೇಲ್‌ ಶರಣಾಗತಿ

ಮೋದಿ ಸರ್ಕಾರ ವಿರುದ್ಧ ಲೋಕಸಭೆಯಲ್ಲಿ ವಾಗ್ದಾಳಿ

ದೇಶದ ಇಂಧನ ಭದ್ರತೆ ಅಮೆರಿಕದ ಕೈಗಿತ್ತಿದ್ದೀರಿತೈಲ ಖರೀದಿಗೂ ಇನ್ನು ಅಮೆರಿಕದ ಅನುಮತಿ ಬೇಕು

ರೈತರ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಂಡಿದ್ದೀರಿ ಅಮೆರಿಕ ಜತೆ ಇಂಥ ಒಪ್ಪಂದ ಮಾಡಿದ್ದು ಸರಿಯಲ್ಲ

ಇಂಥ ಒಪ್ಪಂದಕ್ಕೆ ನಿಮಗೆ ನಾಚಿಕೆಯಾಗುವುದಿಲ್ಲವೇ?

ಲೋಕಸಭೆಯಲ್ಲಿ ಸರ್ಕಾರಕ್ಕೆ ರಾಹುಲ್‌ ಗಾಂಧಿ ತರಾಟೆ

ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಮುಂದಿಟ್ಟುಕೊಂಡು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಮತ್ತೊಮ್ಮೆ ಮೋದಿ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ‘ಮೋದಿ ಸರ್ಕಾರವು ಭಾರತ ಮಾತೆಯನ್ನೇ ಮಾರಾಟ ಮಾಡಿದೆ. ಇದು ಸಂಪೂರ್ಣ (ಹೋಲ್‌ಸೇಲ್) ಶರಣಾಗತಿಯಾಗಿದೆ’ ಎಂದಿದ್ದಾರೆ.

ಕೇಂದ್ರ ಬಜೆಟ್‌ನ ಚರ್ಚೆಯಲ್ಲಿ ಬುಧವಾರ ಲೋಕಸಭೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಭಾರತದ ಇಂಧನ ಭದ್ರತೆಯನ್ನು ಅಮೆರಿಕದ ಕೈಗಿತ್ತಿದ್ದಲ್ಲದೆ, ರೈತರ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ. ಇದು ಸಮಾನರ ನಡುವಿನ ಒಪ್ಪಂದವಲ್ಲ, ಈ ರೀತಿಯ ಒಪ್ಪಂದ ಮಾಡಿಕೊಂಡಿದಕ್ಕಾಗಿ ನಿಮಗೆ ನಾಚಿಕೆಯಾಗುವುದಿಲ್ಲೇ? ಎಂದು ತರಾಟೆಗೆ ತೆಗೆದುಕೊಂಡರು.

‘ಕುತ್ತಿಗೆಪಟ್ಟಿ ಹಿಡಿಯದ ಹೊರತು ಮೋದಿ ಸೇರಿ ಯಾವುದೇ ಭಾರತದ ಪ್ರಧಾನಿಯೂ ಈ ರೀತಿಯ ಒಪ್ಪಂದಕ್ಕೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅಮೆರಿಕವು ಮೋದಿ ಅವರ ಕತ್ತಿನ ಪಟ್ಟಿ ಹಿಡಿದಿದ್ದರಿಂದಲೇ ಅವರು ಭಾರತವನ್ನು ಮಾರಾಟ ಮಾಡಿದರು’ ಎಂದು ಆರೋಪಿಸಿದರು.

ಇನ್ನು ಅಮೆರಿಕದ್ದೇ ನಿರ್ಧಾರ:

‘ಒಪ್ಪಂದದ ಪ್ರಕಾರ ಇನ್ನು ಮುಂದೆ ನಾವು ಯಾರಿಂದ ತೈಲ ಖರೀದಿಸಬೇಕೆಂಬುದನ್ನು ಅಮೆರಿಕ ನಿರ್ಧರಿಸಲಿದೆಯೇ ಹೊರತು ನಮ್ಮ ಪ್ರಧಾನಿ ಅಲ್ಲ. ನಾವು ಬೇರೆಡೆಯಿಂದ ತೈಲ ಖರೀದಿಸಿದರೆ ನಮ್ಮ ಮೇಲೆ ಶೇ.50 ತೆರಿಗೆ ವಿಧಿಸಿ ಶಿಕ್ಷಿಸಲಿದ್ದಾರೆ. ಅಮೆರಿಕನ್ನರಿಗೆ ನಮ್ಮ ಹಣಕಾಸು ಮತ್ತು ನಮ್ಮ ಇಂಧನವನ್ನು ನಮ್ಮ ವಿರುದ್ಧವೇ ಶಸ್ತ್ರವಾಗಿ ಬಳಸಲು ಈಗ ಅವಕಾಶ ಮಾಡಿಕೊಡಲಾಗಿದೆ. ಇದನ್ನೆಲ್ಲ ಸದನಕ್ಕೆ ಬಂದು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ನೀವು ಭಾರತವನ್ನು, ನಿಮ್ಮ ತಾಯಿ ಭಾರತ ಮಾತೆಯನ್ನೇ ಮಾರಾಟ ಮಾಡಿದ್ದೀರಿ. ನಾಚಿಕೆಯಾಗುವುದಿಲ್ಲವೇ?’ ಎಂದು ಆಡಳಿತಪಕ್ಷವನ್ನು ರಾಹುಲ್‌ ತರಾಟೆಗೆ ತೆಗೆದುಕೊಂಡರು.

ಇದು ಹೋಲ್‌ಸೇಲ್‌ ಸರೆಂಡರ್‌(ಸಂಪೂರ್ಣ ಶರಣಾಗತಿ) ಎಂದು ಆರೋಪಿಸಿದ ಅವರು, ‘ಇದು ಕೇವಲ ಪ್ರಧಾನಿ ಅವರ ಶರಣಾಗತಿ ಅಲ್ಲ, 1.5 ಶತಕೋಟಿ ಭಾರತೀಯರ ಭವಿಷ್ಯದ ಶರಣಾಗತಿ. ಮೋದಿ ಶರಣಾಗಿದ್ದು ಯಾಕೆಂದರೆ ಅಮೆರಿಕದಲ್ಲಿ ಪ್ರಕರಣ ಎದುರಿಸುತ್ತಿರುವ ಬಿಜೆಪಿಯ ಆರ್ಥಿಕ ವಾಸ್ತುಶಿಲ್ಪಿಯನ್ನು ರಕ್ಷಿಸುವ ಕಾರಣಕ್ಕೆ’ ಎಂದು ದೇಶದ ಶ್ರೀಮಂತ ಉದ್ಯಮಿಯೊಬ್ಬರ ಹೆಸರು ಎತ್ತದೇ ಆರೋಪಿಸಿದರು.

‘ನಾವು ಸಂಕಷ್ಟದ ಕಾಲಘಟ್ಟದತ್ತ ಸಾಗುತ್ತಿದ್ದೇವೆ, ನಮ್ಮ ದೇಶ, ನಮ್ಮ ಡೇಟಾ, ನಮ್ಮ ರೈತರ, ನಮ್ಮ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಗಳು, ನಮ್ಮ ಸೇನೆ, ನಮ್ಮ ಇಂಧನ ಭದ್ರತೆ ಎಲ್ಲವೂ ಮಾರಾಟವಾಗಿದೆ’ ಎಂದು ಕಿಡಿಕಾರಿದರು.

‘ನಮ್ಮ ಮೇಲೆ ಹಿಂದೆ ಸರಾಸರಿ ಶೇ.3ರಷ್ಟಿದ್ದ ತೆರಿಗೆ ಇದೀಗ ಶೇ.18ಕ್ಕೆ ಏರಿಕೆಯಾಗಿದೆ. ಆದರೆ ಅಮೆರಿಕ ವಸ್ತುಗಳ ಮೇಲಿನ ತೆರಿಗೆ ಶೇ.16ರಿಂದ ಶೂನ್ಯಕ್ಕಿಳಿದಿದೆ. ಅಮೆರಿಕದ ವಸ್ತುಗಳ ಆಮದು 4 ಲಕ್ಷ ಕೋಟಿಯಿಂದ 13 ಲಕ್ಷ ಕೋಟಿಗೆ ಏರಿಕೆಯಾಗಲಿದೆ’ ಎಂದು ದೂರಿದರು.

++++++

ನಾವು ಸೇವಕರಲ್ಲ, ಸಮಾನರು: ಟ್ರಂಪ್‌ಗೆ ರಾಗಾ

ಒಂದು ವೇಳೆ ಇಂಡಿಯಾ ಒಕ್ಕೂಟದ ಸರ್ಕಾರವೇನಾದರೂ ಇದ್ದಿದ್ದರೆ, ‘ನಾವು ಸೇವಕರಲ್ಲ. ನಮ್ಮನ್ನು ಸಮಾನರಂತೆ ಪರಿಗಣಿಸಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಹೇಳುತ್ತಿದ್ದೆವು ಎಂದರು.

‘ಮೊದಲನೆಯದಾಗಿ, ಅಮೆರಿಕ ತನ್ನ ಡಾಲರ್‌ ಅಧಿಪತ್ಯ ಉಳಿಸಿಕೊಳ್ಳಬೇಕಿದ್ದರೆ ಭಾರತದ ಡೇಟಾವನ್ನು ದೊಡ್ಡ ಸಂಪತ್ತು ಎಂಬುದನ್ನು ಗುರುತಿಸಬೇಕು. ಡೇಟಾ ಬೇಕಿದ್ದರೆ ನಮ್ಮನ್ನು ಸಮಾನರಂತೆ ಕಾಣಬೇಕೇ ಹೊರತು ಸೇವಕರಂತಲ್ಲ ಎನ್ನುತ್ತಿದ್ದೆವು. ಎರಡನೆಯದಾಗಿ, ಭಾರತದ ಇಂಧನ ಭದ್ರತೆ ವಿಚಾರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೆವು. ಮೂರನೆಯದಾಗಿ ನಿಮಗೆ ನಿಮ್ಮ ರೈತರನ್ನು ಹೇಗೆ ರಕ್ಷಿಸಬೇಕಿದೆಯೋ ಅದೇ ರೀತಿ ನಾವೂ ನಮ್ಮ ರೈತರನ್ನು ರಕ್ಷಿಸಬೇಕಿದೆ ಎಂದು ಹೇಳುತ್ತಿದ್ದೆವು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

44 ವರ್ಷ ನಂತರ ಮುಂಬೈಗೆ ಬಿಜೆಪಿ ಮೇಯರ್‌
ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 10 ಬಲಿ