ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾಪಿತ ಹೊಸ ಜಿಎಸ್ಟಿ ನೀತಿ ಜಾರಿಗೆ ಬಂದರೆ ಜೀವ ವಿಮೆ ಮತ್ತು ಅವಧಿ ವಿಮೆ (ಟರ್ಮ್ ಇನ್ಷೂರೆನ್ಸ್) ಪ್ರೀಮಿಯಂ ಮೇಲಿನ ತೆರಿಗೆ ಹೊರೆ ಭಾರೀ ಪ್ರಮಾಣದಲ್ಲಿ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಲಿ ಈ ಎರಡೂ ವಿಮೆಗಳ ಪ್ರೀಮಿಯಂ ಮೇಲೆ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಅದನ್ನು ಶೇ.5ಕ್ಕೆ ಇಳಿಸುವ ಸಾಧ್ಯತೆ ಇದೆ. ವಿಮೆ ಪ್ರೀಮಿಯಂ ಮೇಲಿನ ತೆರಿಗೆ ದರ ಇಳಿಕೆ ಮಾಡಿದರೆ ಸರ್ಕಾರಕ್ಕೆ ವಾರ್ಷಿಕ 17000 ಕೋಟಿ ರು. ಆದಾಯ ನಷ್ಟವಾಗಲಿದೆ ಎನ್ನಲಾಗಿದೆ.
==ಕಾಶ್ಮೀರಕ್ಕೆ ರಾಜ್ಯದ ಸ್ಥಾನ: ಇಂದು ಸಂಸತ್ತಲ್ಲಿ ಮಸೂದೆ?
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡನೆ ತಿದ್ದುಪಡಿ ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಇದು ಕಣಿವೆ ರಾಜ್ಯಕ್ಕೆ ಮರಳಿ ರಾಜ್ಯದ ಸ್ಥಾನಮಾನ ನೀಡುವ ಅಂಶಗಳನ್ನು ಒಳಗೊಂಡಿದೆ ಎನ್ನಲಾಗಿದೆ.2019ರಲ್ಲಿ ನರೇಂದ್ರ ಮೋದಿ ಸರ್ಕಾರ ಆರ್ಟಿಕಲ್-370 ರದ್ದುಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ತೆಗೆದುಹಾಕಿ, 2 ಕೇಂದ್ರಾಡಳಿತ ಪ್ರದೇಶ ರಚಿಸಲಾಗಿತ್ತು. ಅದಾಗಿನಿಂದಲೂ ತಮಗೆ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಬೇಕೆಂದು ಅಲ್ಲಿಯ ಸರ್ಕಾರ ಒತ್ತಾಯಿಸುತ್ತಲೇ ಬಂದಿತ್ತು. ಇದೀಗ ಕೇಂದ್ರ ಸರ್ಕಾರ ಆ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಸಂಸತ್ ಅಧಿವೇಶನದಲ್ಲಿ ಈ ವಿಚಾರವಾಗಿ ಧನಾತ್ಮಕ ಬೆಳವಣಿಗೆ ಆಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.==
ಮಾಸ್ಕೋದಲ್ಲಿ ಪುಟಿನ್ ಭೇಟಿ ಮಾಡಲು ಜೆಲೆನ್ಸ್ಕಿ ನಕಾರ?ಕೀವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ನಡುವೆ ಮಂಗಳವಾರ ನಡೆದಿದ್ದ ಸಭೆ ಭಾಗಶಃ ಯಶಸ್ವಿಯಾಗಿದ್ದು, ತ್ರಿಪಕ್ಷೀಯ ಮಾತುಕತೆಯಿಂದ 3.5 ವರ್ಷಗಳ ಯುದ್ಧ ಅಂತ್ಯ ಕಾಣಲಿದೆ ಎಂದು ಜಗತ್ತು ಭಾವಿಸಿರುವ ನಡುವೆ ಉಕ್ರೇನ್ ಅಧ್ಯಕ್ಷ ತಮ್ಮ ನಿಲುವು ಬದಲಿಸಿದ್ದಾರೆ ಎನ್ನಲಾಗಿದೆ.ಟ್ರಂಪ್ ಸಾರರ್ಥ್ಯದಲ್ಲಿ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯಲಿದೆ ಎನ್ನಲಾದ ತ್ರಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾಗಲು ಉಕ್ರೇನ್ ಅಧ್ಯಕ್ಷ ನಿರಾಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಹೀಗಾದಲ್ಲಿ ಮೂರು ದೇಶಗಳ ಜಂಟಿ ಮಾತುಕತೆಗೆ ಹೊಸ ದೇಶವೊಂದನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ವಿಶೇಷವೆಂದರೆ ಸೋಮವಾರ ಅಮೆರಿಕದಲ್ಲಿ ಟ್ರಂಪ್ ಜೊತೆಗೆ ನಡೆದ ಮಾತುಕತೆ ವೇಳೆ ಸಮ್ಮತಿಸಿದ್ದ ಜೆಲೆನ್ಸ್ಕಿ, ಇದು ಉತ್ತಮ ಬೆಳವಣಿಗೆ ಎಂದು ಕೊಂಡಾಡಿದ್ದರು.