ಗುಜರಾತ್‌ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಹೈಕೋರ್ಟ್‌ ಪ್ರಹಾರ

KannadaprabhaNewsNetwork |  
Published : May 28, 2024, 01:08 AM ISTUpdated : May 28, 2024, 05:02 AM IST
ಬೆಂಕಿ ಅವಗಢ | Kannada Prabha

ಸಾರಾಂಶ

27 ಜನರ ಸಾವಿಗೆ ಕಾರಣವಾದ ಟಿಆರ್‌ಪಿ ಗೇಮ್ ಝೋನ್ ಬೆಂಕಿಯ ಬಗ್ಗೆ ರಾಜಕೋಟ್ ಮಹಾನಗರ ಪಾಲಿಕೆ ಹಾಗೂ ಗುಜರಾತ್‌ ಸರ್ಕಾರವನ್ನು ಗುಜರಾತ್ ಹೈಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ

 ಅಹಮದಾಬಾದ್‌ : 27 ಜನರ ಸಾವಿಗೆ ಕಾರಣವಾದ ಟಿಆರ್‌ಪಿ ಗೇಮ್ ಝೋನ್ ಬೆಂಕಿಯ ಬಗ್ಗೆ ರಾಜಕೋಟ್ ಮಹಾನಗರ ಪಾಲಿಕೆ ಹಾಗೂ ಗುಜರಾತ್‌ ಸರ್ಕಾರವನ್ನು ಗುಜರಾತ್ ಹೈಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 

‘ಅಮಾಯಕರು ಜೀವಗಳನ್ನು ಕಳೆದುಕೊಂಡ ನಂತರವಷ್ಟೇ ನೀವು ಕ್ರಮ ಕೈಗೊಂಡಿದ್ದೀರಿ. ಹೀಗಾಗಿ ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆಯಿಲ್ಲ’ ಎಂದು ಪ್ರಹಾರ ಮಾಡಿದೆ.

ಇದೇ ವೇಳೆ, ‘ಟಿಅರ್‌ಪಿ ಗೇಮ್‌ ಝೋನ್‌ ಅಗತ್ಯ ಪರವಾನಗಿ ತೆಗೆದುಕೊಂಡಿರಲಿಲ್ಲ’ ಎಂದ ರಾಜಕೋಟ್‌ ಮಹಾನಗರ ಪಾಲಿಕೆ ಮೇಲೆ ಹರಿಹಾಯ್ದ ಪೀಠ, ‘ನಗರದಲ್ಲಿ ಅಷ್ಟು ದೊಡ್ಡ ಕಟ್ಟಡ ತಲೆಯೆತ್ತಿದೆ ಎಂದರೆ ಅದಕ್ಕೆ ಪರವಾನಗಿ ಇದೆಯೋ ಇಲ್ಲವೋ ಎಂದು ನೋಡುವ ಗೋಜಿಗೂ ನೀವು ಹೋಗಲಿಲ್ಲವೆ? ನೀವು ಕುರುಡಾಗಿ ಕುಳಿತಿದ್ದಿರಾ? ಮೇಲ್ನೋಟಕ್ಕೆ ಇದು ಮಾನವ ನಿರ್ಮಿತ ದುರಂತ ಎಂದು ಸಾಬೀತಾಗಿದೆ’ ಎಂದು ಪ್ರಹಾರ ಮಾಡಿದೆ.

ಬೆಂಕಿ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠ, ‘ಗೇಮ್‌ ಝೋನ್‌ ಅರಂಭವಾದ 2021ನೇ ಇಸವಿಯಿಂದ ಈವರೆಗೆ ಗುಜರಾತ್‌ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡಿದ ಎಲ್ಲ ಆಯುಕ್ತರು ಇದಕ್ಕೆ ಹೊಣೆಗಾರರು’ ಎಂದಿತು ಹಾಗೂ ಎಲ್ಲ ಆಯುಕ್ತರಿಗೆ ಅಫಿಡವಿಟ್‌ ಸಲ್ಲಿಸುವಂತೆ ಆದೇಶಿಸಿತು.

ಇದೇ ವೇಳೆ, ‘ನಾವು ಎಷ್ಟು ಬಾರಿ ಸರ್ಕಾರಕ್ಕೆ ಹೇಳುವುದು? 4 ವರ್ಷ ಹಿಂದೆ ಇಂಥ ಬೆಂಕಿ ಘಟನೆ ತಡೆಯಬೇಕು. ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದೆವು. ನಾವು ಆದೇಶ ನೀಡಿದ ನಂತರ ಸಂಭವಿಸಿದ 6ನೇ ಬೆಂಕಿ ದುರಂತ ಇದಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ಮೇಲೆ ನಂಬಿಕೆಯೇ ಹೊರಟುಹೋಗಿದೆ. ಜನರು ಜೀವ ಕಳೆದುಕೊಂಡ ನಂತರವಷ್ಟೇ ಇವು ಎಚ್ಚರ ಆಗುತ್ತಾರೆ’ ಎಂದು ಆಕ್ರೋಶದ ಮಳೆ ಸುರಿಸಿತು.

ಗೇಮ್‌ಝೋನ್‌ ಬೆಂಕಿ: 5 ಅಧಿಕಾರಿಗಳು ಸಸ್ಪೆಂಡ್‌

ರಾಜಕೋಟ್‌: 27 ಜನರನ್ನು ಬಲಿ ತೆಗೆದುಕೊಂಡ ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು 3 ಪೌರ ಸಿಬ್ಬಂದಿ ಸೇರಿದಂತೆ ಐವರು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗುಜರಾತ್ ಸರ್ಕಾರ ಸೋಮವಾರ ಅಮಾನತುಗೊಳಿಸಿದೆ.‘ಅಗತ್ಯ ಅನುಮೋದನೆಗಳಿಲ್ಲದೆ ಈ ಆಟದ ವಲಯವು ಕಾರ್ಯನಿರ್ವಹಿಸುತ್ತಿದ್ದರೂ ಈ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಸಂಪೂರ್ಣ ನಿರ್ಲಕ್ಷ್ಯಕ್ಕಾಗಿ ಅಧಿಕಾರಿಗಳು ಜವಾಬ್ದಾರರು’ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.ಗೇಮ್‌ಝೋನ್ ಬೆಂಕಿಗೆ ವೆಲ್ಡಿಂಗ್‌ ಕಾರಣ

ರಾಜಕೋಟ್‌: ಗುಜರಾತ್‌ನ ರಾಜಕೋಟ್‌ ಟಿಆರ್‌ಪಿ ಗೇಮ್‌ಝೋನ್‌ ಬೆಂಕಿಗೆ ವೆಲ್ಡಿಂಗ್‌ ಕೆಲಸ ಕಾರಣ ಎಂದು ಸಿಸಿಟೀವಿ ದೃಶ್ಯಾವಳಿಯಿಂದ ಗೊತ್ತಾಗಿದೆ. ವೆಲ್ಡಿಂಗ್ ಕೆಲಸ ನಡೆಯುವ ಸನಿಹ ಪ್ಲಾಸ್ಟಿಕ್‌ ತ್ಯಾಜ್ಯದ ರಾಶಿ ಇತ್ತು. ವೆಲ್ಡಿಂಗ್‌ ಕಿಡಿಗಳು ಅದರ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡಿತು. ಇದು ಗೇಮ್‌ಝೋನ್‌ಗೆ ವ್ಯಾಪಿಸಿತು ಎಂದು ದೃಶ್ಯಾವಳಿಯಲ್ಲಿ ಕಡುಬಂದಿದೆ. ಅಲ್ಲಿದ್ದ ಕೆಲವರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೈಸೂರು ಸ್ಯಾಂಡಲ್ ಸೋಪು ಉತ್ಪನ್ನ : ದಾಖಲೆ ಬರೆದ ಕೆಎಸ್‌ಡಿಎಲ್‌
ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌