ನವದೆಹಲಿ: ಸಂಸತ್ತಿನಲ್ಲಿ ನಡೆದ ‘ಹೊಗೆಬಾಂಬ್’ ದಾಳಿಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿರುವಾಗಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೊದಲ ಬಾರಿ ಮೌನ ಮುರಿದಿದ್ದು, ತಿರುಗೇಟು ಕೊಟ್ಟಿದ್ದಾರೆ. ‘ಈ ಹಿಂದೆ ಸುಮಾರು 40 ಬಾರಿ ಸಂಸತ್ತಿನಲ್ಲಿ ಭದ್ರತಾ ಲೋಪಗಳು ಆಗಿವೆ. ಪಿಸ್ತೂಲ್ ಅನ್ನು ಸದನಕ್ಕೆ ತಂದ, ಸದನದೊಳಗೆ ಜಿಗಿದ, ಕಾಗದಪತ್ರಗಳನ್ನು ತೂರಿದ, ಘೋಷಣೆಗಳನ್ನು ಕೂಗಿದ ಘಟನೆಗಳು ಆಗಿವೆ. ಆಗೆಲ್ಲಾ ಸಂಬಂಧಿಸಿದ ಸ್ಪೀಕರ್ ಅವರು ಕ್ರಮ ಕೈಗೊಂಡಿದ್ದಾರೆ’ ಎಂದು ಹೇಳಿದ್ದಾರೆ.
ಶಾ ಸಂಸತ್ತಲ್ಲಿ ಈ ಬಗ್ಗೆ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಘಟನೆಯು ಸದನದಲ್ಲಿ ನಡೆದಿರುವ ಕಾರಣ ತನಿಖೆಯ ಉಸ್ತುವಾರಿ ಸ್ಪೀಕರ್ ಆಗಿರುತ್ತಾರೆ. ಸದನದಲ್ಲಿ ಶಾ ಹೇಳಿಕೆ ನೀಡಲು ಆಗದು ಎಂಬುದು ಸರ್ಕಾರದ ವಾದ. ಹೀಗಾಗಿ ಶಾ ಸದನದ ಹೊರಗೆ ಹೇಳಿಕೆ ನೀಡಿದ್ದಾರೆ.
ಶಾ ರಾಜೀನಾಮೆ ಗದ್ದಲ: 2ನೇ ದಿನ ಕೂಡ ಕಲಾಪ ಬಲಿನವದೆಹಲಿ: ದಾಳಿಕೋರರು ಲೋಕಸಭೆಯಲ್ಲಿ ಹೊಗೆ ಬಾಂಬ್ ಸಿಡಿಸಿದ ಭದ್ರತಾ ವೈಫಲ್ಯದ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಮತ್ತು ವೈಫಲ್ಯದ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷಗಳು ಶುಕ್ರವಾರವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದವು. ಹೀಗಾಗಿ ಉಭಯ ಸದನಗಳ ಕಲಾಪ 2ನೇ ದಿನವೂ ನಡೆಯಲಿಲ್ಲ.