ನವದೆಹಲಿ: ಬಿಜೆಪಿ ಹ್ಯಾಟ್ರಿಕ್ ಸಾಧಿಸಿದ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಸ್ವೀಕಾರಾರ್ಹವಲ್ಲ ಎಂದಿರುವ ಕಾಂಗ್ರೆಸ್, ಇದರಲ್ಲಿ ಸಂಚು ನಡೆದಿದೆ ಎಂಬ ಗಂಭೀರ ಆರೋಪ ಮಾಡಿದೆ. ಅಲ್ಲದೆ ಈ ಫಲಿತಾಂಶ, ಪ್ರಜಾಪ್ರಭುತ್ವ ವ್ಯವಸ್ಥೆಯ ಅಂಗಗಳ ಸಮಗ್ರತೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕಳವಳ ವ್ಯಕ್ತಪಡಿಸಿದೆ.ಮಂಗಳವಾರ ಉಭಯ ರಾಜ್ಯಗಳ ಫಲಿತಾಂಶ ಪ್ರಕಟ ಬೆನ್ನಲ್ಲೇ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಹರ್ಯಾಣ ಫಲಿತಾಂಶವು, ತಿರುಚುವಿಕೆಗೆ ಮತ್ತು ಜನಾಭಿಪ್ರಾಯ ಬುಡಮೇಲಿಗೆ ಸಿಕ್ಕ ಜಯವಾಗಿದೆ. ಜೊತೆಗೆ ಇದು ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಆದ ಸೋಲು’ ಎಂದು ಬಣ್ಣಿಸಿದ್ದಾರೆ.‘ಹರ್ಯಾಣದಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆ ಮತ್ತು 14 ವಿಧಾನಸಭಾ ಕ್ಷೇತ್ರಗಳಲ್ಲಿನ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ಗಳ ಕಾರ್ಯನಿರ್ವಹಣೆಯಲ್ಲಿ ಗಂಭೀರ ಲೋಪಗಳಿವೆ. ಹರ್ಯಾಣ ಫಲಿತಾಂಶ ಸಂಪೂರ್ಣ ಅನಿರೀಕ್ಷಿತ ಮತ್ತು ಅಚ್ಚರಿಯದ್ದಾಗಿದೆ. ಇದು ವಾಸ್ತವ ಮತ್ತು ಬದಲಾವಣೆ ಬಯಸಿದ್ದ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿದೆ. ನಮ್ಮಿಂದ ಗೆಲುವು ಕಿತ್ತುಕೊಳ್ಳಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಫಲಿತಾಂಶ ಒಪ್ಪುವುದು ನಮಗೆ ಸಾಧ್ಯವಿಲ್ಲ. ಫಲಿತಾಂಶದ ಕುರಿತು ನಮ್ಮ ಹಲವು ಅಭ್ಯರ್ಥಿಗಳು ಹಲವು ಗಂಭೀರ ವಿಷಯಗಳನ್ನು ಮುಂದಿಟ್ಟಿದ್ದಾರೆ. ಈ ವಿಷಯವನ್ನು ನಾವು ಕೇಂದ್ರ ಚುನಾವಣಾ ಆಯೋಗದ ಮುಂದಿಡಲಿದ್ದೇವೆ’ ಎಂದು ಜೈರಾಂ ಹೇಳಿದರು.
ಕಾಶ್ಮೀರದಲ್ಲಿ ಎಲ್ಲಾ ಓಕೆ:ಈ ನಡುವೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಬಗ್ಗೆ ಜೈರಾಂ ರಮೇಶ್ ತೃಪ್ತಿ ವ್ಯಕ್ತಪಡಿಸಿದ್ದಾರೆ. ‘ಹೇಗಾದರೂ ಮಾಡಿ ರಾಜ್ಯದಲ್ಲಿ ಬಹುಮತ ಪಡೆಯಬೇಕೆಂದು ಕುತಂತ್ರ ಮಾಡಿದ್ದ ಬಿಜೆಪಿಗೆ ರಾಜ್ಯದ ಜನತೆ ಸೂಕ್ತ ಉತ್ತರ ನೀಡಿದ್ದಾರೆ. ಜನತೆಯಿಂದ ರಾಜ್ಯ ಸ್ಥಾನಮಾನ ಕಸಿದುಕೊಂಡವರಿಗೆ ಸೂಕ್ತ ಪಾಠ ಕಲಿಸಲಾಗಿದೆ’ ಎಂದು ಹೇಳಿದ್ದಾರೆ.