ತಿರುವನಂತಪುರ: ಕೇರಳದ ಐಎಎಸ್ ಅಧಿಕಾರಿ ಕೆ.ಗೋಪಾಲಕೃಷ್ಣನ್ ಅವರ ಮೊಬೈಲ್ ವಾಟ್ಸಾಪ್ ನಂಬರ್ ಬಳಸಿಕೊಂಡು, ಹಿಂದೂ ಐಎಎಸ್ ಮತ್ತು ಮುಸ್ಲಿಂ ಐಎಎಸ್ ಅಧಿಕಾರಿಗಳ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರಚಿಸಿರುವ ವಿಷಯ ಬೆಳಕಿಗೆ ಬಂದಿದೆ.
ಈ ನಡುವೆ ಐಎಎಸ್ ಅಧಿಕಾರಿ ವಲಯದಲ್ಲಿ ಸಾಕಷ್ಟು ಸಕ್ರಿಯ ವಾಟ್ಸಾಪ್ ಗ್ರೂಪ್ಗಳು ಇವೆಯಾದರೂ, ಧರ್ಮದ ಆಧಾರದಲ್ಲಿ ಗ್ರೂಪ್ ರಚನೆ ಇದೇ ಮೊದಲು. ಇದು ಆತಂಕಕಾರಿ ಬೆಳವಣಿಗೆ. ಈ ಕುರಿತು ಸರ್ಕಾರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಕೇರಳ ಸಚಿವ ಪಿ.ರಾಜೀವ್ ಹೇಳಿದ್ದಾರೆ.
ಏನಿದು ಪ್ರಕರಣ?:3 ದಿನಗಳ ಹಿಂದೆ ಗೋಪಾಲಕೃಷ್ಣನ್ ಅವರ ವಾಟ್ಸಾಪ್ ಮೊಬೈಲ್ ನಂಬರ್ ಬಳಸಿಕೊಂಡು, ‘ಮಲ್ಲು ಹಿಂದೂ ಆಫೀಸರ್ಸ್’ ಮತ್ತು ‘ಮಲ್ಲು ಮುಸ್ಲಿಂ ಆಫೀಸರ್ಸ್’ ಹೆಸರಲ್ಲಿ ವಾಟ್ಸಾಪ್ ಗ್ರೂಪ್ ಸೃಷ್ಟಿಯಾಗಿದೆ. ಎರಡೂ ಗುಂಪುಗಳಿಗೂ ಗೋಪಾಲಕೃಷ್ಣನ್ ಅವರೇ ಅಡ್ಮಿನ್ ಎಂದು ತೋರಿಸಲಾಗಿದೆ. ಗೋಪಾಲಕೃಷ್ಣನ್ ಅವರ ಮೊಬೈಲ್ ಕಾಂಟ್ಯಾಕ್ಟ್ನಲ್ಲಿ ಇದ್ದ ಹೆಸರುಗಳನ್ನೇ ವಾಟ್ಸಾಪ್ ಗ್ರೂಪ್ಗೆ ಸೇರಿಸಲಾಗಿದೆ. ಈ ಕುರಿತು ಆಪ್ತರೊಬ್ಬರು ಗಮನಸೆಳೆದ ಬಳಿಕ ವಿಷಯ ಗೋಪಾಲಕೃಷ್ಣನ್ ಅವರ ಗಮನಕ್ಕೆ ಬಂದಿದೆ. ಅವರು ಕೂಡಲೇ ಪೊಲೀಸರಿಗೆ ದೂರು ನೀಡಿ ತನಿಖೆಗೆ ಮನವಿ ಮಾಡಿದ್ದಾರೆ.