ದೇಶದ ಮೊದಲ ಹೈಡ್ರೋಜನ್‌ ರೈಲಿಗೆ ಮೋದಿ ಹಸಿರು ನಿಶಾನೆ

KannadaprabhaNewsNetwork |  
Published : Jul 18, 2026, 12:30 AM ISTUpdated : Jul 18, 2026, 05:20 AM IST
Train

ಸಾರಾಂಶ

ಹರ್ಯಾಣದ ಜಿಂದ್‌ನಿಂದ ಸೋನಿಪತ್‌ ಅನ್ನು ಸಂಪರ್ಕಿಸುವ ದೇಶದ ಮೊದಲ ಹೈಡ್ರೋಜನ್‌ ಇಂಧನ ಚಾಲಿತ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಿಂದ್‌ನಲ್ಲಿ ಹಸಿರು ನಿಶಾನೆ ನೀಡಿದರು.

ಜಿಂದ್‌ (ಹರ್ಯಾಣ): ಹರ್ಯಾಣದ ಜಿಂದ್‌ನಿಂದ ಸೋನಿಪತ್‌ ಅನ್ನು ಸಂಪರ್ಕಿಸುವ ದೇಶದ ಮೊದಲ ಹೈಡ್ರೋಜನ್‌ ಇಂಧನ ಚಾಲಿತ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಿಂದ್‌ನಲ್ಲಿ ಹಸಿರು ನಿಶಾನೆ ನೀಡಿದರು. ಈ ಮೂಲಕ ಭಾರತವು ಹೈಡ್ರೋಜನ್ ಚಾಲಿತ ರೈಲುಗಳನ್ನು ಹೊಂದಿರುವ ಕೆಲವೇ ಕೆಲವು ದೇಶಗಳ ಸಾಲಿಗೆ ಸೇರ್ಪಡೆಯಾದಂತಾಗಿದೆ. ಜರ್ಮನಿ, ಜಪಾನ್‌, ಚೀನಾ, ಫ್ರಾನ್ಸ್‌ನಂಥ ದೇಶಗಳು ಹೈಡ್ರೋಜನ್‌ ಶಕ್ತಿಯಿಂದ ಚಾಲಿತ ರೈಲುಗಳನ್ನು ಓಡಿಸುತ್ತಿವೆ. ಭಾರತ 5ನೇ ದೇಶವಾಗಿದೆ. ಈ ರೈಲು ಹೊಗೆಯ ಬದಲು ಹಬೆಯನ್ನು ಹೊರ ಹಾಕುತ್ತದೆ.

‘ಭಾರತದ ಈ ಹೈಡ್ರೋಜನ್‌ ರೈಲು ಹೊಗೆರಹಿತ ಅಷ್ಟೇ ಅಲ್ಲ, ಮೇಕ್‌ ಇನ್‌ ಇಂಡಿಯಾ ಉಪಕ್ರಮದ ಯಶಸ್ಸಿಗೆ ಅತ್ಯುತ್ತಮ ಉದಾಹರಣೆಯೂ ಆಗಿದೆ. ಈ ರೈಲನ್ನು ವಿನ್ಯಾಸಗೊಳಿಸಿದ್ದು ಭಾರತೀಯ ಎಂಜಿನಿಯರ್‌ಗಳು ಮತ್ತು ಉತ್ಪಾದಿಸಿದ್ದು ಭಾರತೀಯ ಕಂಪನಿ’ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.2014ಕ್ಕಿಂತ ಮೊದಲಾಗಿದ್ದರೆ...:

ಭಾಷಣದಲ್ಲಿ ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಪ್ರಸ್ತಾಪಿಸಿದ ಮೋದಿ, ಭಾರತವು ದೊಡ್ಡ ಪ್ರಮಾಣದ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಮತ್ತು ಗೊಬ್ಬರವನ್ನು ಹೋರ್ಮುಜ್‌ ಜಲಸಂಧಿ ಮೂಲಕ ತರಿಸಿಕೊಳ್ಳುತ್ತದೆ. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ಈ ಜಲಸಂಧಿಯು ಯುದ್ಧ ರಂಗಭೂಮಿಯಾಗಿ ಪರಿವರ್ತನೆಯಾಗಿದೆ. ಯುದ್ಧ ಮತ್ತು ತೈಲ ಸಂಘರ್ಷದ ಹೊರತಾಗಿಯೂ ಭಾರತೀಯ ರೈಲ್ವೆ ಹಾಗೂ ದೇಶದ ಅಭಿವೃದ್ಧಿಯ ಚಕ್ರ ನಿಂತಿಲ್ಲ ಎಂದರು.

1925ರಿಂದ 2014ರ ನಡುವೆ ದೇಶದ ಶೇ.30ರಷ್ಟು ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಆಗಿತ್ತು. ಉಳಿದ ಶೇ.70 ರೈಲು ಸಂಪರ್ಕವು ಡೀಸೆಲ್‌ ಅನ್ನೇ ಅವಲಂಬಿಸಿತ್ತು. ಇದೇ ವೇಗದಲ್ಲಿ ನಾವು ಹೋಗುತ್ತಿದ್ದರೆ ಭಾರತೀಯ ರೈಲ್ವೆಯ ಸಂಪೂರ್ಣ ವಿದ್ಯುದೀಕರಣಕ್ಕೆ 200 ವರ್ಷ ಬೇಕಾಗುತ್ತಿತ್ತು. ಆದರೆ, ಕಳೆದ 12 ವರ್ಷಗಳಿಂದ ಭಾರತೀಯ ರೈಲ್ವೆಯ ವಿದ್ಯುದ್ದೀಕರಣ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ. ಶೇ.99ರಷ್ಟು ಪ್ರಮಾಣದ ವಿದ್ಯುದ್ದೀಕರಣ ಪೂರ್ಣಗೊಂಡಿದೆ. ಇದು ಅಂತಾರಾಷ್ಟ್ರೀಯ ಇಂಧನ ಬಿಕ್ಕಟ್ಟಿನಂಥ ಪರಿಸ್ಥಿತಿ ಎದುರಿಸುವ ದೇಶದ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದರು.

ಈಗ ಎದುರಾಗಿರುವ ಪಶ್ಚಿಮ ಏಷ್ಯಾ ಬಿಕ್ಕಟ್ಟು 2014ಕ್ಕಿಂತ ಮೊದಲು ಸಂಭವಿಸಿದ್ದರೆ ರೈಲ್ವೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತಿತ್ತು. ಯಾಕೆಂದರೆ ದೇಶದ ಬಹುಪಾಲು ರೈಲುಗಳು ಡೀಸೆಲ್‌ ಅನ್ನೇ ಅವಲಂಬಿಸಿದ್ದವು. ಒಂದು ವೇಳೆ ಡೀಸೆಲ್‌ ಆಮದು ಸ್ಥಗಿತಗೊಳ್ಳುತ್ತಿದ್ದರೆ ಡೀಸೆಲ್‌ ಚಾಲಿತ ರೈಲುಗಳು ಕಾರ್ಯಾಚರಿಸಲು ಸಾಧ್ಯವಿತ್ತಾ ಎಂದು ಪ್ರಶ್ನಿಸಿದ ಅವರು, 2014ರಲ್ಲಿ ಏನಿತ್ತೋ ಆ ಪರಿಸ್ಥಿತಿ ಈಗ ಸಂಪೂರ್ಣ ಬದಲಾಗಿದೆ. ಇದು ಮೋದಿ ಅವಧಿ. ಮೋದಿ ಯಾವತ್ತೂ ಮೊದಲೇ ಯೋಚಿಸುತ್ತಾರೆ ಮತ್ತು ಮೊದಲೇ ಯೋಜಿಸುತ್ತಾರೆ ಎಂದು ಹೇಳಿದರು.

89 ಕಿ.ಮೀ. ಸಂಚರಿಸುವ ರೈಲು:

ಜಿಂದ್‌ನಿಂದ ಸೋನಿಪತ್‌ ನಡುವಿನ 89 ಕಿ.ಮೀ. ಅಂತರವನ್ನು ಈ ರೈಲು ಕೇವಲ ಎರಡೇ ಗಂಟೆಗಳಲ್ಲಿ ಕ್ರಮಿಸುತ್ತದೆ. ಒಟ್ಟು 12 ಕಡೆ ಈ ರೈಲು ನಿಲುಗಡೆಯಾಗುತ್ತದೆ. ವಿಶ್ವದ ಇತರೆ ಭಾಗಗಳಲ್ಲಿರುವ ಹೈಡ್ರೋಜನ್‌ ಶಕ್ತಿಯಿಂದ ಚಾಲಿತ ರೈಲುಗಳು ಕೇವಲ ಮೂರರಿಂದ ನಾಲ್ಕು ಕೋಚ್‌ಗಳನ್ನಷ್ಟೇ ಹೊಂದಿವೆ. ಆದರೆ, ಭಾರತವು 10 ಕೋಚ್‌ಗಳ ಹೈಡ್ರೋಜನ್‌ ರೈಲನ್ನು ಓಡಿಸುವ ಮೂಲಕ ಇತಿಹಾಸ ಬರೆದಿದಿದೆ. ಈ ರೈಲು 3,200 ಅಶ್ವಶಕ್ತಿಯ ಎಂಜಿನ್‌ನಿಂದ ಸಂಚರಿಸಲಿದೆ ಎಂದು ಮೋದಿ ತಿಳಿಸಿದರು.

ಭದ್ರತಾ ವ್ಯವಸ್ಥೆ:

ಹೈಡ್ರೋಜನ್‌ ಉತ್ಪಾದನಾ ಘಟಕ ಅಥವಾ ರೈಲಿನಲ್ಲಿ ಹೈಡ್ರೋಜನ್‌ ಸೋರಿಕೆಯಾದರೆ ತಂತಾನೆ ಪತ್ತೆ ಆಗಿ, ಯಾವುದೇ ವ್ಯಕ್ತಿಯ ಮಧ್ಯಪ್ರವೇಶದ ಅಗತ್ಯವಿಲ್ಲದೇ ಹೈಡ್ರೋನ್‌ ಪೂರೈಕೆ ಸ್ಥಗಿತಗೊಳಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಜಿಂದ್‌ ಮಾರ್ಗವೇ ಏಕೆ?

ಜಿಂದ್‌ ರೈಲ್ವೆ ನಿಲ್ದಾಣದ ಬಳಿ ಹೈಡ್ರೋಜನ್‌ ಉತ್ಪಾದನೆ ಮತ್ತು ಸಂಗ್ರಹಕ್ಕೆ ಸಾಕಷ್ಟು ಪ್ರದೇಶ ರೈಲ್ವೆಗೆ ಲಭ್ಯವಿದೆ. ಇದರ ಜೊತೆಗೆ ಜಿಂದ್‌- ಸೋನಿಪತ್‌ ಮಾರ್ಗದಲ್ಲಿ ರೈಲುಗಳ ಸಂಚಾರ ದಟ್ಟಣೆ ಕಡಿಮೆ. ಹೀಗಾಗಿ ಮೊದಲ ಪ್ರಯೋಗ, ಬಳಿಕದ ಯಾವುದೇ ಪ್ರಯೋಗಗಳಿಗೂ ಇದು ಸೂಕ್ತ ಎಂದು ಈ ಮಾರ್ಗ ಆರಿಸಿಕೊಳ್ಳಲಾಗಿದೆ.

ಟಿಕೆಟ್‌ ದರ ₹5ರಿಂದ ಆರಂಭ

ಶುಕ್ರವಾರ ಚಾಲನೆ ಪಡೆದರುವ ದೇಶದ ಮೊದಲ ಹೈಡ್ರೋಜನ್‌ ರೈಲು ಅತ್ಯಂತ ಅಗ್ಗದ ಟಿಕೆಟ್‌ ದರವನ್ನು ಹೊಂದಿದೆ. ಈ ರೈಲು ಕನಿಷ್ಠ 5 ರು.ನಿಂದ ಗರಿಷ್ಠ 25 ರು. ತನಕ ಪ್ರಯಾಣ ದರ ಹೊಂದಿದೆ ಎಂದು ತಿಳಿದು ಬಂದಿದೆ. ಕನಿಷ್ಠ ಪ್ರಯಾಣದರ ಪ್ಲಾಟ್‌ಫಾರ್ಮ್ ಟಿಕೆಟ್‌ ದರಕ್ಕಿಂತಲೂ ಕಡಿಮೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜು.20 ರ ತನಕ ಜೀವ ಉಳಿಸಿಕೊಂಡಿರುತ್ತೇನೆ: ವಾಂಗ್ಚುಕ್‌
ಅಯೋಧ್ಯೆ ಹುಂಡಿ ಕಳವು ಪತ್ತೆಮಾಡಿದ್ದು ಸೆಕ್ಯುರಿಟಿ ಗಾರ್ಡ್‌ !