ಚಂಡೀಗಢ : ಹರ್ಯಾಣದಲ್ಲಿ ದಾಖಲೆಯ ಹ್ಯಾಟ್ರಿಕ್ ಜಯಭೇರಿ ಬಾರಿಸಿರುವ ಬಿಜೆಪಿಯು ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿರುವಾಗಲೇ, ಆ ಪಕ್ಷದಲ್ಲಿ ದೊಡ್ಡ ಬಂಡಾಯ ಸ್ಫೋಟಗೊಳ್ಳಬಹುದು ಎಂದು ಕೆಲ ಹಿಂದಿ ಚಾನಲ್ಗಳು ವರದಿ ಮಾಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಕೇಂದ್ರ ಸಚಿವ ರಾವ್ ಇಂದರ್ಜಿತ್ ಸಿಂಗ್ ನೇತೃತ್ವದಲ್ಲಿ ದಕ್ಷಿಣ ಹರ್ಯಾಣದ 9 ಶಾಸಕರು ಬಂಡೇಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಬಹುಮತಕ್ಕೆ 46 ಸ್ಥಾನಗಳು ಬೇಕು. ಬಿಜೆಪಿ 48 ಸ್ಥಾನಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ಮೈತ್ರಿಕೂಟ 37 ಸ್ಥಾನ ಗಳಿಸಿ, ಬಹುಮತಕ್ಕೆ 9 ಸ್ಥಾನಗಳ ಕೊರತೆ ಎದುರಿಸುತ್ತಿದೆ. 9 ಬೆಂಬಲಿಗರನ್ನು ಕರೆತಂದು ಕಾಂಗ್ರೆಸ್ ಬೆಂಬಲಿಸಿ, ರಾವ್ ಇಂದರ್ಜಿಂತ್ ಸಿಂಗ್ ಮುಖ್ಯಮಂತ್ರಿಯಾಗಬಹುದು ಎಂದು ಹೇಳಲಾಗುತ್ತಿದೆ.
ಆದರೆ ಇದನ್ನು ಅಲ್ಲಗಳೆದಿರುವ ಇಂದರ್ಜಿತ್ ಸಿಂಗ್, ಇದೆಲ್ಲಾ ಆಧಾರರಹಿತ. ನಾನು ಹಾಗೂ ನನ್ನ ಬೆಂಬಲಿಗ ಶಾಸಕರು ಬಿಜೆಪಿ ಜತೆ ದೃಢವಾಗಿ ನಿಂತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾವ್ ಇಂದರ್ಜಿತ್ ಸಿಂಗ್ ಅವರ ತಂದೆ ರಾವ್ ಬಿರೇಂದರ್ ಸಿಂಗ್ ಹರ್ಯಾಣದ ಮುಖ್ಯಮಂತ್ರಿಯಾಗಿದ್ದರು. ಹರ್ಯಾಣದ ಅಹಿರ್ವಾಲ್ ಭಾಗದಲ್ಲಿ ಇಂದರ್ಜಿತ್ ಪ್ರಭಾವಿಯಾಗಿದ್ದಾರೆ. ಗುಡಗಾಂವ್ನಿಂದ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ಮುನ್ನ ಕಾಂಗ್ರೆಸ್ನಲ್ಲಿದ್ದ ಅವರು 2014ರಲ್ಲಿ ಬಿಜೆಪಿ ಸೇರಿದ್ದರು. ಅಹಿರ್ವಾಲ್ ಭಾಗದ 11 ವಿಧಾನಸಭೆ ಸ್ಥಾನಗಳಲ್ಲಿ ಬಿಜೆಪಿ 10 ಸೀಟು ಗೆದ್ದಿದೆ. ಆ ಪೈಕಿ ಇಂದರ್ಜಿತ್ ಪುತ್ರಿ ಸೇರಿ ಬಹುತೇಕ ಶಾಸಕರು ಕೇಂದ್ರ ಮಂತ್ರಿಯ ಬೆಂಬಲಿಗರಾಗಿದ್ದಾರೆ ಎಂಬುದು ಗಮನಾರ್ಹ.
ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅವರು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದರು. ‘ಇದು ನನ್ನ ಆಸೆಯಲ್ಲ. ಜನರ ಆಸೆ’ ಎಂದೂ ಹೇಳಿದ್ದರು.