ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಭಾರತ-ಕೆನಡಾ ಸಂಬಂಧ ಸುಧಾರಣೆ: ಶೀಘ್ರ ರಾಯಭಾರಿ ಮರುನಿಯೋಜನೆ

KannadaprabhaNewsNetwork | Published : Jun 18, 2025 11:48 PM

ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ನಿಜ್ಜರ್‌ ಹತ್ಯೆ ಬಳಿಕ ಹದಗೆಟ್ಟಿದ್ದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಒಂಬತ್ತು ತಿಂಗಳ ಬಳಿಕ ಮತ್ತೆ ಹಳಿಗೆ ಮರಳುವ ಸೂಚನೆಗಳು ಗೋಚರಿಸಿವೆ.

- ನಿಜ್ಜರ್‌ ಹತ್ಯೆ ಹಿನ್ನೆಲೆಯಲ್ಲಿ ಹದಗೆಟ್ಟಿದ್ದ ಸಂಬಂಧ

- ರಾಯಭಾರಿ ವಾಪಸ್‌ ಕರೆಸಿಕೊಂಡಿದ್ದ ಭಾರತ- ಇದೀಗ 9 ತಿಂಗಳ ಬಳಿಕ ಸಂಬಂಧ ಸುಧಾರಣೆ

- ಜಿ20 ಶೃಂಗ ಹಿನ್ನೆಲೆಯಲ್ಲಿ ಮೋದಿ-ಕಾರ್ನಿ ಚರ್ಚೆ

- ಭಾರತ-ಕೆನಡಾ ಸಂಬಂಧ ಮರುಸ್ಥಾಪನೆಗೆ ಒಪ್ಪಿಗೆ

ಪಿಟಿಐ ಕನಾನಸ್ಕಿಸ್‌ (ಕೆನಡಾ)

ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ನಿಜ್ಜರ್‌ ಹತ್ಯೆ ಬಳಿಕ ಹದಗೆಟ್ಟಿದ್ದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಒಂಬತ್ತು ತಿಂಗಳ ಬಳಿಕ ಮತ್ತೆ ಹಳಿಗೆ ಮರಳುವ ಸೂಚನೆಗಳು ಗೋಚರಿಸಿವೆ. ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ ಸರ್ಕಾರಾವಧಿಯಲ್ಲಿ ವಾಪಸ್‌ ಕರೆಸಿಕೊಂಡಿದ್ದ ರಾಯಭಾರಿಗಳನ್ನು ಆದಷ್ಟು ಶೀಘ್ರ ಮರು ನಿಯೋಜನೆಗೆ ಎರಡೂ ದೇಶಗಳು ಮುಂದಾಗಿವೆ.

ಈ ಮೂಲಕ ಕೆನಡಾದಲ್ಲಿ ಮಾರ್ಕ್‌ ಕಾರ್ನಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಎರಡೂ ದೇಶಗಳ ಸಂಬಂಧದಲ್ಲಿ ಧನಾತ್ಮಕ ಬದಲಾವಣೆ ಆರಂಭವಾಗಿದೆ.

ಇಲ್ಲಿ ನಡೆಯುತ್ತಿರುವ ಜಿ20 ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನೆ ಅವರು ಭೇಟಿಯಾಗಿದ್ದು, ಧನಾತ್ಮಕ ಮತ್ತು ರಚನಾತ್ಮಕವಾಗಿ ಮಾತುಕತೆ ನಡೆಸಿದ್ದಾರೆ. ಸಮಾನ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಮತ್ತು ನೆಲದ ಕಾನೂನು, ಜನರ ನಡುವಿನ ಸಂಪರ್ಕ ಹಾಗೂ ಇತರೆ ಸಮಾನ ವಿಚಾರಗಳಲ್ಲಿ ಭಾರತ ಮತ್ತು ಕೆನಡಾ ಸಂಬಂಧದ ಮಹತ್ವದ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು ಎಂದು ವಿದೇಶಾಂಗ ಸಚಿವ ವಿಕ್ರಮ ಮಿಸ್ರಿ ಮಾಹಿತಿ ನೀಡಿದ್ದಾರೆ.

ಸಂಬಂಧ ಮರುಸ್ಥಾಪಿಸುವ ನಿಟ್ಟಿನಲ್ಲಿ ಮೊದಲ ಭಾಗವಾಗಿ ಎರಡೂ ದೇಶಗಳು ಆಯಾದೇಶಗಳ ರಾಯಭಾರಿಗಳನ್ನು ಶೀಘ್ರವಾಗಿ ನೇಮಿಸಲು ನಿರ್ಧಾರ ತೆಗೆದುಕೊಂಡಿವೆ. ಆ ಬಳಿಕ ಇತರೆ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದೇ ವೇಳೆ, ಮೋದಿ ಅವರ ಆಡಳಿತ ಶೈಲಿಯನ್ನು ಕಾರ್ನೆ ಹೊಗಳಿದ್ದಾರೆ.++++ಕಳೆದ ವರ್ಷ ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡದ ಕುರಿತು ಕೆನಡಾ ಆರೋಪ ಮಾಡಿತ್ತು. ಆ ಬಳಿಕ ಭಾರತ ಕೆನಡಾದಿಂದ ತನ್ನ ರಾಯಭಾರಿ ಕಚೇರಿ 5 ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಂಡಿತ್ತು. ಜತೆಗೆ ದೆಹಲಿಯಲ್ಲಿರುವ ಕೆನಡಾದ ಐವರು ರಾಯಭಾರಿ ಕಚೇರಿ ಅಧಿಕಾರಿಗಳನ್ನೂ ವಾಪಸ್‌ ಕಳುಹಿಸಿತ್ತು.

==

ಮೋದಿ ಕ್ರೊವೇಷಿಯಾ ಭೇಟಿ: ದ್ವಿಪಕ್ಷ ಮಾತುಕತೆ ಯಶಸ್ವಿ

- ಏರ್ಪೋರ್ಟ್‌ಗೆ ಬಂದು ಖುದ್ದು ಸ್ವಾಗತಿಸಿದ ಅಲ್ಲಿನ ಪ್ರಧಾನಿ

ಝಾಗ್ರೆಬ್‌ (ಕ್ರೊವೇಷಿಯಾ): 3 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕ್ರೊವೇಷಿಯಾಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿ ನಡೆದ ದ್ವಿಪಕ್ಷೀಯ ಸಭೆಗಳು ಫಲಪ್ರದವಾಗಿವೆ.

ಮೋದಿ ಅವರು ಕ್ರೊವೇಷಿಯಾಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ. ಅವರನ್ನ ಪ್ರಧಾನಿ ಆ್ಯಂಡ್ರೆಜ್‌ ಪ್ಲೆಂಕೋವಿಕ್‌ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ಬಂದು ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ ಅಲ್ಲಿ ನೆಲೆಸಿರುವ ಭಾರತ ಮೂಲದ ನಾಗರಿಕರು ‘ವಂದೇ ಮಾತರಂ’, ‘ಭಾರತ್‌ ಮಾತಾ ಕೀ ಜೈ’ ಘೋಷಣೆ, ಸಾಂಸ್ಕೃತಿಕ ನೃತ್ಯ ಮಾಡುವ ಮೂಲಕ ಬರಮಾಡಿಕೊಂಡರು.ಬಳಿಕ ಕ್ರೊವೇಷಿಯಾ ಪ್ರಧಾನಿ ಪ್ಲೆಂಕೋವಿಕ್‌ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಜೊತೆಗೆ ಅಲ್ಲಿನ ಅಧ್ಯಕ್ಷ ಝೊರಾನ್‌ ಮಿಲಾನೋವಿಕ್‌ ಅವರನ್ನು ಭೇಟಿ ಮಾಡಿದರು.

ಕ್ರೊವೇಷಿಯಾಗೂ ಮುನ್ನ ಮೋದಿ ಅವರು ಸೈಪ್ರಸ್‌ಗೆ ಭೇಟಿ ನೀಡಿ, ಬಳಿಕ ಕೆನಡಾದಲ್ಲಿ ಜಿ7 ಶೃಂಗದಲ್ಲಿ ಭಾಗಿಯಾಗಿ ಬಳಿಕ ಕ್ರೊವೇಷಿಯಾಗೆ ಭೇಟಿ ನೀಡಿದರು.