ಹೈದರಾಬಾದ್‌ : ‘ಕರ್ನಾಟಕದಂತೆಯೇ ತೆಲಂಗಾಣದಲ್ಲಿಯೂ ದ್ವೇಷ ಭಾಷಣವನ್ನು ನಿಷೇಧಿಸುವ ಕಾನೂನನ್ನು ಶೀಘ್ರದಲ್ಲಿಯೇ ತರಲಿದ್ದೇವೆ’ ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಹೇಳಿದ್ದಾರೆ. ಈ ಮೂಲಕ ಇಂಥ ಕಾನೂನು ತರಲು ಹೊರಟಿರುವ ದೇಶದ 2ನೇ ರಾಜ್ಯವಾಗಿ ತೆಲಂಗಾಣ ಹೊರಹೊಮ್ಮುವ ಸಾಧ್ಯತೆ ಇದೆ.

 ಶೀಘ್ರದಲ್ಲಿ ದ್ವೇಷ ಭಾಷಣ ನಿಷೇಧ

ಶನಿವಾರ ರಾಜ್ಯ ಸರ್ಕಾರ ಆಯೋಜಿಸಿದ್ದ ಕ್ರಿಸ್ಮಸ್‌ ಆಚರಣೆ ವೇಳೆ ಮಾತನಾಡಿದ ರೆಡ್ಡಿ, ‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಇತ್ತೀಚೆಗೆ ದ್ವೇಷ ಭಾಷಣವನ್ನು ನಿಷೇಧಿಸುವ ಉದ್ದೇಶದ ಮಸೂದೆ ಮಂಡಿಸಿದ್ದು, ಅಲ್ಲಿನ ವಿಧಾನಮಂಡಲ ಅಂಗೀಕರಿಸಿದೆ. ನಾವು ಶೀಘ್ರದಲ್ಲಿ ದ್ವೇಷ ಭಾಷಣ ನಿಷೇಧಕ್ಕೋಸ್ಕರವಾಗಿಯೇ ಮಸೂದೆಯೊಂದನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದೇವೆ’ ಎಂದರು.

ಕರ್ನಾಟಕದ ಬಿಲ್‌ನಲ್ಲೇನಿದೆ?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧನ) ಕಾಯ್ದೆ-2025ರ ಪ್ರಕಾರ, ಜಾತಿ, ಧರ್ಮ, ಲಿಂಗ ಸೇರಿ ಯಾವುದೇ ವರ್ಗದ ವಿರುದ್ಧ ದ್ವೇಷ ಹರಡಿದರೆ, ಅಂಥ ವ್ಯಕ್ತಿಗಳಿಗೆ 1-7 ವರ್ಷ ಜೈಲು ಶಿಕ್ಷೆ ಆಗುತ್ತದೆ. ಜತೆಗೆ 50,000 ರು. ದಂಡ ವಿಧಿಸಿ ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗುತ್ತದೆ.