ಕ್ವಿಂಗ್ಡಾವೋ: ಪಹಲ್ಗಾಂ ದಾಳಿ ವಿಚಾರ ಕೈಬಿಟ್ಟು, ಕೇವಲ ಬಲೂಚಿಸ್ತಾನ ಸಂಘರ್ಷವನ್ನಷ್ಟೇ ಪ್ರಸ್ತಾಪಿಸಿ ಪಾಕಿಸ್ತಾನವನ್ನು ಭಯೋತ್ಪಾದನೆ ಪೀಡಿತ ರಾಷ್ಟ್ರವಾಗಿ ಬಿಂಬಿಸುವ ಉದ್ದೇಶದ ಶಾಂಘೈ ಕಾರ್ಪೊರೇಷನ್ ಆರ್ಗನೈಸೇಷನ್(ಎಸ್ಸಿಒ)ನ ಜಂಟಿ ಹೇಳಿಕೆಗೆ ಸಹಿಹಾಕಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರಾಕರಿಸಿದ್ದಾರೆ. ಈ ಮೂಲಕ ವಿಶ್ವವೇದಿಕೆಯಲ್ಲಿ ಭಾರತಕ್ಕೆ ರಾಜತಾಂತ್ರಿಕವಾಗಿ ಮುಖಭಂಗವುಂಟು ಮಾಡುವ ಚೀನಾ ಮತ್ತು ಪಾಕ್ ಕಳ್ಳಾಟಕ್ಕೆ ಭಾರೀ ಹಿನ್ನಡೆಯಾದಂತಾಗಿದೆ.
ಯಾಕೆ ಸಹಿಹಾಕಿಲ್ಲ?:
ಪಹಲ್ಗಾಂ ದಾಳಿ ಉಲ್ಲೇಖ ಇಲ್ಲದಿರುವುದು ಮತ್ತು ಉಗ್ರವಾದಕ್ಕೆ ಸಂಬಂಧಿಸಿ ಭಾರತದ ಕಠಿಣ ನಿಲುವಿನ ಪ್ರಸ್ತಾಪ ಮಾಡದ ಹಿನ್ನೆಲೆಯಲ್ಲಿ ಜಂಟಿ ಹೇಳಿಕೆಗೆ ಸಹಿಹಾಕಲು ಭಾರತ ನಿರಾಕರಿಸಿದೆ. ಈ ಹೇಳಿಕೆಯಲ್ಲಿ ಬಲೂಚಿಸ್ತಾನದ ವಿಚಾರ ಪ್ರಸ್ತಾಪವಾಗಿತ್ತಾದರೂ 26 ಮಂದಿಯನ್ನು ಬಲಿಪಡೆದ ಪಹಲ್ಗಾಂ ದಾಳಿ ಅಂಶ ಕೈಬಿಡಲಾಗಿತ್ತು.ಆಪರೇಷನ್ ಸಿಂದೂರ ಕಾರ್ಯಾಚರಣೆ ಪ್ರಾಮುಖ್ಯತೆ ತಗ್ಗಿಸಲೆಂದೇ ಚೀನಾ ಮತ್ತು ಪಾಕಿಸ್ತಾನ ಇಂಥ ಕುತಂತ್ರ ಹೆಣೆದಿತ್ತು. ಬಲೂಚಿಸ್ತಾನಕ್ಕೆ ಬಾಹ್ಯಶಕ್ತಿಗಳಿಂದ ಬೆದರಿಕೆ ಇದೆ ಎಂಬಂತೆ ಬಿಂಬಿಸಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕ್ ಮೇಲಿನ ವಿಶ್ವದ ಗಮನ ಬೇರೆಡೆ ತಿರುಗಿಸುವ ಪ್ರಯತ್ನ ಇದಾಗಿತ್ತು. ಈ ಮೂಲಕ ಪಾಕಿಸ್ತಾನವು ಬಲೂಚಿಸ್ತಾನದಲ್ಲಿ ನಡೆಸುತ್ತಿರುವ ಅತ್ಯಾಚಾರ, ದೌರ್ಜನ್ಯಗಳಿಗೆ ರಕ್ಷಣೆ ನೀಡುವ ಪಯತ್ನ ಮಾಡಿತ್ತು.ಯಾರ್ಯಾರು ಭಾಗಿ?:
ಚೀನಾದ ಕ್ವಿಂಗ್ಡೋದಲ್ಲಿ ಎಸ್ಸಿಒದಲ್ಲಿ ರಕ್ಷಣಾ ಸಚಿವರ ಸಭೆ ಆಯೋಜಿಸಲಾಗಿದ್ದು ರಷ್ಯಾ, ಪಾಕಿಸ್ತಾನ, ಚೀನಾ, ಪಾಕಿಸ್ತಾನ, ಇರಾನ್, ಕಝಕಿಸ್ತಾನ, ಕಿಗ್ರಿಸ್ತಾನ, ತಜಕಿಸ್ತಾನ ಮತ್ತು ಉಜ್ವೇಕಿಸ್ತಾನ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಭಾರತದ ಪರ ಪಾಲ್ಗೊಂಡಿದ್ದ ರಾಜನಾಥ್ ಸಿಂಗ್ ಅವರು, ಸಭೆ ಬಳಿಕ ಬಿಡುಗಡೆ ಮಾಡಿದ ಜಂಟಿ ಹೇಳಿಕೆಗೆ ಸಹಿಹಾಕಲು ನಿರಾಕರಿಸಿದರು. ಎಸ್ಸಿಒ ಸಭೆ ರಕ್ಷಣಾ ಸಚಿವರ ಜಂಟಿ ಹೇಳಿಕೆಯಿಲ್ಲದೆ ಮುಕ್ತಾಯಗೊಂಡಿದ್ದು, ಇತಿಹಾಸದಲ್ಲಿ ಇದೇ ಮೊದಲಾಗಿದೆ.