ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಉದ್ಯೋಗವನ್ನು ಕಸಿಯಲಿದೆ ಎಂದು ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗುತ್ತಿರುವ ನಡುವೆಯೇ, ಐಟಿ ಸಿಟಿ ಬೆಂಗಳೂರಿನ ಪಾಲಿಗೆ ಆಘಾತಕಾರಿ ಎನ್ನಬಹುದಾದ ವರದಿ ಪ್ರಕಟವಾಗಿದೆ.
2028ರ ವೇಳೆ ಎಐನಿಂದ ಐಟಿ ವಲಯದಲ್ಲಿ ಭೀಕರ ನಿರುದ್ಯೋಗ, ಆರ್ಥಿಕ ಅನಿಶ್ಚಿತತೆ ಕಾಡಲಿದೆ ಎಂದು ಅದು ಎಚ್ಚರಿಸಿದೆ. ಭಾರತದ ಐಟಿ ರಫ್ತಿನಲ್ಲಿ ಬೆಂಗಳೂರು ಪಾಲು ಶೇ.25 ಆಗಿರುವ ಕಾರಣ ಸಿಲಿಕಾನ್ ಸಿಟಿ ಪಾಲಿಗೆ ಇದು ಆತಂಕಕಾರಿಯಾಗಿದೆ.
‘ದಿ 2028 ಗ್ಲೋಬಲ್ ಇಂಟೆಲಿಜೆನ್ಸ್ ಕ್ರೈಸಿಸ್’ ಶೀರ್ಷಿಕೆಯಲ್ಲಿ ಸಿಟ್ರಿನಿ ರಿಸರ್ಚ್ ಎಂಬ ಸಂಸ್ಥೆ ವರದಿ ಪ್ರಕಟಿಸಿದೆ. ‘2028ರ ವೇಳೆಗೆ ಎಐನಿಂದಾಗಿ ಭೀಕರ ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಅನಿಶ್ಚಿತತೆ ಉಂಟಾಗಲಿದೆ. ಭಾರತದ ದೈತ್ಯ ಐಟಿ ಕಂಪನಿಗಳಾದ ಟಿಸಿಎಸ್, ಬೆಂಗಳೂರು ಮೂಲದ ಇನ್ಫೋಸಿಸ್ ಮತ್ತು ವಿಪ್ರೋ ಹೆಚ್ಚಿನ ಅಪಾಯದಲ್ಲಿವೆ. ಏಕೆಂದರೆ ಇವು ಹೆಚ್ಚಾಗಿ ಹೊರಗುತ್ತಿಗೆ ಕೆಲಸದ ಮೇಲೆ ಅವಲಂಬಿತ ಆಗಿರುವ ಕಂಪನಿಗಳು. ಆದರೆ ಹೊರಗುತ್ತಿಗೆ ಕೆಲಸಗಳನ್ನು ಮುಂದೆ ಎಐ ಮಾಡುವ ಸಾಧ್ಯತೆ ಇದೆ. ಇದು ಐಟಿ ಕಂಪನಿಗಳ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದು ಎಚ್ಚರಿಸಿದೆ.
‘2028ರ ವೇಳೆಗೆ ಭಾರತದ ಐಟಿ ಸೇವಾ ವಲಯವು ವಾರ್ಷಿಕವಾಗಿ 18 ಲಕ್ಷ ಕೋಟಿ ರು.ಗಿಂತ ಹೆಚ್ಚು ರಫ್ತು ಮಾಡುತ್ತಿದ್ದುದು ಸಂಪೂರ್ಣವಾಗಿ ನಿಂತುಹೋಗುತ್ತದೆ. ಏಕೆಂದರೆ ಗ್ರಾಹಕರು ತುಲನಾತ್ಮಕವಾಗಿ ಕಡಿಮೆ ವೆಚ್ಚದಲ್ಲಿ ಎಐ ಕೋಡಿಂಗ್ ಏಜೆಂಟ್ಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಇದೇ ವೇಳೆ ಸಾಮೂಹಿಕ ನಿರುದ್ಯೋಗ ಮತ್ತು ಆರ್ಥಿಕ ಅಸ್ಥಿರತೆ ಉಂಟಾಗಲಿದೆ. ವಿಶೇಷವಾಗಿ ಭಾರತದ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋ ಅಪಾಯದಲ್ಲಿವೆ’ ಎಂದು ತಿಳಿಸಿದೆ. ಇದು ಭವಿಷ್ಯದ ಆರ್ಥಿಕತೆ ಕುರಿತು ತೀವ್ರ ಚರ್ಚೆಗೆ ಕಾರಣವಾಗಿದೆ.
ಟಿಸಿಎಸ್, ವಿಪ್ರೋ, ಇನ್ಫೋಸಿಸ್ನಂಥ ಪ್ರಮುಖ ಕಂಪನಿಗಳು ನೀಡುವ ಸೇವೆ ಇನ್ನು ಎಐನಿಂದಲೇ ಸಾಧ್ಯ. ಹೀಗಾದರೆ ಇವುಗಳ ಆದಾಯಕ್ಕೆ ಕೊರತೆ. ಸಿಟ್ರಿನಿ ರಿಸರ್ಚ್ ಸಂಸ್ಥೆಯ ಅಧ್ಯಯನ ವರದಿ ಅಂದಾಜು. ದೇಶದ ವಾರ್ಷಿಕ ಐಟಿ ರಫ್ತು 18 ಲಕ್ಷ ಕೋಟಿ ರು. ಇದರಲ್ಲಿ ಕರ್ನಾಟಕದ ಪಾಲು ₹4.5 ಲಕ್ಷ ಕೋಟಿ. ಹೀಗಾಗಿ ಕರ್ನಾಟಕದ ಐಟಿಗೆ ದೊಡ್ಡ ಹೊಡೆತ.