ಇಂಟರ್‌ ಪೋಲ್‌ನಿಂದ 100 ರೆಡ್‌ ನೋಟಿಸ್‌ : 2023ರಲ್ಲಿ ಭಾರತದ ಮನವಿ ಮೇರೆಗೆ ದಾಖಲೆ

KannadaprabhaNewsNetwork |  
Published : Sep 06, 2024, 01:10 AM ISTUpdated : Sep 06, 2024, 04:17 AM IST
ರೆಡ್‌ ನೋಟಿಸ್‌ | Kannada Prabha

ಸಾರಾಂಶ

2023ರಲ್ಲಿ ಭಾರತದ ಮನವಿಯ ಮೇರೆಗೆ ಇಂಟರ್‌ಪೋಲ್‌ 100 ರೆಡ್‌ ನೋಟಿಸ್‌ಗಳನ್ನು ಹೊರಡಿಸಿದೆ. ಇದರಿಂದಾಗಿ 29 ಮಂದಿ ಬೇಕಾದ ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಸಿಬಿಐನ ಗ್ಲೋಬಲ್ ಆಪರೇಷನ್ ಸೆಂಟರ್‌ 17,368 ಅಂತರಾಷ್ಟ್ರೀಯ ನೆರವು ಮನವಿಗಳನ್ನು ಸ್ವೀಕರಿಸಿದೆ.

ನವದೆಹಲಿ: ಭಾರತದ ಮನವಿ ಮೇರೆಗೆ 2023ರಲ್ಲಿ ಇಂಟರ್‌ಪೋಲ್‌ 100 ರೆಡ್‌ ನೋಟಿಸ್‌ಗಳನ್ನು ಹೊರಡಿಸಿದೆ. ಇದು ಒಂದು ವರ್ಷದಲ್ಲೇ ಅತ್ಯಧಿಕ ಎಂದು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕ ಪ್ರವೀಣ್‌ ಸೂದ್‌ ಗುರುವಾರ ತಿಳಿಸಿದ್ದಾರೆ.

10ನೇ ಇಂಟರ್‌ಪೋಲ್ ಸಂಪರ್ಕ ಅಧಿಕಾರಿಗಳ (ಐಎಲ್‌ಒ) ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಸೂದ್‌, ಭಾರತೀಯ ಕಾನೂನು ಸಂಸ್ಥೆಗಳಿಗೆ ಬೇಕಾಗಿರುವವರು ಗಡಿ ದಾಟಿ ಪರಾರಿಯಾಗಿರುವವರನ್ನು ತನ್ನ ವಶಕ್ಕೆ ಒಪ್ಪಿಸಲು ಭಾರತ ಜಗತ್ತಿನಾದ್ಯಂತ ಪೊಲೀಸ್‌ ಪಡೆಗಳನ್ನು ಕೇಳಿತ್ತು. ಇದರ ಭಾಗವಾಗಿ 2023ರಲ್ಲಿ ಇಂಟರ್‌ಪೋಲ್‌ 100 ರೆಡ್‌ ನೋಟಿಸ್‌ಗಳನ್ನು ಹೊರಡಿಸಿದೆ. ಇದರಿಂದ ಆ ವರ್ಷದಲ್ಲಿ 29 ವಾಂಟೆಡ್‌ ಕ್ರಿಮಿನಲ್‌ಗಳನ್ನು ಮತ್ತು 2024ರಲ್ಲಿ 19 ಮಂದಿಯನ್ನು ಬಂಧಿಸಿ ಭಾರತಕ್ಕೆ ಕರೆತಲಾಗಿದೆ ಎಂದರು.

2023ರಲ್ಲಿ ಸಿಬಿಐನ ಗ್ಲೋಬಲ್ ಆಪರೇಷನ್ ಸೆಂಟರ್‌ 17,368 ಅಂತರಾಷ್ಟ್ರೀಯ ನೆರವು ಮನವಿಗಳನ್ನು ಸ್ವೀಕರಿಸಿತ್ತು ಎಂದು ಹೇಳಿದರು.

==

ಸೆಬಿ ಮುಖ್ಯಸ್ಥೆ ರಾಜೀನಾಮೆಗೆ ಆಗ್ರಹಿಸಿ ಸೆಬಿ ಸಿಬ್ಬಂದಿಯಿಂದಲೇ ಪ್ರತಿಭಟನೆ

ಮುಂಬೈ: ಅದಾನಿ ಗ್ರೂಪ್‌ನಲ್ಲಿ ಬೇನಾಮಿ ಹೂಡಿಕೆ ಮಾಡಿದ ಆರೋಪ ಎದುರಿಸುತ್ತಿರುವ ಷೇರುಪೇಟೆ ನಿಯಂತ್ರಕ ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ಅವರ ವಿರುದ್ಧ ಸೆಬಿ ನೌಕರರೇ ತಿರುಗಿಬಿದ್ದಿದ್ದಾರೆ. ಮಾಧವಿ ರಾಜೀನಾಮೆಗೆ ಆಗ್ರಹಿಸಿ ಸೆಬಿ ಕಚೇರಿ ಹೊರಗೆ ಗುರುವಾರ ಅವರು ಪ್ರತಿಭಟನೆ ನಡೆಸಿದರು. ಅದಾನಿ ಗ್ರೂಪ್‌ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸಿಬ್ಬಂದಿಯನ್ನು ‘ಬಾಹ್ಯ ಶಕ್ತಿಗಳಿಂದ’ ದಾರಿತಪ್ಪಿಸಲಾಗುತ್ತಿದೆ ಎಂದು ಇತ್ತೀಚೆಗೆ ಸೆಬಿ ಸಮರ್ಥನೆ ನೀಡಿತ್ತು. ಇದರಿಂದ ಅಸಮಾಧಾನಗೊಂಡ ನೌಕರರು ಕಚೇರಿಯ ಹೊರಗೆ ಮೌನ ಪ್ರತಿಭಟನೆ ನಡೆಸಿದರು.

==

ಅಕ್ರಮ ಮಸೀದಿ ವಿರೋಧಿಸಿ ಹಿಂದೂಗಳಿಂದ ತೀವ್ರ ಪ್ರತಿಭಟನೆ

ಶಿಮ್ಲಾ: ಸಂಜೌಲಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮಸೀದಿಯನ್ನು 15 ದಿನಗಳೊಳಗಾಗಿ ಕೆಡವುವಂತೆ ಕೋರಿ ಹಿಂದೂ ಹಕ್ಕುಗಳ ಸಂಸ್ಥೆಗಳು ವಿಧಾನಸಭೆಯ ಸಮೀಪದ ಚೌರಾ ಮೈದಾನದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.ದೇವ ಭೂಮಿ ಶಾತ್ರಿಯ ಸಂಘಟನೆ ಮತ್ತು ಹಿಂದೂ ಜಾಗರಣ ಮಂಚ್‌ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಕೇಸರಿ ಧ್ವಜ, ಶ್ರೀರಾಮನ ಚಿತ್ರಗಳನ್ನು ಹಿಡಿದ ಜನ ಬೀದಿಗಿಳಿದಿದ್ದಾರೆ.

ಆ.30ರಂದು ಉದ್ಯಮಿಯೊಬ್ಬನ ಮೇಲೆ ಮುಸ್ಲಿಮರ ಗುಂಪು ನಡೆಸಿದ ದಾಳಿಯ ಬೆನ್ನಲ್ಲೇ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

==

ತೆಲಂಗಾಣ: ಪೊಲೀಸರಿಂದ 6 ನಕ್ಸಲರ ಹತ್ಯೆ

ಹೈದರಾಬಾದ್‌: ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯಲ್ಲಿ ಗುರುವಾರ ಮಾವೋವಾದಿ ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಿಷೇಧಿತ ಸಿಪಿಐನ 6 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಚಕಮಕಿ ವೇಳೆ ಇಬ್ಬರು ಕಮಾಂಡೋಗಳಿಗೆ ಗಾಯಗಳಾಗಿವೆ.

ಛತ್ತೀಸ್‌ಗಢ ಗಡಿಯಿಂದ ಮಾವೋವಾದಿಗಳು ತೆಲಂಗಾಣಕ್ಕೆ ಪ್ರವೇಶಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕೊತ್ತಗೂಡೆಂ ಜಿಲ್ಲೆಯ ಕರಕಗೂಡೆಂ ಪೊಲೀಸ್‌ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದ್ದು, 6 ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.ಘಟನಾ ಸ್ಥಳದಿಂದ 2 ಎಕೆ 47, ಎಸ್‌ಎಲ್‌ಆರ್ ಸೇರಿದಂತೆ 6 ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಶೋಧಕಾರ್ಯ ಮುಂದುವರೆದಿದೆ.

==

ಮಂಗಳವಾರ ಕೇಜ್ರಿ ಜಾಮೀನು ತೀರ್ಪು ಪ್ರಕಟ ಸಂಭವ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ತಮ್ಮನ್ನು ಸಿಬಿಐ ಬಂಧಿಸಿದ್ದನ್ನು ಪ್ರಶ್ನಿಸಿ ಮತ್ತು ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಗುರುವಾರ ಸುಪ್ರೀಂ ಕೋರ್ಟ್ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ. ಮಂಗಳವಾರ ತೀರ್ಪು ಪ್ರಕಟ ಸಾಧ್ಯತೆ ಇದೆ.

ಕೇಜ್ರಿವಾಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ‘ಕೇಜ್ರಿವಾಲ್‌ ಅವರನ್ನು ಯಾವುದೇ ಮಾನದಂಡ ಇಲ್ಲದೇ ಸಿಬಿಐ ಬಂಧಿಸಿದೆ. ಅವರ ಮೇಲೆ ಎಫ್‌ಐಆರ್‌ ಕೂಡ ದಾಖಲಿಸಿಲ್ಲ. ಕೇಜ್ರಿವಾಲ್‌ ಸಿಎಂ ಆಗಿರುವ ಕಾರಣ ಅವರು ಹೊರಬಂದರೆ ಸಮಾಜಕ್ಕೆ ತೊಂದರೆ ಇಲ್ಲ ಎಂದು ಖುದ್ದು ಸುಪ್ರೀಂ ಕೋರ್ಟ್‌ ಹಿಂದೊಮ್ಮೆ ಹೇಳಿತ್ತು’ ಎಂದರು.ಆದರೆ ಸಿಬಿಐ ವಕೀಲರು ಇದನ್ನು ವಿರೋಧಿಸಿ, ‘ಹಗರಣದ ಫಲಾನುಭವಿ ಕೇಜ್ರಿವಾಲ್‌ ಅಧ್ಯಕ್ಷತೆಯ ಆಪ್‌ ಪಕ್ಷ. ಅವರಿಗೆ ಜಾಮೀನು ನೀಡಿದರೆ ಜಾಮೀನು ನಿರಾಕರಿಸಿದ್ದ ಹೈಕೋರ್ಟಿನ ನೈತಿಕ ಸ್ಥೈರ್ಯ ಕುಂದುತ್ತದೆ’ ಎಂದರು. ಕೊನೆಗೆ ಕೋರ್ಟು ತೀರ್ಪು ಕಾಯ್ದಿರಿಸಿದರು.

ಇ.ಡಿ. ಬಂಧನದಿಂದ ಕೇಜ್ರಿವಾಲ್‌ಗೆ ಜಾಮೀನು ಸಿಕ್ಕಿತ್ತು. ಆದರೆ ಬಳಿಕ ಜು.26 ರಂದು ಅವರನ್ನು ಸಿಬಿಐ ಬಂಧಿಸಿತ್ತು. ಆ.5 ರಂದು ಇವರ ಬಂಧನ ಕಾನೂನುಬದ್ಧವಾಗಿದೆ ಎಂದು ದೆಹಲಿ ಹೈಕೋರ್ಟ್‌ ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ ಕದ ಬಡಿದಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ- ಇರಾನ್‌ ಯುದ್ಧ! ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಅಟ್ಯಾಕ್‌!
ಅಕ್ಕಪಕ್ಕದ ದೇಶಗಳಿಗೂ ಯುದ್ಧದ ಕೊಳ್ಳಿ