ಕದನ ವಿರಾಮವೋ?ಯುದ್ಧವೋ? ಆಯ್ಕೆನಿಮ್ಮದು: ಇರಾನ್‌

KannadaprabhaNewsNetwork |  
Published : Apr 10, 2026, 01:30 AM IST
ಇಸ್ರೇಲ್‌  | Kannada Prabha

ಸಾರಾಂಶ

ರಾನ್ ಬೆಂಬಲಿತ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ನೆಲೆಗಳ ಮೇಲೆ ಇಸ್ರೇಲ್‌ ದಾಳಿ ಮುಂದುವರಿಸುತ್ತಿರುವ ಪರಿಣಾಮ ಗುಡುಗಿರುವ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ, ‘2 ವಾರಗಳ ಕದನ ವಿರಾಮ ಒಪ್ಪಂದದಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

- ಎರಡನ್ನೂ ಒಟ್ಟಿಗೆ ಮಾಡಲು ಬರಬೇಡಿ

- ಅಮೆರಿಕಕ್ಕೆ ಇರಾನಿಂದ ನೇರ ತಾಕೀತು

ಟೆಹ್ರಾನ್: ಇರಾನ್ ಬೆಂಬಲಿತ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ನೆಲೆಗಳ ಮೇಲೆ ಇಸ್ರೇಲ್‌ ದಾಳಿ ಮುಂದುವರಿಸುತ್ತಿರುವ ಪರಿಣಾಮ ಗುಡುಗಿರುವ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ, ‘2 ವಾರಗಳ ಕದನ ವಿರಾಮ ಒಪ್ಪಂದದಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಒಂದೋ ನೀವು ಕದನ ವಿರಾಮವನ್ನು ಒಪ್ಪಿಕೊಳ್ಳಬೇಕು ಅಥವಾ ಇಸ್ರೇಲ್‌ ಮೂಲಕ ಯುದ್ಧ ಮುಂದುವರಿಸಬೇಕು. ಎರಡನ್ನೂ ಒಟ್ಟಿಗೆ ಆಯ್ದುಕೊಳ್ಳಲು ಸಾಧ್ಯವಿಲ್ಲ’ ಎಂದು ಅಮೆರಿಕಕ್ಕೆ ಎಚ್ಚರಿಸಿದ್ದಾರೆ.

ಅತ್ತ ಇರಾನ್‌ ಸಂಸತ್ತಿನ ಸ್ಪೀಕರ್‌ ಮೊಹಮ್ಮದ್‌ ಬಘೇರ್‌ ಕಾಲಿಬಾಫ್‌, ‘ಈ ಕೂಡಲೇ ದಾಳಿಯನ್ನು ನಿಲ್ಲಿಸಿ. ಇಲ್ಲದಿದ್ದರೆ ಬಲವಾದ ಪ್ರತಿಕ್ರಿಯೆಗಳನ್ನು ಎದುರಿಸಬೇಕಾಗುವುದು’ ಎಂದು ಎಕ್ಸ್‌ ಪೋಸ್ಟ್‌ ಮೂಲಕ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ.

ಆದರೆ ಇದಕ್ಕೆ ಜಗ್ಗದ ಇಸ್ರೇಲ್‌, ತಾನು ದಾಳಿ ಮುಂದುವರಿಸುವುದಾಗಿ ಪುನರುಚ್ಚರಿಸಿದೆ. ಹೀಗಾಗಿ ಇರಾನ್‌ ಈಗೇನು ಮಾಡಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಕದನ ವಿರಾಮ ಬೆನ್ನಲ್ಲೇ ಬುಧವಾರ ಲೆಬನಾನ್‌ ಮೇಲೆ ಇಸ್ರೇಲ್‌ ಭಾರೀ ದಾಳಿ ನಡೆಸಿತ್ತು. ದಾಳಿಯಲ್ಲಿ 203 ಮಂದಿ ಸಾವನ್ನಪ್ಪಿದ್ದು ಮತ್ತು 1,165 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.ಇರಾನ್‌ನ ಕದನ ವಿರಾಮದ ಚೌಕಟ್ಟು 10 ಅಂಶಗಳ ಪ್ರಸ್ತಾಪವನ್ನು ಅವಲಂಬಿಸಿದೆ. ಈ ಅಂಶಗಳಿಗೆ ಅಮೆರಿಕ ಹಾಗೂ ಸಂಧಾನಕಾರನಾಗಿ ಕೆಲಸ ಮಾಡಿದ ಪಾಕಿಸ್ತಾನ ಕೂಡ ಒಪ್ಪಿಕೊಂಡಿದೆ. ಲೆಬನಾನ್‌ ಸೇರಿ ಇರಾನ್‌ನ ಎಲ್ಲಾ ಮಿತ್ರಪಡೆಗಳ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎಂದು ಆ ಪ್ರಸ್ತಾಪದಲ್ಲಿ ಸ್ಪಷ್ಟವಾಗಿ ಆಗ್ರಹಿಸಲಾಗಿದೆ. ಆದರೆ ಇದನ್ನು ಇಸ್ರೇಲ್‌ ಗಾಳಿಗೆ ತೂರಿದೆ ಎಂಬುದು ಇರಾನ್‌ ವಾದ.

ಇದಕ್ಕೂ ಮುನ್ನ ಇಸ್ರೇಲ್‌ ಪ್ರಧಾನಿ ನೆತನ್ಯಾಹು, ಕದನವಿರಾಮದಲ್ಲಿ ಲೆಬನಾನ್‌ ಸೇರಿಲ್ಲ ಎಂದಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರು ಕೂಡ ಕದನ ವಿರಾಮ ಒಪ್ಪಂದ ಲೆಬನಾನ್‌ಗೆ ಸಂಬಂಧವಿಲ್ಲ ಎಂದು ಹೇಳಿದ್ದರು. ಇದು ಇರಾನ್ ಕೆಂಗಣ್ಣಿಗೆ ಕಾರಣವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಗುಲ ಪ್ರವೇಶ ನಿರ್ಬಂಧಧರ್ಮಕ್ಕೆ ಮಾರಕ: ಸುಪ್ರೀಂ
3 ರಾಜ್ಯಗಳಲ್ಲಿ ಭರ್ಜರಿ ಮತದಾನ