ಇಸ್ಕಾನ್ ಜಗನ್ನಾಥ ಮಂದಿರದ ರಥದ ಚಕ್ರಗಳನ್ನು ಬದಲಿಸುವ 20 ವರ್ಷಗಳ ಪ್ರಯತ್ನ ಈಗ ಫಲ ನೀಡಿದೆ, ವಿಶೇಷವೆಂದರೆ, ಈ ರಥಕ್ಕೆ ಬೋಯಿಂಗ್ ವಿಮಾನದ ಚಕ್ರವನ್ನು ಅಳವಡಿಸಲಾಗಿತ್ತು. ಅದರ ಜಾಗಕ್ಕೀಗ ಸುಖೋಯ್ ಯುದ್ಧವಿಮಾನದ ಚಕ್ರಗಳು ಬರಲಿವೆ.
ಕೋಲ್ಕತಾ: ಇಲ್ಲಿನ ಇಸ್ಕಾನ್ ಜಗನ್ನಾಥ ಮಂದಿರದ ರಥದ ಚಕ್ರಗಳನ್ನು ಬದಲಿಸುವ 20 ವರ್ಷಗಳ ಪ್ರಯತ್ನ ಈಗ ಫಲ ನೀಡಿದೆ, ವಿಶೇಷವೆಂದರೆ, ಈ ರಥಕ್ಕೆ ಮರ ಅಥವಾ ಕಲ್ಲಿನ ಚಕ್ರ ಬಳಸುವ ಬದಲು, ಬೋಯಿಂಗ್ ವಿಮಾನದ ಚಕ್ರವನ್ನು ಅಳವಡಿಸಲಾಗಿತ್ತು.
ಅದರ ಜಾಗಕ್ಕೀಗ ಸುಖೋಯ್ ಯುದ್ಧವಿಮಾನದ ಚಕ್ರಗಳು ಬರಲಿವೆ.ಜೂ.27ರಂದು ಈ ವರ್ಷದ ಯಾತ್ರೆ ನಡೆಯಲಿದ್ದು, ಅದಕ್ಕೂ ಮೊದಲು ಹೊಸ ಗಾಲಿಗಳನ್ನು ಅಳವಡಿಸಲಾಗುತ್ತಿದೆ.1972ರಲ್ಲಿ 3 ದೇವತೆಗಳ ವಿಗ್ರಹವಿದ್ದ ಸಣ್ಣ ರಥದ ಯಾತ್ರೆಯನ್ನು ಆರಂಭಿಸಲಾಗಿತ್ತು. 5 ವರ್ಷದ ಬಳಿಕ, ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರಿಗಾಗಿ ಭಕ್ತರೊಬ್ಬರು 3 ಪ್ರತ್ಯೇಕ ರಥ ದಾನ ಮಾಡಿದ್ದರು.
ಮೊದಲು, ಭಾರವಾಗಿದ್ದ ಜಗನ್ನಾಥನ ರಥಕ್ಕೆ ಬೋಯಿಂಗ್ ವಿಮಾನಕ್ಕೆ ಬಳಸಲಾಗುವ ಚಕ್ರವನ್ನು ಅಳವಡಿಸಲಾಗಿತ್ತು. ಕಾಲಕ್ರಮೇಣ ಅವು ಸವೆದ ಕಾರಣ, 2005ರಲ್ಲಿ ಅವನ್ನು ಬದಲಿಸಲು ನಿರ್ಧರಿಸಲಾಯಿತು. ಬೃಹತ್ ರಥದ ಭಾರ ಹೊರಬಲ್ಲ ಚಕ್ರಗಳು ಬೇಕಾಗಿದ್ದವು. ಅದಕ್ಕಾಗಿ ರಥದ ತೂಕ ತಿಳಿಯಬೇಕಾಗಿತ್ತು. 9 ಟನ್ ತೂಕದ ರಥದಲ್ಲಿ ಭಕ್ತರೂ ಇದ್ದರೆ ಅದು 16 ಟನ್ ತೂಗುವುದೆಂದು ತಿಳಿಯಿತು.
ಇಷ್ಟು ಭಾರ ತಡೆಯಬಲ್ಲ ಚಕ್ರಕ್ಕೆ ಶೋಧ ಆರಂಭಿಸಲಾಯಿತು.ಆಗ ಚಕ್ರ ಪೂರೈಸುವಂತೆ ಡನ್ಲಪ್ ಕಂಪನಿಯನ್ನು ಸಂಪರ್ಕಿಸಲಾಯಿತು. ಅವರು ಉತ್ಪಾದನೆಯನ್ನು ನಿಲ್ಲಿಸಿರುವುದಾಗಿ ತಿಳಿಯಿತು. 2018ರಲ್ಲಿ ಸುಖೋಯ್ಗಳ ಚಕ್ರ ಉತ್ಪಾದಕ ಎಂಆರ್ಎಫ್ಅನ್ನು ಸಂಪರ್ಕಿಸಲಾಯಿತು. ಅವರು ಮೊದಲು ಅಷ್ಟು ಸ್ಪಂದಿಸಲಿಲ್ಲ. ಆದರೆ 6 ವರ್ಷ ನಂತರ 2024ರಲ್ಲಿ ಅವರು ಸ್ಪಂದಿಸಿದರು ಮತ್ತು ಕಳೆದ ತಿಂಗಳು ಸುಖೋಯ್ ವಿಮಾನಗಳ ಚಕ್ರಗಳನ್ನು ಕಳುಹಿಸಿ ಅದನ್ನು ರಥಕ್ಕೆ ಅಳವಡಿಸಿಕೊಟ್ಟಿದ್ದಾರೆ.ಈ ಬಗ್ಗೆ ಕೋಲ್ಕತಾ ಇಸ್ಕಾನ್ದ ಉಪಾಧ್ಯಕ್ಷರಾದ ರಾಧಾರಾಮನ್ ದಾಸ್ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಮಾನದ ಚಕ್ರ ಏಕೆ?
ರಥದ ಜತೆ ಭಕ್ತರ ಸೇರಿದರೆ 16 ಟನ್ ತೂಕ ಆಗುತ್ತದೆ ಇದನ್ನು ತಡೆಯಲು ಭಾರೀ ಸಾಮರ್ಥ್ಯದ ಚಕ್ರ ಬೇಕಿತ್ತು ಹೀಗಾಗಿ ಬೋಯಿಂಗ್ ಬದಲು ಸುಖೋಯ್ ಚಕ್ರ ಬಳಕೆ