ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಹಿಜ್ಬುಲ್ಲಾಗಳಿಗೆ ಸೇರಿದ ₹4200 ಟಿ ನಗದು, ಬಂಗಾರ ಪತ್ತೆ!

KannadaprabhaNewsNetwork | Published : Oct 23, 2024 12:40 AM

ಲೆಬನಾನ್‌ ರಾಜಧಾನಿ ಬೈರೂತ್‌ನ ಅಲ್‌ ಸಹೇಲ್ ಆಸ್ಪತ್ರೆಯ ಕೆಳಗೆ ಹಿಜ್ಬುಲ್ಲಾ ಉಗ್ರರು ಸಂಗ್ರಹಿಸಿ ಇಟ್ಟಿದ್ದ 4200 ಕೋಟಿ ರು. ಮೌಲ್ಯದ ನಗದು ಮತ್ತು ಚಿನ್ನದ ಸಂಗ್ರಹ ಪತ್ತೆಯಾಗಿದೆ.

ಬೈರೂತ್‌: ಲೆಬನಾನ್‌ ರಾಜಧಾನಿ ಬೈರೂತ್‌ನ ಅಲ್‌ ಸಹೇಲ್ ಆಸ್ಪತ್ರೆಯ ಕೆಳಗೆ ಹಿಜ್ಬುಲ್ಲಾ ಉಗ್ರರು ಸಂಗ್ರಹಿಸಿ ಇಟ್ಟಿದ್ದ 4200 ಕೋಟಿ ರು. ಮೌಲ್ಯದ ನಗದು ಮತ್ತು ಚಿನ್ನದ ಸಂಗ್ರಹ ಪತ್ತೆಯಾಗಿದೆ. ಇದನ್ನು ತನ್ನ ಕಾರ್ಯಾಚರಣೆಗಾಗಿ ಹಿಜ್ಬುಲ್ಲಾ ಉಗ್ರರು ಸಂಗ್ರಹಿಸಿ ಇಟ್ಟಿದ್ದರು ಎಂದು ಇಸ್ರೇಲ್‌ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್‌ ಸೇನೆಯ ವಕ್ತಾರ ಡೇನಿಯಲ್‌ ಹಗರಿ, ‘ಬೈರೂತ್‌ನ ಆಸ್ಪತ್ರೆಯ ತಳಭಾಗದಲ್ಲಿ ನಿರ್ಮಿಸಿರುವ ಸುರಂಗದಲ್ಲಿ ಹಿಜ್ಬುಲ್ಲಾ ಉಗ್ರರು ಸಂಗ್ರಹಿಸಿದ್ದ ಭಾರೀ ಪ್ರಮಾಣದ ನಗದು ಮತ್ತು ಚಿನ್ನದ ಸಂಗ್ರಹ ಕುರಿತ ರಹಸ್ಯ ಮಾಹಿತಿಯನ್ನು ಇದೀಗ ಬಹಿರಂಗಪಡಿಸುತ್ತಿದ್ದೇವೆ. ಇದನ್ನು ಕೆಲ ದಿನಗಳ ಹಿಂದೆ ಹತನಾದ ಹಿಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸ್ರಲ್ಲಾ ಸಂಗ್ರಹಿಸಿ ಇಟ್ಟಿದ್ದ. ಆದರೆ ಈ ಮಾಹಿತಿ ಸಿಕ್ಕ ಹೊರತಾಗಿಯೂ ನಾವು ಇನ್ನೂ ಅದರ ಮೇಲೆ ದಾಳಿ ನಡೆಸಿಲ್ಲ. ಇದನ್ನು ಹೊರತೆಗೆದು ಅದನ್ನು ಲೆಬನಾನ್‌ನ ಪುನರ್‌ ನಿರ್ಮಾಣಕ್ಕೆ ಬಳಸಬಹುದಾಗಿದೆ’ ಎಂದು ಹೇಳಿದ್ದಾರೆ.

ಕಳೆದ ಭಾನುವಾರ ಇಸ್ರೇಲಿ ವಾಯುಪಡೆಗಳು, ಹಿಜ್ಬುಲ್ಲಾ ನಂಟಿನ ಹಣಕಾಸು ಸಂಸ್ಥೆಗಳು ಸೇರಿದಂತೆ ವಿವಿಧ ಸ್ಥಳಗಳ ಮೇಲೆ 300 ದಾಳಿ ನಡೆಸಿದ್ದವು.ಈ ನಡುವೆ ಇಸ್ರೇಲಿ ಸೇನಾಪಡೆಗಳು ಸಿರಿಯಾದಲ್ಲಿರುವ ಹಿಜ್ಬುಲ್ಲಾಗಳಿಗೆ ಹಣಕಾಸು ನೆರವಿನ ಕೇಂದ್ರ ಸ್ಥಾನವೆಂದು ಪರಿಗಣಿಸಲಾದ ಯುನಿಟ್‌ 4400 ಎಂಬ ಕೇಂದ್ರದ ಮೇಲೂ ಸೋಮವಾರ ದಾಳಿ ನಡೆಸಿವೆ. ಈ ಘಟಕದ ಮೂಲಕವೇ ಇರಾನ್‌ನಿಂದ ಹಿಜ್ಬುಲ್ಲಾಗಳಿಗೆ ಹಣಕಾಸಿ ನೆರವು ನೀಡುತ್ತಿತ್ತು ಎಂದು ಇಸ್ರೇಲ್‌ ಆರೋಪಿಸಿದೆ.

==

ಹನಿಯೆ, ಸಿನ್ವರ್‌ ಹತ್ಯೆ ಬಳಿಕ ಹಮಾಸ್‌ಗೆ ಹೊಸ ಬಾಸ್‌ ಇಲ್ಲ, ದೋಹಾ ಸಮಿತಿಯದ್ದೇ ನೇತೃತ್ವ

ಜೆರುಸಲೆಂ: ತನ್ನ ನಾಯಕರಾದ ಇಸ್ಲಾಯಿಲ್‌ ಹನಿಯೇ ಮತ್ತು ಯಾಹ್ಯಾ ಸಿನ್ವರ್ ಹತ್ಯೆಯಿಂದ ತತ್ತರಿಸಿರುವ ಪ್ಯಾಲೆಸ್ತೀನ್‌ ಮೂಲದ ಹಮಾಸ್‌ ಉಗ್ರ ಸಂಘಟನೆ, ಸದ್ಯಕ್ಕೆ ಸಂಘಟನೆಗೆ ಯಾವುದೇ ಮುಖ್ಯಸ್ಥರನ್ನು ನೇಮಕ ಮಾಡದೇ ಇರಲು ನಿರ್ಧರಿಸಿದೆ. ಮುಂದಿನ ಮಾರ್ಚ್‌ನಲ್ಲಿ ನಡೆವ ಚುನಾವಣೆ ವೇಳೆ ಹೊಸ ಮುಖ್ಯಸ್ಥರ ನೇಮಕ ಸೂಕ್ತ. ಅಲ್ಲಿಯವರೆಗೂ ದೋಹಾ ಮೂಲದ ಐವರು ಸದಸ್ಯರ ಆಡಳಿತ ಸಮಿತಿಯೇ ಸಂಘಟನೆಯನ್ನು ಮುನ್ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಗಾಜಾದ ಮೇಲೆ ಇಸ್ರೇಲ್‌ ದಾಳಿ ತೀವ್ರವಾದ ಬಳಿಕ, ಅಲ್ಲಿ ವಾಸವಿದ್ದ ಸಿನ್ವರ್‌ ಜೊತೆ ಸಂವಹನ ಕಷ್ಟವಾದ ಕಾರಣ, ಹಮಾಸ್‌ ಮುನ್ನಡೆಸಲು ದೋಹಾ ಸಮಿತಿ ರಚಿಸಲಾಗಿತ್ತು.