ಇಂದು ಜಾರ್ಖಂಡ್, ವಯನಾಡ್‌ ‘ಸಮರ’

KannadaprabhaNewsNetwork | Published : Nov 13, 2024 12:08 AM

ಸಾರಾಂಶ

ದೇಶದಲ್ಲೇ ಕುತೂಹಲ ಕೆರಳಿಸಿರುವ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ, ಕೇರಳದ ವಯನಾಡ್‌ ಸೇರಿದಂತೆ 2 ಲೋಕಸಭೆ ಕ್ಷೇತ್ರ ಮತ್ತು 34 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬುಧವಾರ ನಡೆಯಲಿವೆ.

ನವದೆಹಲಿ: ದೇಶದಲ್ಲೇ ಕುತೂಹಲ ಕೆರಳಿಸಿರುವ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ, ಕೇರಳದ ವಯನಾಡ್‌ ಸೇರಿದಂತೆ 2 ಲೋಕಸಭೆ ಕ್ಷೇತ್ರ ಮತ್ತು 34 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬುಧವಾರ ನಡೆಯಲಿವೆ.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಬುಧವಾರ ಮೊದಲ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ ನಡೆಯಲಿದೆ. 37 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. 683 ಅಭ್ಯರ್ಥಿಗಳು ಇಲ್ಲಿ ಸ್ಪರ್ಧಿಸಿದ್ದು, ಕಾಂಗ್ರೆಸ್-ಜೆಎಂಎಂ ಕೂಟ, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ನಡುವೆ ನೇರ ಹಣಾಹಣಿ ಇದೆ. ಇತ್ತೀಚೆಗೆ ಜೆಎಂಎಂ ತೊರೆದು ಬಿಜೆಪಿ ಸೇರಿದ್ದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಈ ಹಂತದ ಪ್ರಮುಖ ಅಭ್ಯರ್ಥಿ. ಜೆಎಂಎಂ-ಕಾಂಗ್ರೆಸ್ಸನ್ನು ಕೆಳಗಿಳಿಸಿ ಅಧಿಕಾರಕ್ಕೇರಲು ಇಲ್ಲಿ ಬಿಜೆಪಿ ಹವಣಿಸುತ್ತಿದೆ.

ವಯನಾಡಲ್ಲಿ ಪ್ರಿಯಾಂಕಾ ಅಗ್ನಿಪರೀಕ್ಷೆ:

ಇನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡ್‌ ಕ್ಷೇತ್ರದಲ್ಲಿ ಮೊದಲ ಬಾರಿ ಅವರ ಸೋದರಿ ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಚುನಾವಣೆ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿಯಿಂದ ನವ್ಯಾ ಹರಿದಾಸ್‌ ಹಾಗೂ ಎಲ್‌ಡಿಎಫ್‌ನಿಂದ ಸತ್ಯನ್‌ ಮೊಕೇರಿ ಸ್ಪರ್ಧಿಸಿದ್ದಾರೆ. 14,71,742 ಮತದಾರರು ಮತ ಚಲಾಯಿಸಲಿದ್ದಾರೆ.ನ.23ಕ್ಕೆ ಫಲಿತಾಂಶ:

ಜಾರ್ಖಂಡ್‌ನ 43 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನ.20ರಂದು ನಡೆಯಲಿವೆ. ಬಳಿಕ ಈ ಎಲ್ಲ ಕಡೆ ನ.23ರಂದು ಒಟ್ಟಿಗೇ ಫಲಿತಾಂಶ ಪ್ರಕಟವಾಗಲಿವೆ.

==

ಜಾರ್ಖಂಡಲ್ಲಿ ಗೆದ್ದರೆ 250 ಯುನಿಟ್‌ ಫ್ರೀ ವಿದ್ಯುತ್‌: ಕಾಂಗ್ರೆಸ್ ಭರವಸೆ

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಕೇವಲ 1 ದಿನ ಉಳಿದಿರುವಾಗ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್‌, 250 ಯುನಿಟ್ ಉಚಿತ ವಿದ್ಯುತ್, ಜಾತಿ ಆಧಾರಿತ ಜನಗಣತಿ ಮತ್ತು 1 ವರ್ಷದೊಳಗೆ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದೆ.

‘ಬಡವರಿಗೆ ಪ್ರಸ್ತುತ 200 ಯುನಿಟ್‌ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಇದನ್ನು 250 ಯುನಿಟ್‌ವರೆಗೆ ವಿಸ್ತರಿಸಲಾಗುವುದು. ನಾವು 1 ವರ್ಷದಲ್ಲಿ ಎಲ್ಲಾ ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ’ ಎಂದು ಪಕ್ಷದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಬಂಧು ಟಿರ್ಕೆ ಹೇಳಿದರು. ಇದೇ ವೇಳೆ, ಆದಿವಾಸಿಗಳ ಸರ್ನಾ ಧಾರ್ಮಿಕ ಸಂಹಿತೆಯ ಅನುಷ್ಠಾನ ಸೇರಿದಂತೆ 7 ಭರವಸೆಗಳ ಮೇಲೆ ಪ್ರಣಾಳಿಕೆ ಗಮನ ಕೇಂದ್ರೀಕರಿಸಿದೆ.

==

‘ನಾವು ಹುಟ್ಟಿದ್ದೇ ಭಾರತವನ್ನು ಆಳಲು ಎಂಬುದು ರಾಜ ಕುಟುಂಬದ ನಂಬಿಕೆ’

ಚಿಮುರ್‌ (ಮಹಾರಾಷ್ಟ್ರ): ಗಾಂಧೀ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ತಾವು ಜನಿಸಿರುವುದೇ ಭಾರತವನ್ನು ಆಳಲು ಎಂದು ‘ರಾಜಕುಟುಂಬ’ ನಂಬಿಕೊಂಡಿದೆ. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರದಲ್ಲಿ ದಲಿತರು, ಹಿಂದುಳಿದ ಸಮುದಾಯ ಮತ್ತು ಆದಿವಾಸಿಗಳ ಅಭಿವೃದ್ಧಿಗೆ ಅವರ ಬಿಡಲಿಲ್ಲ’ ಎಂದು ಕಿಡಿಕಾರಿದ್ದಾರೆ.ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಚಿಮುರ್‌ನಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ‘ಮೀಸಲು ವಿರೋಧಿ ಕಾಂಗ್ರೆಸ್‌ಗೆ ಆ ವಿಷಯ ಪ್ರಸ್ತಾಪಿಸಿದಾಗೆಲ್ಲಾ ಕಿರಿಕಿರಿಯಾಗುತ್ತದೆ. ಸ್ವಾತಂತ್ರ್ಯಾನಂತರ ಕಾಂಗ್ರೆಸ್‌, ದಲಿತರು, ಹಿಂದುಳಿದವರು ಹಾಗೂ ಆದಿವಾಸಿಗಳಿಗೆ ಅಭಿವೃದ್ಧಿ ಹೊಂದಲು ಬಿಡಲಿಲ್ಲ. ಬುಡಕಟ್ಟು ಸಮುದಾಯವನ್ನು ಜಾತಿ ಹೆಸರಲ್ಲಿ ಒಡೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಆದರೆ ನಾವು ಒಗ್ಗಟ್ಟಾಗಿದ್ದರೆ ಸುರಕ್ಷಿತರಾಗಿರುತ್ತೇವೆ ಎಂಬುದನ್ನು ಮರೆಯಬಾರದು ಎಂದು ಪುನರುಚ್ಚರಿಸಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ವಿಪಕ್ಷ ಕೂಟವಾದ ಮಹಾ ವಿಕಾಸ್‌ ಅಘಾಡಿಯನ್ನು ಮಹಾರಾಷ್ಟ್ರದ ಬೆಳವಣಿಗೆಗೆ ಕಂಟಕ ಎಂದು ಟೀಕಿಸಿದ ಮೋದಿ, ‘ಅಘಾಡಿ ಭ್ರಷ್ಟಾಚಾರದ ದೊಡ್ಡ ಖಿಲಾಡಿ. ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್‌ ಹಾಕುವುದರಲ್ಲಿ ಅವರು ನಿಪುಣರು. ಕಾಂಗ್ರೆಸ್‌ ಈ ವಿಷಯದಲ್ಲಿ ಡಬಲ್‌ ಪಿಎಚ್ಡಿ ಮಾಡಿದೆ’ ಎಂದರು. ಅಂತೆಯೇ, ಬಿಜೆಪಿಯ ಸಂಕಲ್ಪ ಪತ್ರವು ರಾಜ್ಯದ ಅಭಿವೃದ್ಧಿಗೆ ಭರವಸೆ ಎಂದರು.

Share this article