ನವದೆಹಲಿ: ಅಮೆರಿಕದ ಲೈಂಗಿಕ ಹಗರಣಗಳ ಆರೋಪಿ ಜೆಫ್ರಿ ಎಪ್ಸ್ಟೀನ್ ಕೇಸಲ್ಲಿ ಇದೀಗ ಉದ್ಯಮಿ ಅನಿಲ್ ಅಂಬಾನಿ ಹೆಸರು ದೊಡ್ಡಮಟ್ಟದಲ್ಲಿ ಕೇಳಿಬಂದಿದೆ. 2017ರ ಮಾರ್ಚ್ 9ರಂದು ಅನಿಲ್ ಅಂಬಾನಿ, ಎಪ್ಸ್ಟೀನ್ಗೆ ‘ಯಾರನ್ನು ಶಿಫಾರಸು ಮಾಡುವೆ?’ ಎಂದು ಸಂದೇಶ ಕಳುಹಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಪ್ಸ್ಟೀನ್ ‘ನಿಮ್ಮನ್ನು ಖುಷಿಯಾಗಿಸಲು ಎತ್ತರದ, ಹೊಂಬಣ್ಣದ ಸ್ವೀಡಿಷ್ ಯುವತಿ’ ಎನ್ನುತ್ತಾನೆ. ಈ ಸಂದೇಶ ಬಂದ ಕೇವಲ 20 ಸೆಕೆಂಡ್ಗಳಲ್ಲಿ ಅಂಬಾನಿಯು ‘ಅದನ್ನೇ ಹೊಂದಿಸು’ ಎಂದು ರಿಪ್ಲೈ ಮಾಡಿದ್ದು ಫೈಲ್ನಲ್ಲಿ ದಾಖಲಾಗಿದೆ.
ಸಂಸದ ಪಪ್ಪು ಯಾದವ್ ತಡರಾತ್ರಿಯಲ್ಲಿ ಅರೆಸ್ಟ್: ರಾಹುಲ್ ಆಕ್ರೋಶ
ನವದೆಹಲಿ: 1995ರ ಭೂ ವಿವಾದ ಪ್ರಕರಣ ಸಂಬಂಧ, ಮಾಜಿ ಡಾನ್, ಪಕ್ಷೇತರ ಸಂಸದ ಪಪ್ಪು ಯಾದವ್ ಅವರನ್ನು ಪಟನಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ವಿಚಾರಣೆಗೆ ಸತತ ಗೈರಿನ ಕಾರಣ, ಪಪ್ಪು ಬಂಧನಕ್ಕೆ ಕೋರ್ಟ್ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 10:30ಕ್ಕೆ ಪೊಲೀಸರು ಪಪ್ಪು ನಿವಾಸಕ್ಕೆ ಹೋದ ವೇಳೆ, ‘ನಾನು ರಾತ್ರಿ ಎಲ್ಲಿಗೂ ಬರುವುದಿಲ್ಲ. ಇದು ನನ್ನ ಕೊಲೆಯ ಸಂಚು’ ಎಂದು ಯಾದವ್ ವಾದಿಸಿದ್ದಾರೆ. ಅಷ್ಟರಲ್ಲಿ ಅವರ ಬೆಂಬಲಿಗರ ಪಡೆಯೂ ಬಂದು ಸೇರಿ ಹೈಡ್ರಾಮಾ ಸೃಷ್ಟಿಯಾಗಿದೆ. ಕೊನೆಗೆ 12:15ಕ್ಕೆ ಬಂಧನವಾಗಿದೆ. ಈ ನಡುವೆ ‘ಇದು ರಾಜಕೀಯ ದ್ವೇಷ ಪ್ರೇರಿತ ಕ್ರಮ. ಸರ್ಕಾರದ ಉತ್ತರದಾಯಿತ್ವವನ್ನು ಆಗ್ರಹಿಸುವ ಎಲ್ಲಾ ದನಿಗಳನ್ನು ಬೆದರಿಸಿ ಹತ್ತಿಕ್ಕುವ ತಂತ್ರ’ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
==ಮೈತೇಯಿ ಜತೆ ಸಮ್ಮಿಶ್ರ ಸರ್ಕಾರಕ್ಕೆ ಮಣಿಪುರದ ಕುಕಿ ವಿದ್ಯಾರ್ಥಿ ವಿರೋಧ
ನವದೆಹಲಿ: ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದ ಶಾಸಕರನ್ನು ಒಳಗೊಂಡ ಬಿಜೆಪಿ ಸರ್ಕಾರ ರಚನೆಯಾಗಿದ್ದಕ್ಕೆ ಕುಕಿ ಝೋ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ದೆಹಲಿಯ ಜಂತರ್ಮಂತರ್ ಬಳಿ ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದಲ್ಲಿ ಕುಕಿ ನಾಯಕಿ ನೇಮ್ಚಾ ಕಿಪ್ಜೆನ್ ಡಿಸಿಎಂ ಆಗಿದ್ದನ್ನು ವಿರೋಧಿಸುತ್ತಿರುವ ಕುಕಿ ಸಮುದಾಯ, ಪ್ರತ್ಯೇಕ ಆಡಳಿತಕ್ಕೆ ಆಗ್ರಹಿಸಿದೆ.
==ಶಬರಿಮಲೆ ಚಿನ್ನಕ್ಕೆ ಕನ್ನ: ಅಯ್ಯಪ್ಪ ದೇಗುಲದಿಂದ ತಂತ್ರಿ ರಾಜೀವರು ವಜಾ?
ತಿರುವನಂತಪುರ: ಶಬರಿಮಲೆ ದೇಗುಲದ ದ್ವಾರಪಾಲಕ ಮತ್ತು ಗರ್ಭಗುಡಿಯ ಚಿನ್ನ ಲೇಪಿತ ತಾಮ್ರ ಕವಚದಿಂದ ಚಿನ್ನ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಗುಡಿಯ ಅರ್ಚಕ ಕಂಡರಾರು ರಾಜೀವರು ಅವರನ್ನು ಸ್ಥಾನದಿಂದ ತೆಗೆದುಹಾಕುವ ಕುರಿತು ಚರ್ಚೆಗಳು ಎದ್ದಿವೆ. ಈ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಸದಸ್ಯ, ವಕೀಲ ಪಿ.ಡಿ.ಸಂತೋಷ್ ಕುಮಾರ್ ಮಾತನಾಡಿ, ‘ರಾಜೀವರು ಅವರು ಇದರಲ್ಲಿ ಆರೋಪಿಯಾಗಿರುವ ಕಾರಣ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಬೇಕೆ ಅಥವಾ ತೆಗೆದು ಹಾಕಬೇಕೆ ಎಂಬುದನ್ನು ಪರೀಕ್ಷಿಸಬೇಕಿದೆ. ಜೊತೆಗೆ ಮಂಡಳಿಯು ಕೇರಳ ಹೈಕೋರ್ಟ್ನ ಅಭಿಪ್ರಾಯವನ್ನು ಪರಿಗಣಿಸಲಿದೆ ಎಂದು ತಿಳಿಸಿದರು. ಕಂಡರಾರು ಅವರು ಕವಚಗಳನ್ನು ಬದಲಾಯಿಸುವ ಕುರಿತು ಶಿಫಾರಸು ಮಾಡಿದ್ದರೆಂದು ಎಸ್ಐಟಿ ಅವರನ್ನು ಬಂಧಿಸಿದೆ.
==ಸ್ಪೀಕರ್ ಕಚೇರಿಗೂ ನುಗ್ಗಿ ವಿಪಕ್ಷಗಳಿಂದ ದುರ್ವರ್ತನೆ
ಇದೇ ಕಾರಣಕ್ಕೆ ಮೋದಿ ಭಾಷಣ ರದ್ದು
ಪಟನಾ: ಲೋಕಸಭೆಯಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿ ಭಾಷಣ ರದ್ದಾಗಿದ್ದ ಘಟನೆ ಸಂಬಂಧ ಮತ್ತಷ್ಟು ಬೆಳಕು ಚೆಲ್ಲಿರುವ ಸಂಸದೀಯ ಖಾತೆ ಕಿರಣ್ ರಿಜಿಜು, ಅಂದು ವಿಪಕ್ಷಗಳ 40-50 ಸದಸ್ಯರು ಸ್ಪೀಕರ್ ಓಂ ಬಿರ್ಲಾ ಕಚೇರಿಯೊಳಗೆ ನುಗ್ಗಿ ಸ್ವತಃ ಸ್ಪೀಕರ್ ಜೊತೆಗೆ ದುರ್ವರ್ತನೆ ತೋರಿದ್ದರು. ಈ ವೇಳೆ ನಾನು ಕೂಡಾ ಅಲ್ಲೇ ಇದ್ದೆ. ಇದೇ ಕಾರಣಕ್ಕಾಗಿಯೇ ಸದನದಲ್ಲಿ ಮೋದಿ ಅವರು ಆಹ್ವಾನಿಸದಂತೆ ಸ್ಪೀಕರ್ ಸಲಹೆ ನೀಡಿ ಪರಿಸ್ಥಿತಿ ನಿಭಾಯಿಸಿದರು ಎಂದು ಹೇಳಿದರು. ವಿಪಕ್ಷಗಳ ಸದಸ್ಯರು ಅಂದು ಮೋದಿ ವಿರುದ್ಧ ಅನಿರೀಕ್ಷಿತ ಕೃತ್ಯಕ್ಕೆ ಸಜ್ಜಾಗಿದ್ದರು ಎಂದು ಇತ್ತೀಚೆಗೆ ಓಂ ಬಿರ್ಲಾ ಹೇಳಿದ್ದರು.