;Resize=(412,232))
ಕೋಲ್ಕತಾ: ‘ಪಶ್ಚಿಮ ಬಂಗಾಳದ ಜಂಗಲ್ ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ತಾಂಡವವಾಡುತ್ತಿದೆ. ಆದ್ದರಿಂದ 2026ರ ಚುನಾವಣೆಯಲ್ಲಿ ಡಬಲ್ ಎಂಜಿನ್ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ಕೊಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
3,200 ಕೋಟಿ ರು.ನ 2 ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗಾಗಿ ನಾದಿಯಾ ಜಿಲ್ಲೆಯ ತಾಹೇರ್ಪುರ್ಗೆ ಮೋದಿ ಬರಬೇಕಿತ್ತು. ಆದರೆ ದಟ್ಟ ಮಂಜಿನಿಂದಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಾಧ್ಯವಾಗದ ಕಾರಣ ಅವರು ಕೋಲ್ಕತ್ತಾಗೆ ಮರಳಿ ಅಲ್ಲಿಂದಲೇ ಪೋನ್ ಮೂಲಕ ಜನರನ್ನುದ್ದೇಶಿಸಿ ಮಾತನಾಡಿದರು.
‘ಟಿಎಂಸಿ ಸರ್ಕಾರ ಬಿಜೆಪಿಯನ್ನು ವಿರೋಧಿಸಲಿ. ಆದರೆ ಜನರನ್ನು ಬಲವಂತವಾಗಿ ಹಿಡಿದಿಟ್ಟುಕೊಂಡು ಸಂಕಷ್ಟಕ್ಕೆ ಸಿಲುಕಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕಾಗಿ ಒಳ್ಳೆ ಯೋಜನೆ ಮತ್ತು ನಿಧಿಗಳನ್ನು ನೀಡಿದರೂ, ಭ್ರಷ್ಟಾಚಾರದಿಂದಾಗಿ ಅದು ನಿಗದಿತ ಉದ್ದೇಶಕ್ಕೆ ಬಳಕೆಯಾಗದೆ ಪ್ರಗತಿ ಕುಂಠಿತವಾಗಿದೆ’ ಎಂದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
ಜತೆಗೆ, ‘ಟಿಎಂಸಿಯವರು ಮತಕ್ಕಾಗಿ ಅಕ್ರಮ ವಲಸಿಗರಿಗೆ ಆಶ್ರಯ ನೀಡುತ್ತಿದ್ದಾರೆ. ಆದ್ದರಿಂದ ಎಸ್ಐಆರ್ ವಿರೋಧಿಸುತ್ತಿದ್ದಾರೆ. ಅವರ ದುರಾಡಳಿತದಿಂದ ಮುಕ್ತಿ ಪಡೆಯಿರಿ. ರಾಜ್ಯದಲ್ಲಿ ಅಭಿವೃದ್ಧಿ ಮಾಡಲು ಬಿಹಾರದಂತೆ ಬಿಜೆಪಿಗೆ ಅವಕಾಶ ಕೊಡಿ. ಅಲ್ಲಿಂದ ಗಂಗೆ ಇಲ್ಲಿಗೆ ಹರಿಯಲಿದೆ’ ಎನ್ನುವ ಮೂಲಕ, 2026ರ ಮಾರ್ಚ್-ಏಪ್ರಿಲ್ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.