ಕಾಂಚನಜುಂಗಾ ದುರಂತಕ್ಕೆ ರೈಲ್ವೆ ವ್ಯವಸ್ಥೆಯ ಲೋಪವೇ ಕಾರಣ: ವರದಿ

KannadaprabhaNewsNetwork |  
Published : Jul 17, 2024, 01:00 AM IST
 ಕಾಂಚನಜುಂಗಾ  | Kannada Prabha

ಸಾರಾಂಶ

ಕಳೆದ ಜೂ.17ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ಕಾಂಚನಜುಂಗಾ ರೈಲು ಅಪಘಾತಕ್ಕೆ ಇಡೀ ರೈಲ್ವೆ ವ್ಯವಸ್ಥೆಯಲ್ಲಿನ ಹಲವು ಹಂತದಲ್ಲಿ ಲೋಪ ಸಂಭವಿಸಿದ್ದೇ ಕಾರಣ ಎಂದು ರೈಲ್ವೆ ಸುರಕ್ಷತಾ ಆಯುಕ್ತರ ವರದಿ ಬೊಟ್ಟುಮಾಡಿದೆ.

ನವದೆಹಲಿ: ಕಳೆದ ಜೂ.17ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ಕಾಂಚನಜುಂಗಾ ರೈಲು ಅಪಘಾತಕ್ಕೆ ಇಡೀ ರೈಲ್ವೆ ವ್ಯವಸ್ಥೆಯಲ್ಲಿನ ಹಲವು ಹಂತದಲ್ಲಿ ಲೋಪ ಸಂಭವಿಸಿದ್ದೇ ಕಾರಣ ಎಂದು ರೈಲ್ವೆ ಸುರಕ್ಷತಾ ಆಯುಕ್ತರ ವರದಿ ಬೊಟ್ಟುಮಾಡಿದೆ.

ಜೂ.17ರಂದು ಕಾಂಚನಜುಂಗಾ ರೈಲು ಗೂಡ್ಸ್‌ ರೈಲೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಚಾಲಕ ಸೇರಿ 11 ಜನರು ಸಾವನ್ನಪ್ಪಿದ್ದರು. ಈ ಬಗ್ಗೆ ಸುರಕ್ಷತಾ ಆಯುಕ್ತರು ತನಿಖೆ ಕೈಗೊಂಡಿದ್ದರು.

ಏನೇನು ಲೋಪ?:

ಘಟನೆ ನಡೆದ ದಿನ ಸಿಗ್ನಲ್‌ ದೋಷವಿದ್ದ ಕಾರಣ ಸ್ಟೇಷನ್‌ ಮಾಸ್ಟರ್‌ ಗೂಡ್ಸ್‌ ರೈಲಿನ ಚಾಲಕನಿಗೆ ಮುಂದೆ ಸಾಗಲು ನೀಡಿದ್ದ ಪೇಪರ್‌ ಅಥಾರಿಟಿ ಅನುಮತಿ ವೇಳೆ ಸೂಕ್ತ ಮಾಹಿತಿ ನೀಡಿರಲಿಲ್ಲ. ಎಷ್ಟು ವೇಗದಲ್ಲಿ ರೈಲು ಚಲಿಸಬೇಕು ಎಂದು ಸೂಚಿಸಿರಲಿಲ್ಲ. ಇದು ಸ್ಟೇಷನ್‌ ಮಾಸ್ಟರ್ ಕಡೆಯಿಂದ ಆದ ತಪ್ಪು.

ಇನ್ನೊಂದೆಡೆ ಸಿಗ್ನಲ್‌ ದೋಷವಿದ್ದಾಗ ಅದೇ ಮಾರ್ಗದಲ್ಲಿ ಒಟ್ಟು 5 ರೈಲುಗಳು ಸಂಚರಿಸಿದ್ದವು. ಒಬ್ಬೊಬ್ಬರು ಒಂದೊಂದು ವೇಗದಲ್ಲಿ ಚಲಿಸಿದ್ದು ಅವರ ಕಡೆಯಿಂದಲೂ ಆದ ತಪ್ಪು. ಪ್ರತಿ ದೋಷ ಪೂರಿತ ಸಿಗ್ನಲ್‌ ಬಳಿ 1 ನಿಮಿಷ ರೈಲು ಸ್ಥಗಿತಬೇಕೆಂಬ ನಿಯಮವನ್ನೂ ಚಾಲಕರು ಪಾಲಿಸಿಲ್ಲ. ಏಕೆಂದರೆ ಚಾಲಕರು, ಸ್ಟೇಷನ್‌ ಮಾಸ್ಟರ್‌ಗಳಿಗೆ ಈ ಬಗ್ಗೆ ಸೂಕ್ತ ತರಬೇತಿಯೇ ಇರಲಿಲ್ಲ.

ಹೀಗಾಗಿ ಆಟೋಮೆಟಿಕ್‌ ಸಿಗ್ನಲ್‌ ಝೋನ್‌ನಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಕುರಿತು ಸ್ಟೇಷನ್ ಮಾಸ್ಟರ್‌ಗಳು ಮತ್ತು ಚಾಲಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಮತ್ತು ಅಪಘಾತ ತಡೆಯಲು ನೆರವಾಗುವ ಕವಚ್‌ (ಸ್ವಯಂ ರೈಲು ಅಪಘಾತ ತಡೆ ವ್ಯವಸ್ಥೆ) ವ್ಯವಸ್ಥೆ ಅಳವಡಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ