ನವದೆಹಲಿ: ಗುಜರಾತ್ನ ಸೋಮನಾಥ ಮಂದಿರ ಪುನರ್ನಿರ್ಮಾಣದ 75ನೇ ವರ್ಷದ ಅಂಗವಾಗಿ ಬೆಂಗಳೂರು ಮೂಲದ ಕನ್ನಡಿಗ ಎ.ಕೆ. ದಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದಾರೆ.
ಇದಕ್ಕೆ ಖುದ್ದು ಮೋದಿಯವರೇ ಪ್ರತಿಕ್ರಿಯಿಸಿದ್ದು, ಸೋಮನಾಥದ ಪರಂಪರೆಯನ್ನು ಶ್ಲಾಘಿಸಿ, ದಾಸ್ ಅವರ ದೇಶಭಕ್ತಿಯನ್ನು ಕೊಂಡಾಡಿದ್ದಾರೆ. ಬೆಂಗಳೂರಿನ ಎ.ಕೆ. ದಾಸ್ ಅವರು ಮೋದಿಯವರಿಗೆ ಬರೆದು ಸೋಮನಾಥ ಮಂದಿರದ ಪ್ರಾಮುಖ್ಯ ಹಾಗೂ ವಿಕಸಿತ ಭಾರತ ಪರಿಕಲ್ಪನೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು. ಅದಕ್ಕ ಮೋದಿ ಜೂ.24ರಂದು ಪತ್ರಮುಖೇನವೇ ಪ್ರತಿಕ್ರಿಯೆ ನೀಡಿದ್ದಾರೆ.
ಅದರಲ್ಲಿ ಮೋದಿ, ‘ಸೋಮನಾಥ ದೇವಾಲಯದ ಪುನರ್ನಿರ್ಮಾಣ ಮತ್ತು ಜ್ಯೋತಿರ್ಲಿಂಗದ ಮರುಸ್ಥಾಪನೆ ಸ್ವತಂತ್ರ ಭಾರತದ ಇತಿಹಾಸದ ಒಂದು ನಿರ್ಣಾಯಕ ಮೈಲುಗಲ್ಲು. ಇದು ರಾಷ್ಟ್ರದ ನಾಗರಿಕ ಪ್ರಜ್ಞೆಯ ಪುನರುತ್ಥಾನದ ಸಂಕೇತ. ಸೋಮನಾಥವು ಭಾರತದ ಆಧ್ಯಾತ್ಮಿಕ ಪರಂಪರೆ, ಸ್ವಾಭಿಮಾನ ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಕಾಲಾತೀತ ನಿದರ್ಶನ’ ಎಂದು ಬಣ್ಣಿಸಿದ್ದಾರೆ.
‘ಶತಮಾನಗಳಿಂದ ಸೋಮನಾಥ ದೇವಾಲಯವು ಪದೇ ಪದೇ ಆಕ್ರಮಣಗಳನ್ನು ಎದುರಿಸಿದ್ದರೂ, ಅಸಂಖ್ಯಾತ ಭಕ್ತರ ಅಚಲ ನಂಬಿಕೆಯು ಅದರ ಚೈತನ್ಯವನ್ನು ಎಂದಿಗೂ ಮರೆಯಾಗದಂತೆ ನೋಡಿಕೊಂಡಿತು. ಈ ಪವಿತ್ರ ಪರಂಪರೆಯನ್ನು ಪುನರ್ನಿರ್ಮಿಸಿದ ಮತ್ತು ಸಂರಕ್ಷಿಸಿದವರಿಗೆ ಗೌರವ ನಮನಗಳು. ವಿಕಸಿತ ಭಾರತವನ್ನು ನಿರ್ಮಿಸುವ ಆಕಾಂಕ್ಷೆಯು ಸೋಮನಾಥದ ಪುನರ್ನಿರ್ಮಾಣಕ್ಕೆ ಮಾರ್ಗದರ್ಶನ ನೀಡಿದ ಅದೇ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಪ್ರೇರಿತವಾಗಿದೆ’ ಎಂದು ತಿಳಿಸಿದ್ದಾರೆ.
ಪತ್ರದಲ್ಲಿ ದಾಸ್ ಅವರ ದೇಶಭಕ್ತಿಯನ್ನು ಶ್ಲಾಘಿಸಿದ ಪ್ರಧಾನಿ, ಅವರ ಉತ್ತಮ ಆರೋಗ್ಯ, ಸಂತೋಷ ಮತ್ತು ರಾಷ್ಟ್ರಕ್ಕೆ ನಿರಂತರ ಸೇವೆಗಾಗಿ ಶುಭ ಹಾರೈಸಿದ್ದಾರೆ. ==
ದೇವಾಲಯ 11ನೇ ಶತಮಾನದಿಂದ ಹಿಡಿದು ಹಲವು ಬಾರಿ ಘಜ್ನಿ ಮೊದಲಾದ ದಾಳಿಕೋರರಿಂದ ಧ್ವಂಸಗೊಂಡಿತ್ತು. 1947ರ ನ.12ರಂದು ಸರ್ದಾರ್ ವಲ್ಲಭಭಾಯಿ ಪಟೇಲರು ದೇವಾಲಯದ ಪುನರ್ನಿರ್ಮಾಣಕ್ಕೆ ಆದೇಶಿಸಿದ್ದರು. ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ 1951ರ ಮೇ 11ರಂದು ದೇವಾಲಯದಲ್ಲಿ ಶಿವಲಿಂಗದ ಪ್ರಾಣಪ್ರತಿಷ್ಠೆ ನೆರವೇರಿತು.