ನವದೆಹಲಿ: ನಟಿ ಕರಿಷ್ಮಾ ಕಪೂರ್ರ ಮಾಜಿ ಪತಿ ಸಂಜಯ್ ಕಪೂರ್ ಸಾವಿನ ವಿಚಾರದಲ್ಲಿ ಅತ್ತೆ ಸೊಸೆ ಕಲಹ ಮುಂದುವರೆದಿದ್ದು, ‘ತಮ್ಮ ಮಗನನ್ನು 30 ಸಾವಿರ ಕೋಟಿ ರು. ಆಸ್ತಿಗಾಗಿ ಹತ್ಯೆ ಮಾಡಲಾಗಿದೆ’ ಎಂದು ಸಂಜಯ್ರ ತಾಯಿ ರಾಣಿ ಕಪೂರ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರ ಪರೋಕ್ಷವಾಗಿ ತಮ್ಮ ಹಾಲಿ ಸೊಸೆ ಪ್ರಿಯಾ ಸಚ್ದೇವ್ ಅವರ ಕಡೆಗೆ ಬೊಟ್ಟು ಮಾಡಿದ್ದಾರೆ.
ಸಂಜಯ್ ಕಪೂರ್ ಇತ್ತೀಚೆಗೆ ಲಂಡನ್ನಲ್ಲಿ ಪೋಲೋ ಆಡುವ ವೇಳೆ ಸಾವನ್ನಪ್ಪಿದ್ದರು. ಈ ಹಿನ್ನೆಲೆ ರಾಣಿ ಕಪೂರ್ ಬ್ರಿಟನ್ ಪೊಲೀಸರಿಗೆ ಪತ್ರ ಬರೆದಿದ್ದು ಮಗನ ಸಾವಿನ ಹಿಂದೆ ಕೊಲೆಯ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ. ‘ಮಗನ ಕೊಲೆ ನಡೆದಿದೆ ಎಂಬುದಕ್ಕೆ ಸಂಬಂಧಿಸಿದ ಪುರಾವೆಗಳಿವೆ. ಆತನ ಸಾವು ಅಕಸ್ಮಿಕವಲ್ಲ. ಕೊಲೆ ಪ್ರಚೋದನೆ, ವಂಚನೆ ಸೇರಿದಂತೆ ಅಪರಾಧ ಕೃತ್ಯಗಳನ್ನು ಒಳಗೊಂಡಿರಬಹುದು.
ಅವರ ಸಾವಿನಿಂದ ಆರ್ಥಿಕ ಲಾಭಗಳಿಸಲು ಬಯಸುವವರು ಕೃತ್ಯ ಎಸಗಿರಬಹುದು. ಹೀಗಾಗಿ ಬ್ರಿಟನ್ ಕಾನೂನಿನಡಿ ಪ್ರಕರಣ ದಾಖಲಿಸಿಕೊಂಡು ಕ್ರಿಮಿನಲ್ ತನಿಖೆ ಪ್ರಾರಂಭಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.