ಸಂಸತ್ತಲ್ಲೂ ಕರ್ನಾಟಕದ ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣ ಕುರಿತು ತೀವ್ರ ಗದ್ದಲ!

KannadaprabhaNewsNetwork | Updated : Jul 27 2024, 06:23 AM IST

ಸಾರಾಂಶ

ಕರ್ನಾಟಕದ ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಹಾಗೂ ಮೈಸೂರು ಮುಡಾ ನಿವೇಶನ ಹಗರಣಗಳು ಸಂಸತ್ತಿನ ಉಭಯ ಸದನದಲ್ಲಿ ಶುಕ್ರವಾರ ಪ್ರತಿಧ್ವನಿಸಿ ಕಲಾಪಕ್ಕೆ ಅಡ್ಡಿ ಮಾಡಿದ ಪ್ರಸಂಗಗಳು ನಡೆದಿವೆ.

 ನವದೆಹಲಿ: ಕರ್ನಾಟಕದ ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಹಾಗೂ ಮೈಸೂರು ಮುಡಾ ನಿವೇಶನ ಹಗರಣಗಳು ಸಂಸತ್ತಿನ ಉಭಯ ಸದನದಲ್ಲಿ ಶುಕ್ರವಾರ ಪ್ರತಿಧ್ವನಿಸಿ ಕಲಾಪಕ್ಕೆ ಅಡ್ಡಿ ಮಾಡಿದ ಪ್ರಸಂಗಗಳು ನಡೆದಿವೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರು ಈ ವಿಷಯ ಪ್ರಸ್ತಾಪಿಸಲು ಮುಂದಾದಾಗ ಸಭಾಪತಿಗಳು ಅದನ್ನು ತಿರಸ್ಕರಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು.

ರಾಜ್ಯಸಭೆಯಲ್ಲಿ ಈ ಎರಡೂ ಹಗರಣಗಳನ್ನು ಪ್ರಸ್ತಾಪಿಸಿದ ಬಿಜೆಪಿಯ ಈರಣ್ಣ ಕಡಾಡಿ, ಬ್ರಿಜ್ ಲಾಲ್, ನರೇಶ್ ಬನ್ಸಲ್ ಮತ್ತು ಸುಧಾಂಶು ತ್ರಿವೇದಿ, ಎಲ್ಲ ಕಾರ್ಯಕಲಾಪ ಬದಿಗೊತ್ತಿ ಕರ್ನಾಟಕದ ಮುಡಾ ಹಾಗೂ ವಾಲ್ಮೀಕಿ ಹಗರಣಗಳ ಬಗ್ಗೆ ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ಕೋರಿದರು. ಆದರೆ ಈ ನೋಟಿಸ್‌ಗಳನ್ನು ಸಭಾಪತಿ ಜಗದೀಪ್ ಧನಕರ್ ತಿರಸ್ಕರಿಸಿದರು. ಈ ವೇಳೆ ಬಿಜೆಪಿ-ಕಾಂಗ್ರೆಸ್‌ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಆದರೂ ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ವಾಲ್ಮೀಕಿ ನಿಗಮ ಭ್ರಷ್ಟಾಚಾರದ ಕುರಿತು ಕಡಾಡಿ ಮಾತನಾಡಿದರು.

ಲೋಕಸಭೆಯಲ್ಲೂ ಗದ್ದಲ:

ಈ ಎರಡೂ ಹಗರಣಗಳು ಲೋಕಸಭೆಯಲ್ಲೂ ಪ್ರತಿಧ್ವನಿಸಿದವು. ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರು, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವರೊಬ್ಬರು ಹಗರಣದಲ್ಲಿ ಶಾಮೀಲಾಗಿದ್ದಾರೆ’ ಎಂದು ವಾಲ್ಮೀಕಿ ನಿಗಮ ಹಗರಣವನ್ನು ಪ್ರಸ್ತಾಪಿಸಿದರು. ಸ್ಪೀಕರ್ ಕೂಡ ಮೋಹನ್ ಅವರಿಗೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ. ಈ ವೇಳೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಬಿಜೆಪಿಯ ಹಿರಿಯ ಸಂಸದ ಅನುರಾಗ್ ಠಾಕೂರ್ ಅವರು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗ ಗದ್ದಲ ಮುಂದುವರಿದ ಕಾರಣ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 12.30ಕ್ಕೆ ಮುಂದೂಡಿದರು.

ಗದ್ದಲ ಮುಂದುವರಿದ ಕಾರಣ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 12.30ಕ್ಕೆ ಮುಂದೂಡಿದರು.

Share this article