ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗಿರುವ ರಾಮಮಂದಿರ ಒಂದು ಐತಿಹಾಸಿಕ ಸಾಧನೆ ಎಂದು ಹೇಳುವ ಗೊತ್ತುವಳಿಯನ್ನು ಸ್ಪೀಕರ್ ಓಂ ಬಿರ್ಲಾ ಲೋಕಸಭೆಯಲ್ಲಿ ಶನಿವಾರ ಮಂಡಿಸಿದ್ದು, ಇದನ್ನು ಅಂಗೀಕರಿಸಲಾಗಿದೆ.
ಲೋಕಸಭೆ ಅಧಿವೇಶನ ಕೊನೆ ದಿನದಂದು ರಾಮಮಂದಿರದ ಕುರಿತಾಗಿ ಸುಮಾರು 4 ಗಂಟೆಗಳ ಕಾಲ ನಡೆದ ಚರ್ಚೆಯ ಬಳಿಕ ಈ ಗೊತ್ತುವಳಿಯನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು.
ಈ ವೇಳೆ ರಾಮಮಂದಿರ ನಿರ್ಮಾಣ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ಐತಿಹಾಸಿಕ ಸಾಧನೆ ಎಂದು ಅವರು ಬಣ್ಣಿಸಿದರು.
ಅಯೋಧ್ಯೆಯಲ್ಲಿನ ರಾಮಮಂದಿರವು ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣದ ಹೊಸ ಯುಗಕ್ಕೆ ನಾಂದಿ ಹಾಡಿದೆ. ಇದು ಏಕ ಭಾರತ ಶ್ರೇಷ್ಠ ಭಾರತ ಪರಿಕಲ್ಪನೆಗೆ ಉತ್ತಮ ಉದಾಹರಣೆ ಎಂದು ಅವರು ಹೇಳಿದರು.