ಕೇರಳ: ಎಲ್‌ಡಿಎಫ್‌, ಯುಡಿಎಫ್‌ ನಡುವೆ ಬೇರೂರಲು ಬಿಜೆಪಿ ಪ್ರಯತ್ನ

KannadaprabhaNewsNetwork |  
Published : Mar 30, 2024, 12:52 AM IST
ರಾಹುಲ್‌ | Kannada Prabha

ಸಾರಾಂಶ

ದಶಕಗಳಿಂದ ರಾಜ್ಯದಲ್ಲಿ ಬಲವಾಗಿ ಬೇರೂರಿರುವ ಸಿಪಿಎಂ ನೇತೃತ್ವದ ಲೆಫ್ಟ್‌ ಡೆಮಾಕ್ರೆಟಿಕ್‌ ಫ್ರಂಟ್‌ (ಎಲ್‌ಡಿಎಫ್‌) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್‌ ಡೆಮಾಕ್ರೆಟಿಕ್‌ ಫ್ರಂಟ್‌ (ಯುಡಿಎಫ್‌), ಈ ಬಾರಿಯೂ ರಾಜ್ಯದಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸುವ ಹುಮಸ್ಸಿನಲ್ಲಿವೆ.

ತಿರುವನಂತಪುರ: ದಶಕಗಳಿಂದ ರಾಜ್ಯದಲ್ಲಿ ಬಲವಾಗಿ ಬೇರೂರಿರುವ ಸಿಪಿಎಂ ನೇತೃತ್ವದ ಲೆಫ್ಟ್‌ ಡೆಮಾಕ್ರೆಟಿಕ್‌ ಫ್ರಂಟ್‌ (ಎಲ್‌ಡಿಎಫ್‌) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್‌ ಡೆಮಾಕ್ರೆಟಿಕ್‌ ಫ್ರಂಟ್‌ (ಯುಡಿಎಫ್‌), ಈ ಬಾರಿಯೂ ರಾಜ್ಯದಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸುವ ಹುಮಸ್ಸಿನಲ್ಲಿವೆ.ಮತ್ತೊಂದೆಡೆ ನರೇಂದ್ರ ನಾಯಕತ್ವದಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಈ ಬಾರಿ ರಾಜ್ಯದಲ್ಲಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ ಮೈತ್ರಿಕೂಟಗಳಿಗೆ ಪ್ರಬಲ ಸ್ಪರ್ಧೆ ಒಡ್ಡಲು ಮುಂದಾಗಿರುವುದು ಈ ಬಾರಿಯ ಹೊಸ ಬೆಳವಣಿಗೆ.ಹೀಗಾಗಿಯೇ ದಶಕಗಳಿಂದ ದ್ವಿಪಕ್ಷೀಯ ಹೋರಾಟಕ್ಕೆ ಸಾಕ್ಷಿಯಾಗಿದ್ದ ರಾಜ್ಯದಲ್ಲಿ ಇದೀಗ ಹಲವು ಕ್ಷೇತ್ರಗಳಲ್ಲಿ ತ್ರಿಕೋನ ಹೋರಾಟ ಕಾಣಸಿಗುವಂತಾಗಿದೆ. ಪರಿಣಾಮ ಏ.26ರಂದು ಒಂದೇ ಹಂತದಲ್ಲಿ 20 ಸ್ಥಾನಗಳಿಗೆ ನಡೆವ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ.

ಘಟನಾಘಟಿಗಳ ಸ್ಪರ್ಧೆ: ಈ ಬಾರಿ ವಯನಾಡಿನಿಂದ ರಾಹುಲ್‌ ಗಾಂಧಿ,ತಿರುವನಂತಪುರದಿಂದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನ ಶಶಿ ತರೂರ್‌, ಕೇಂದ್ರ ಸಚಿವ ಮುರಳೀಧರನ್‌ ಬಿಜೆಪಿಯ ಸುರೇಶ್‌ ಗೋಪಿ, ಕೇರಳದಲ್ಲಿ ಬಿಜೆಪಿಯ ಮುಸ್ಲಿಂ ಮುಖವಾಣಿ ಅಬ್ದುಲ್‌ ಸಲಾಂ, ಕಾಂಗ್ರೆಸ್‌ನ ಸುಧಾಕರನ್‌ ಮೊದಲಾದವರು ಕಣದಲ್ಲಿದ್ದಾರೆ.

ಸ್ಪರ್ಧಾ ಕಣ ಹೇಗಿದೆ:

ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ ರಾಹುಲ್‌ ಗಾಂಧಿ ಸ್ಪರ್ಧೆ ಪ್ರಮುಖ ಬಲ. ಕಳೆದ ಬಾರಿ ರಾಜ್ಯದ 20ರ ಪೈಕಿ 19 ಸ್ಥಾನ ಯುಡಿಎಫ್‌ ಗೆದ್ದಿತ್ತು. ಯುಡಿಎಫ್‌, ರಾಜ್ಯದಲ್ಲಿ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ವಿರುದ್ಧ ಸತತ ಹೋರಾಟ ರೂಪಿಸುತ್ತಲೇ ಬಂದಿದೆ. ಆದರೆ ಇತ್ತೀಚೆಗೆ ಕಾಂಗ್ರೆಸ್‌ನ ನಾಯಕರು ಚುನಾವಣೆಗೆ ಮುನ್ನ ಬಿಜೆಪಿ ಪಾಳಯ ಸೇರಿದ್ದು ಪಕ್ಷಕ್ಕೆ ಆದ ಹಿನ್ನಡೆ. ಇನ್ನು ಸಿಎಂ ಪಿಣರಾಯಿ ವಿಜಯನ್‌ ಸೇರಿದಂತೆ ಪ್ರಬಲವಾದ ಸ್ಥಳೀಯ ನಾಯಕತ್ವ ಮೈತ್ರಿಕೂಟದ ಪ್ರಮುಖ ಅಸ್ತ್ರ. ಅಲ್ಪಸಂಖ್ಯಾತರ ಮತ, ವಿಶೇಷವಾಗಿ ಮುಸ್ಲಿಮರ ಮತ ಸೆಳೆಯುವಲ್ಲಿ ಮೈತ್ರಿಕೂಟ ಯಶಸ್ವಿಯಾಗಿದೆ. 7 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವುದು ಮೈತ್ರಿಕೂಟದ ಪಾಲಿಗೆ ಇನ್ನೊಂದು ಬೋನಸ್‌. ಆದರೆ ಹಲವು ಕ್ಷೇತ್ರಗಳಲ್ಲಿ ಪ್ರಬಲ ಯುವ ಅಭ್ಯರ್ಥಿಗಳ ಕೊರತೆ ಮೈತ್ರಿಕೂಟವನ್ನು ಕಾಡುತ್ತಿದೆ. ಸಿಪಿಎಂ ವಿದ್ಯಾರ್ಥಿ ಸಂಘಟನೆಯ ಕ್ಯಾಂಪಸ್‌ ಹಿಂಸಾಚಾರ ಪಕ್ಷದ ಇಮೇಜ್‌ಗೆ ಮಸಿ ಬಳಿದಿದೆ. ಸಿಎಂ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪ ಪಕ್ಷಕ್ಕೆ ಮುಳುವಾಗಬಹುದು. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮ್ಯಾಜಿಕ್‌ ಮಾಡುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಇಬ್ಬರು ಕೇಂದ್ರ ಸಚಿವರು, ಮೂರು ಮಹಿಳಾ ಅಭ್ಯರ್ಥಿಗಳ ಕಣಕ್ಕಿಳಿಸಿರುವುದು ಪ್ಲಸ್‌ಪಾಯಿಂಟ್‌. ಸಾಕಷ್ಟು ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಮತದಾರರು ಇನ್ನೂ ಬಿಜೆಪಿ ಬಗ್ಗೆ ವಿಶ್ವಾಸ ಹೊಂದದೇ ಇರುವುದು. ರಾಜ್ಯಮಟ್ಟದಲ್ಲಿ ಪ್ರಬಲ ನಾಯಕರ ಕೊರತೆ ಪಕ್ಷವನ್ನು ಬಹುವಾಗಿ ಕಾಡುತ್ತಿದೆ. ಇದು ಬಿಜೆಪಿ ಪಾಲಿಗೆ ಹಿನ್ನಡೆ.

ಪ್ರಮುಖ ಕ್ಷೇತ್ರಗಳುಕಾಸರಗೋಡು, ವಯನಾಡು, ತಿರುವನಂತಪುರ, ಕಲ್ಲಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್‌ಪ್ರಮುಖ ಅಭ್ಯರ್ಥಿಗಳುರಾಹುಲ್‌ ಗಾಂಧಿ, ಶಶಿ ತರೂರ್‌, ರಾಜೀವ್‌ ಚಂದ್ರಶೇಖರ್‌, ಮುರಳೀಧರನ್‌, ಅಬ್ದುಲ್‌ ಸಲಾಂ. ಸುರೇಶ್‌ ಗೋಪಿ, ಸುಧಾಕರನ್‌.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ