ಸುರೇಶ್‌ಗೆ ವಿಪಕ್ಷ ನಾಯಕ ಸ್ಥಾನ ಕೊಡಿ: ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

KannadaprabhaNewsNetwork | Updated : Jun 23 2024, 04:49 AM IST

ಸಾರಾಂಶ

‘ಲೋಕಸಭೆಗೆ 8 ಬಾರಿ ಆಯ್ಕೆ ಆಗಿದ್ದ  ಕಾಂಗ್ರೆಸ್‌ ಸಂಸದ ಕೋಡಿಕುನ್ನಿಲ್‌ ಸುರೇಶ್‌ ಅವರನ್ನೇಕೆ ಲೋಕಸಭೆಯ ಹಂಗಾಮಿ ಸ್ಪೀಕರ್‌ ಅನ್ನಾಗಿ ಮಾಡಲಿಲ್ಲ?’ ಎಂಬ ಕಾಂಗ್ರೆಸ್‌ ಪ್ರಶ್ನೆಗೆ ಬಿಜೆಪಿ ತಿರುಗೇಟು ನೀಡಿದೆ.

ತಿರುವನಂತಪುರ: ‘ಲೋಕಸಭೆಗೆ 8 ಬಾರಿ ಆಯ್ಕೆ ಆಗಿದ್ದರ ಕಾಂಗ್ರೆಸ್‌ ಸಂಸದ ಕೋಡಿಕುನ್ನಿಲ್‌ ಸುರೇಶ್‌ ಅವರನ್ನೇಕೆ ಲೋಕಸಭೆಯ ಹಂಗಾಮಿ ಸ್ಪೀಕರ್‌ ಅನ್ನಾಗಿ ಮಾಡಲಿಲ್ಲ?’ ಎಂಬ ಕಾಂಗ್ರೆಸ್‌ ಪ್ರಶ್ನೆಗೆ ಬಿಜೆಪಿ ತಿರುಗೇಟು ನೀಡಿದೆ.

 ‘ನಿಮಗೆ ಸುರೇಶ್‌ ಮೇಲೆ ಅಷ್ಟು ಗೌರವ ಇತ್ತು ಎಂದರೆ ಅವರನ್ನು ವಿಪಕ್ಷ ನಾಯಕನನ್ನಾಗಿ ಮಾಡಿ. ಏಕೆಂದರೆ ಅವರೊಬ್ಬ ದಲಿತ ಮುಖಂಡ’ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್‌ ಟಾಂಗ್‌ ನೀಡಿದ್ದಾರೆ. ‘ಸುರೇಶ್‌ 8 ಬಾರಿ ಸಂಸದ ಆಗಿದ್ದರೂ ಮಧ್ಯೆ 2 ಬಾರಿ ಸೋತಿದ್ದರು. ಹೀಗಾಗಿ ಅವರನ್ನು ಹಂಗಾಮಿ ಸ್ಪೀಕರ್ ಮಾಡಿರಲಿಲ್ಲ. ಬದಲಾಗಿ 7 ಬಾರಿ ಸತತವಾಗಿ ಗೆದ್ದಿದ್ದ ಭರ್ತೃಹರಿ ಮಹ್ತಬ್‌  ರನ್ನು ಹಾಂಗಾಮಿ ಸ್ಪೀಕರ್ ಮಾಡಿದ್ದೇವೆ’ ಎಂದು ಶನಿವಾರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು.

ಹಂಗಾಮಿ ಸಭಾಧ್ಯಕ್ಷ ಸಮಿತಿಯಲ್ಲಿ ಇರಲು ವಿಪಕ್ಷ ಸಂಸದರ ನಕಾರ 

ನವದೆಹಲಿ: ಲೋಕಸಭೆಯ ಹಂಗಾಮಿ ಸಭಾಪತಿಯಾಗಿ ಬಿಜೆಪಿಯ ಭರ್ತೃಹರಿ ಮಹ್ತಬ್‌ ಅವರನ್ನು ಆಯ್ಕೆ ಮಾಡಿದ ಕ್ರಮಕ್ಕೆ ಅಸಮಾಧಾನಗೊಂಡ ವಿಪಕ್ಷ ಸಂಸದರು, ಹಂಗಾಮಿ ಸಭಾಧ್ಯಕ್ಷ ಸಮಿತಿಯ ಇರಲು ನಿರಾಕರಿಸಿದ್ದಾರೆ.

ಲೋಕಸಭೆಗೆ ಹೊಸ ಸಂಸದರಿಗೆ ಪ್ರಮಾಣ ವಚನ ಬೋಧಿಸಲು ಹಂಗಾಮಿ ಸ್ಪೀಕರ್ ಆಗಿ ಮಹ್ತಬ್ ಅವರನ್ನು ಇತ್ತೀಚೆಗೆ ನೇಮಿಸಲಾಗಿತ್ತು. ಅವರ ಅನುಪಸ್ಥಿತಿಯಲ್ಲಿ ಕೆಲಸ ಮಾಡಲು ಪ್ರತಿಪಕ್ಷ ಸಂಸದರಾದ ಕೆ. ಸುರೇಶ್, ಟಿ,ಆರ್. ಬಾಲು ಮತ್ತು ಸುದೀಪ್‌ ಬಂಡೋಪಾಧ್ಯಾಯ ಅವರನ್ನು ಸ್ಪೀಕರ್‌ ಸಮಿತಿಗೆ ನೇಮಿಸಲಾಗಿತ್ತು. 

ಆದರೆ ಈಗ ಈ ಮೂಬರೂ ತಾವು ಕಾರ್ಯನಿರ್ವಹಿಸುವುದಿಲ್ಲ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.8 ಬಾರಿ ಆಯ್ಕೆ ಆಗಿರುವ ಹಿರಿಯ ಸಂಸದ ಕೆ. ಸುರೇಶ್‌ ಅವರನ್ನು ಆಯ್ಕೆ ಮಾಡದೆ ಬಿಜೆಪಿ ಸಂಸದೀಯ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬ ಕಾಂಗ್ರೆಸ್‌ನ ಆರೋಪಿಸಿತ್ತು.

 ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ‘ನಾವು ಸಂಪ್ರದಾಯವನ್ನು ಅನುಸರಿಸಿದ್ದೇವೆ. ಸುರೇಶ್‌ 8 ಬಾರಿ ಸತತ ಆಯ್ಕೆ ಆಗಿಲ್ಲ. 2 ಬಾರಿ ಸೋತಿದ್ದರು. ಹೀಗಾಗಿ 7 ಬಾರಿ ಸತತ ಆಯ್ಕೆ ಆಗಿರುವ ಮಹ್ತಬ್‌ರನ್ನು ನೇಮಿಸಿದ್ದೆವು’ ಎಂದು ಹೇಳಿದ್ದರು.

Share this article