ಆಲಮಟ್ಟಿ ಜಲಾಶಯವನ್ನು ಎತ್ತರಿಸುವ ಕರ್ನಾಟಕದ ಯೋಜನೆಯ ವಿರುದ್ಧ ಸುಪ್ರೀಂ ಕೋರ್ಟ್ನ ಮಧ್ಯಪ್ರವೇಶಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲಿದೆ ಎಂದು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಹೇಳಿದ್ದಾರೆ.
ಪಿಟಿಐ ಮುಂಬೈ
ಆಲಮಟ್ಟಿ ಜಲಾಶಯವನ್ನು ಎತ್ತರಿಸುವ ಕರ್ನಾಟಕದ ಯೋಜನೆಯ ವಿರುದ್ಧ ಸುಪ್ರೀಂ ಕೋರ್ಟ್ನ ಮಧ್ಯಪ್ರವೇಶಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲಿದೆ ಎಂದು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಹೇಳಿದ್ದಾರೆ. ಈ ಮೂಲಕ ಗಡಿ ತಂಟೆ ಬಳಿಕ, ಈ ಹಿಂದಿನ ಅಣೆಕಟ್ಟೆ ಎತ್ತರ ಹೆಚ್ಚಳದ ವಿರುದ್ಧ ಕ್ಯಾತೆಯನ್ನು ಮತ್ತೆ ಮಹಾರಾಷ್ಟ್ರ ಆರಂಭಿಸಿದೆ.
ಮಂಗಳವಾರ ವಿಧಾನಪರಿಷತ್ತಿನಲ್ಲಿ, ‘ಜಲಾಶಯವನ್ನು ಎತ್ತರಿಸುವ ಕರ್ನಾಟಕದ ಯೋಜನೆಗೆ ಮಹಾರಾಷ್ಟ್ರ ವಿರೋಧ ವ್ಯಕ್ತಪಡಿಸಿದೆಯೇ’ ಎಂಬ ಎನ್ಸಿಪಿ (ಶರದ್ ಬಣ) ನಾಯಕ ಅರುಣ್ ಲಾಡ್ ಅವರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪಾಟೀಲ್, ‘ಕರ್ನಾಟಕದ ಯೋಜನೆಯನ್ನು ರಾಜ್ಯ ಸರ್ಕಾರ ನಿರಂತರವಾಗಿ ವಿರೋಧಿಸುತ್ತಿದೆ. ಡ್ಯಾಂ ಎತ್ತರಿಸುವಿಕೆಗೆ ಅನುಮತಿಸುವ ಮೊದಲು ಮಹಾರಾಷ್ಟ್ರದ ಕಳವಳವನ್ನು ಪರಿಗಣಿಸುವ ಬಗ್ಗೆ ಸುಪ್ರೀಂ ಕೋರ್ಟ್ಗೆ ಶೀಘ್ರವೇ ಮಧ್ಯಂತರ ಅರ್ಜಿ ಸಲ್ಲಿಸುತ್ತೇವೆ’ ಎಂದರು.
ಮಹಾರಾಷ್ಟ್ರಕ್ಕೆ ಸಮಸ್ಯೆ ಏಕೆ?:
ಲಾಲ್ ಬಹಾದ್ದೂರ್ ಶಾಸ್ತ್ರಿ ಡ್ಯಾಂ ಎಂದು ಅಧಿಕೃತವಾಗಿ ಕರೆಯಲ್ಪಡುವ ಈ ಜಲಾಶಯವು, ಉತ್ತರ ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಜಲವಿದ್ಯುತ್ ಯೋಜನೆಯಾಗಿದೆ.
2008ರಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ ಹೊರಡಿಸಿದ ತೀರ್ಪಿನಲ್ಲಿ, ಜಲಾಶಯದ ಎತ್ತರವನ್ನು 524.26 ಮೀ. ಎತ್ತರಿಸಲು ಅನುಮತಿಸಲಾಗಿತ್ತು. ಆದರೆ ಇದರ ಎತ್ತರ ಹೆಚ್ಚಿಸಿದರೆ ಕರ್ನಾಟಕ ಹೆಚ್ಚು ನೀರು ಸಂಗ್ರಹ ಮಾಡುತ್ತದೆ. ಇದರಿಂದ ತನ್ನ ಕೊಲ್ಹಾಪುರ ಹಾಗೂ ಸಾಂಗ್ಲಿಯಲ್ಲಿ ಪ್ರವಾಹ ಸೃಷ್ಟಿ ಆಗಬಹುದು ಎಂಬುದು ಮಹಾರಾಷ್ಟ್ರದ ಆತಂಕ. ಆದ್ದರಿಂದಲೇ ಎರಡೂ ರಾಜ್ಯಗಳ ನಡುವೆ ಹಲವು ವರ್ಷಗಳಿಂದ ಸಂಘರ್ಷದ ವಿಷಯವಾಗಿ ಉಳಿದಿದೆ. ಹೀಗಾಗಿ ಎತ್ತರ ಹೆಚ್ಚಳಕ್ಕೆ ತಡೆ ಕೋರಿ, ಮಹಾರಾಷ್ಟ್ರ ಸುಪ್ರೀಂ ಮೊರೆ ಹೋಗಲು ನಿರ್ಧರಿಸಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.