ಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿದ್ದ ಕಾರನ್ನು ಅಡ್ಡಗಟ್ಟಿದ ಪ್ರತಿಭಟನಾಕಾರರು, ಅದಕ್ಕೆ ಮಣ್ಣು ಮೆತ್ತಿ ಕಲ್ಲೆಸೆದ ಘಟನೆ ಉತ್ತರ 24 ಪರಗಣ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಪೊಲೀಸ್ ವಶದಲ್ಲಿ ಮೃತಪಟ್ಟಿದ್ದ ಟಿಎಂಸಿ ಕಾರ್ಯಕರ್ತರೊಬ್ಬರ ಪರಿವಾರದವರನ್ನು ಭೇಟಿಯಾಗಲು ದೀದಿ ಹೊರಟಿದ್ದರು. ಈ ವೇಳೆ ಅವರು ಶಾಂತಿ ಕದಡಲು ಬಂದಿದ್ದಾರೆ ಎಂದು ಆರೋಪಿಸಿದ ಜನ, ‘ಕಳ್ಳಿ ಕಳ್ಳಿ’ ಎನ್ನುತ್ತಾ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ, ‘ನನ್ನ ಕಾರಿನ ಮೇಲೆ ಕಲ್ಲು, ಶೂ, ಮಣ್ಣು ಎಸೆದು ದಾಳಿ ಮಾಡಲಾಯಿತು. ಇದೊಂದು ಪಿತೂರಿಯಾಗಿದೆ. ನಾನು ಇಲ್ಲಿಗೆ ಬರುತ್ತೇನೆಂದು ಮಾಹಿತಿ ನೀಡಿದ್ದ ಹೊರತಾಗಿಯೂ ಪೊಲೀಸರು ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ನಾನು ಕಾರಿನ ಕಿಟಕಿಯ ಗಾಜು ಮುಚ್ಚದಿದ್ದರೆ ಸತ್ತೇ ಹೋಗುತ್ತಿದ್ದೆ. ಇಡೀ ರಾಜ್ಯವೀಗ ಗೂಂಡಾಗಳ ನಿಯಂತ್ರಣಕ್ಕೆ ಒಳಪಟ್ಟಿದೆ’ ಎಂದು ಕಿಡಿ ಕಾರಿದ್ದಾರೆ.