ನವದೆಹಲಿ: ರಾಮಮಂದಿರಲ್ಲಿ ಪ್ರಾಣಪ್ರತಿಷ್ಠಾಪನೆಯನ್ನು ವಿರೋಧಿಸಿದ್ದಕ್ಕೆ ಮನೆ ಖಾಲಿ ಮಾಡುವಂತೆ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮತ್ತು ಅವರ ಪುತ್ರಿ ಸುರನ್ಯಾ ಅಯ್ಯರ್ ಅವರಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.
ದೆಹಲಿಯ ಜಂಗ್ಪುರದಲ್ಲಿ ಅಯ್ಯರ್ ಕುಟುಂಬ ವಾಸವಿದ್ದು, ಮನೆ ಖಾಲಿ ಮಾಡುವಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ನೋಟಿಸ್ ನೀಡಿದೆ.
ಅಯ್ಯರ್ ನೀಡಿರುವ ಹೇಳಿಕೆ, ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡುವುದಲ್ಲದೇ, ಇದು ಕಾಲೋನಿಯಲ್ಲಿರುವ ಶಾಂತಿಯನ್ನು ಕದಡುತ್ತದೆ.
ನೀವು ರಾಮಮಂದಿರದ ಬಗ್ಗೆ ನೀಡಿರುವ ಹೇಳಿಕೆಯಿಂದಾಗಿ ನೀವು ಈ ಕಾಲೋನಿಯನ್ನು ತೊರೆಯುವಂತೆ ನಾವು ನಿಮಗೆ ತಿಳಿಸುತ್ತೇವೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
‘ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವಿರೋಧಿಸಿ ನಾನು ಉಪವಾಸ ಕೈಗೊಳ್ಳುತ್ತೇನೆ. ಈ ಉಪವಾಸ ಮುಸ್ಲಿಂ ನಾಗರಿಕರ ಪ್ರೀತಿ ಮತ್ತು ದುಃಖಕ್ಕಾಗಿ’ ಎಂದು ಜ.20ರಂದು ಸುರನ್ಯಾ ಅಯ್ಯರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ರಾಮಮಂದಿರ ನಿರ್ಮಾಣಕ್ಕೆ ಕೆನಡಾ ಕನ್ನಡಿಗ ಸಂಸದ ಆರ್ಯ ಹರ್ಷ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಮತ್ತು ಉದ್ಘಾಟನೆಯು ಕೆನಡಾದ 10 ಲಕ್ಷ ಹಿಂದೂಗಳು ಸೇರಿದಂತೆ ಪ್ರಪಂಚದ 140 ಕೋಟಿ ಹಿಂದೂಗಳಿಗೆ ಹೊಸ ಯುಗದ ಪ್ರಾರಂಭ ಎಂದು ಕೆನಡಾ ಸಂಸದ, ತುಮಕೂರು ಮೂಲದ ಆರ್ಯ ಚಂದ್ರ ಬಣ್ಣಿಸಿದ್ದಾರೆ.
ಕೆನಡಾ ಸಂಸತ್ತಿನಲ್ಲಿ ರಾಮ ಮಂದಿರ ಉದ್ಘಾಟನೆ ಕುರಿತು ಮಾತನಾಡಿದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಲಿಬರಲ್ ಪಕ್ಷದ ಸಂಸದ ಆರ್ಯ, ‘ಹಿಂದೂ ಧರ್ಮದ ಜನ್ಮಸ್ಥಾನವಾಗಿರುವ ಭಾರತವು ತನ್ನ ನಾಗರಿಕತೆಯನ್ನು ಪ್ರಮುಖ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಪುನರ್ನಿರ್ಮಾಣ ಮಾಡುತ್ತಿದೆ.
ಜ.22ರಂದು ಮಂದಿರ ಉದ್ಘಾಟನೆಯ ಭಾವನಾತ್ಮಕ ಕ್ಷಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದ್ದೇನೆ’ ಎಂದು ಹೇಳಿದರು. ಅಲ್ಲದೇ ‘ಶತಮಾನಗಳ ನಿರೀಕ್ಷೆ ಮತ್ತು ಅಪಾರ ತ್ಯಾಗದ ನಂತರ ಅಯೋಧ್ಯೆ ದೇವಾಲಯವನ್ನು ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠೆಯೊಂದಿಗೆ ಉದ್ಘಾಟಿಸಲಾಯಿತು. ಇದು ವಿಗ್ರಹವನ್ನು ದೇವರನ್ನಾಗಿ ಪರಿವರ್ತಿಸಿದೆ’ ಎಂದರು.